ಶಿವರಾತ್ರಿಯಂದು ದೇವರಿಗೆ ಮಾಂಸದೂಟ ನೈವೇದ್ಯ, ಸಾಮೂಹಿಕ ಭೋಜನ
ರಾಮನಗರ, ಫೆಬ್ರವರಿ 14: ನಾಡಿನೆಲ್ಲೆಡೆ ಮಂಗಳವಾರ ಶಿವರಾತ್ರಿಯನ್ನು ಸಂಭ್ರಮ, ಭಕ್ತಿಯಿಂದ ಆಚರಿಸಲಾಯಿತು. ಅನೇಕ ಭಕ್ತರು ಉಪವಾಸವಿದ್ದು, ರಾತ್ರಿ ಇಡೀ ಜಾಗರಣೆ ಮಾಡಿ ಹಬ್ಬವನ್ನು ಆಚರಿಸಿದ್ದಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಶಿವರಾತ್ರಿಯನ್ನು ವಿಭಿನ್ನವಾಗಿ ಆಚರಿಸಿದ್ದಾರೆ.
ಗ್ರಾಮದಲ್ಲಿರುವ ದೇವಸ್ಥಾನದ ಆವಣರದಲ್ಲಿ ಮಾಂಸದ ಅಡುಗೆ ಮಾಡಿ, ದೇವರಿಗೆ ಮಾಂಸ ಮತ್ತು ಮದ್ಯ ನೈವೇದ್ಯವಿಟ್ಟು, ಸಾವಿರಾರು ಜನರು ಒಟ್ಟಿಗೆ ಕುಳಿತು ಮಾಂಸದೂಟ ಸವಿದು ಹಬ್ಬವನ್ನು ಆಚರಿಸಿದ್ದಾರೆ.
ಗೆಟ್ ಟುಗೆದರ್ ಹೆಸರಿನಲ್ಲಿ ಮೈಸೂರಿನಲ್ಲಿ ಭರ್ಜರಿ ಬಾಡೂಟ
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ಈ ರೀತಿ ವಿಭಿನ್ನವಾಗಿ ಶಿವರಾತ್ರಿ ಆಚರಿಸಲಾಗಿದೆ. ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನದ ಬಳಿ ಈ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ ತಂದು, ಅಲ್ಲಿಯೇ ಪ್ರಸಾದವನ್ನು ತಯಾರು ಮಾಡಿದ್ದಾರೆ. ಆ ನಂತರ ದೇವರಿಗೆ ಸಮರ್ಪಣೆ ಮಾಡಿ, ಪ್ರಸಾದ ಸೇವಿಸಿದ್ದಾರೆ.
ನೂರಾರು ಕೋಳಿಗಳನ್ನು ಸಮರ್ಪಣೆ ಮಾಡಿದ್ದು, ಎರಡರಿಂದ ಮೂರು ಸಾವಿರ ಭಕ್ತರು ಒಟ್ಟಿಗೆ ಕುಳಿತು ಮಾಂಸದ ಊಟ ಮಾಡಿದ್ದಾರೆ. ಅಂದಹಾಗೆ ಮಂಗಾಡಹಳ್ಳಿ ಗ್ರಾಮದಲ್ಲಿ ಹಲವು ವರ್ಷಗಳಿಂದ ಈ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಭಕ್ತರು ದೇವಸ್ಥಾನಕ್ಕೆ ಬಂದು ಹರಕೆ ಮಾಡಿಕೊಳ್ಳುತ್ತಾರೆ.
ತಮ್ಮ ಇಷ್ಠಾರ್ಥಗಳು ನೆರೆವೇರಿದ ಬಳಿಕ ಶಿವರಾತ್ರಿ ದಿನದಂದು ಹರಕೆ ತೀರಿಸುತ್ತಾರೆ. ಹೀಗೆ ಮಾಡುವುದು ಶಿವರಾತ್ರಿಯಂದು ಮಾತ್ರ ಅಲ್ಲ, ಗೌರಿ ಹಬ್ಬವು ಸೋಮವಾರದಂದು ಬಂದರೆ ಅಂದು ಸಹ ಮಾಂಸದೂಟ ಮಾಡಲಾಗುತ್ತದೆ. ಈ ರೀತಿಯ ವಿಭಿನ್ನ ಆಚರಣೆಯಲ್ಲಿ ಮಂಗಾಡಹಳ್ಳಿ ಗ್ರಾಮದವರು ಮಾತ್ರವಲ್ಲ, ಸುತ್ತಮುತ್ತಲ ಗ್ರಾಮದವರು ಕೂಡ ಪಾಲ್ಗೊಳ್ಳುತ್ತಾರೆ.
ಇನ್ನೂ ಮಂಗಳವಾರ ನಡೆದ ಆಚರಣೆಯಲ್ಲಿ ಒಂದು ಮೇಕೆ ಹಾಗೂ ಮುನ್ನೂರು ಕೆ.ಜಿ. ಚಿಕನ್ ಅನ್ನ ದೇವರಿಗೆ ಅರ್ಪಣೆ ಮಾಡಲಾಗಿದೆ. ಇನ್ನೂ ಈ ರೀತಿಯ ಆಚರಣೆ ನಿಲ್ಲಿಸಬೇಕೆಂದು ಗ್ರಾಮಸ್ಥರು ಚಿಂತನೆ ಕೂಡ ಮಾಡಿದ್ದರು. ಆದರೆ ಕೆಲ ವರ್ಷಗಳ ಹಿಂದೆ ಶಿವರಾತ್ರಿ ದಿನದಂದು ಮಾಂಸದೂಟ ಮಾಡದೆ ಇದ್ದಿದ್ದರಿಂದ ಕೋಳಿಗಳು ದೇವಸ್ಥಾನದ ಒಳಗೆ ನುಗ್ಗಿದ್ದವು. ಹೀಗಾಗಿ ಮತ್ತೆ ಆಚರಣೆ ಮುಂದುವರಿಸಿಕೊಂಡು ಬಂದಿದ್ದಾರೆ.
ಒಟ್ಟಾರೆ ಶಿವರಾತ್ರಿ ದಿನದಂದು ಭಕ್ತರು ವ್ರತ, ಉಪವಾಸ, ಸಸ್ಯಾಹಾರ ಸೇವಿಸುವ ಮೂಲಕ ಹಬ್ಬ ಆಚರಿಸಿದರೆ, ಮಂಗಾಡಹಳ್ಳಿ ಗ್ರಾಮದಲ್ಲಿ ಮಾತ್ರ ಮಾಂಸದೂಟವನ್ನು ಸವಿಯುತ್ತಾರೆ.