ಓಖಿ ಚಂಡಮಾರುತದ ಹೊಡೆತಕ್ಕೆ ನೆಲ ಕಚ್ಚಿದ ರಾಗಿ ಬೆಳೆ
ರಾಮನಗರ, ಡಿಸೆಂಬರ್ 03 : ರಾಮನಗರ ಜಿಲ್ಲೆಯ ರೈತರು ಸತತ 4 ವರ್ಷಗಳ ಕಾಲ ಬರಗಾಲವನ್ನು ಅನುಭವಿಸಿದ್ದಾರೆ. ಆದರೆ, ಈ ಬಾರಿ ಕೂಡಾ ಬಿದ್ದ ಅಲ್ಪ ಮಳೆಗೆ ರೈತರು ಬಿತ್ತನೆ ಮಾಡಿ ಉತ್ತಮ ಬೆಳೆ ಬೆಳೆದಿದ್ದರು. ಈಗ ಆ ಬೆಳೆ ಓಖಿ ಚಂಡಮಾರುತದ ಪಾಲಾಗಿದೆ.
ಚಿತ್ರಗಳು : 'ಓಖಿ' ಚಂಡಮಾರುತದಿಂದ ಮಂಗಳೂರಲ್ಲಿ ಕಡಲ್ಕೊರೆತ
ಓಖಿ ಚಂಡಮಾರುತದ ಪರಿಣಾಮ ಬಿದ್ದ ಮಳೆಗೆ ಕಟಾವು ಮಾಡಿದ್ದ ರಾಗಿ ನೆಲದಲ್ಲಿಯೇ ಮೊಳಕೆಯೊಡೆಯುತ್ತಿದ್ದು, ರೈತರು ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ವರ್ಷ ಬಿದ್ದ ಅಲ್ಪ ಮಳೆಗೆ ಬಿತ್ತನೆ ಮಾಡಿದ್ದ ರೈತರು, ರಾಗಿ ಬೆಳೆಯಲ್ಲಿ ಬಂಪರ್ ಹೊಡೆಯುವ ನಿರೀಕ್ಷೆಯಲ್ಲಿದ್ದರು.
ಬಹುತೇಕ ರೈತರು ಮುಂಗಾರಿನಲ್ಲಿ ಬಿತ್ತನೆ ಮಾಡಿದರೆ, ಸಾಕಷ್ಟು ರೈತರು ಮಳೆರಾಯನ ಚೆಲ್ಲಾಟದಿಂದ ಹಿಂಗಾರಿಗೂ ಮುನ್ನಾ ರಾಗಿಯನ್ನ ಬಿತ್ತನೆ ಮಾಡಿದ್ದರು. ಆದರೆ, ಇದೀಗ ಬೆಳೆದ ಬೆಳೆ ಕೈಗೆ ಬರುವ ಹೊತ್ತಲ್ಲೇ ಮಳೆರಾಯ ಅಡ್ಡಗಾಲು ಹಾಕಿದ್ದಾನೆ.
In Pics:ಓಖಿ ಸೋಕಿದ ಊರೆಲ್ಲ ನೀರೋ ನೀರು, ನೆಲ ನೋಡಿದ ಮರಗಳು
ಚಂಡಮಾರುತದ ಪರಿಣಾಮ ಬಿದ್ದ ಮಳೆಗೆ ರಾಮನಗರ ಜಿಲ್ಲೆಯ ರೈತರು ಬೆಳೆದ ರಾಗಿ ಬೆಳೆ ಇದೀಗ ನೆಲಕಚ್ಚಿದೆ. ಮುಂಗಾರಿನ ಬಿತ್ತನೆಯ ರಾಗಿ ಕಟಾವಾಗಿದ್ದು ನೆಲದಲ್ಲೇ ಮೊಳಕೆಯೊಡೆಯುತ್ತಿದೆ. ಹಿಂಗಾರಿನ ಬೆಳೆಗಳು ಸಹ ನೆಲಕಚ್ಚಿದ್ದು ರೈತರು ಇದೀಗ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ವಿಡಿಯೋ, ಚಿತ್ರಗಳಲ್ಲಿ ಲಕ್ಷದ್ವೀಪದ ಓಖಿ ಅಬ್ಬರ!
ನೆರೆರಾಜ್ಯ ತಮಿಳುನಾಡಿನಲ್ಲಿ ಓಕಿ ಚಂಡಮಾರುತದ ಪರಿಣಾಮದಿಂದ ಮಳೆಯ ಆರ್ಭಟವಿದ್ದರೆ, ತಮಿಳುನಾಡಿನ ಪಕ್ಕದಲ್ಲೇ ಇರೋ ರಾಮನಗರ ಜಿಲ್ಲೆಯಲ್ಲೂ ಕೂಡಾ ಮಳೆರಾಯ ರೈತರ ಬೆಳೆಗಳ ಮೇಲೆ ತನ್ನ ಅಟ್ಟಹಾಸ ತೋರಿದ್ದಾನೆ. ಸಾಲಸೋಲ ಮಾಡಿ ಬೆಳೆ ಬೆಳೆದಿದ್ದ ರೈತರು ದುಪ್ಪಟ್ಟು ಹಣ ನೀಡಿ ರಾಗಿ ಕಟಾವು ಮಾಡಿದ್ದರು.
ಮಳೆಯಿಂದ ಹಾಳಾದ ಬೆಳೆಗೆ ಇದೀಗ ಗೆದ್ದಲು ಹತ್ತಿದ್ದು, ರಾಗಿ ತೆನೆಯೆಲ್ಲಾ ಭೂಮಿ ಪಾಲಾಗಿದೆ. ಇನ್ನು ಕೊಯ್ಲು ಮಾಡದೆ ಇರೋ ಬೆಳೆ ಸಹ ಮಣ್ಣು ಪಾಲಾಗಿದೆ. ಆಗಿರುವಂತಹ ಬೆಳೆ ನಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತರು ಮನವಿ ಮಾಡುತ್ತಿದ್ದಾರೆ.