ಬಿಡದಿ ನಿತ್ಯಾನಂದ ಶಿಷ್ಯ ಶಿವವಲ್ಲಭನೇನಿಗೆ ಜಾಮೀನು ರಹಿತ ವಾರೆಂಟ್
ರಾಮನಗರ, ಜೂನ್.05 : ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣ ಸಂಬಂಧ ಎರಡನೇ ಆರೋಪಿ ಬಿಡದಿಯ ನಿತ್ಯಾನಂದ ಸ್ವಾಮಿ ಶಿಷ್ಯ ಶಿವವಲ್ಲಭನೇನಿಗೆ ರಾಮನಗರ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಆದೇಶಿಸಿ, ವಿಚಾರಣೆಯನ್ನು ಇದೇ ತಿಂಗಳು 14ಕ್ಕೆ ಮುಂದೂಡಿದೆ.
ಅತ್ಯಾಚಾರ ಹಾಗೂ ಪುರುಷತ್ವ ಪ್ರಕರಣದ ವಿಚಾರಣೆ ಎದುರಿಸಲು ಇಂದು ರಾಮನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಬಿಡದಿಯ ನಿತ್ಯಾನಂದ ಧ್ಯಾನಪೀಠದ ನಿತ್ಯಾನಂದ ವಿಚಾರಣೆಗೆ ಹಾಜರಾಗಿದ್ದ.
ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಬಂಧನ ವಾರಂಟ್
ನಿತ್ಯಾನಂದನ ಜೊತೆ ಆತನ ಶಿಷ್ಯರಾದ ಗೋಪಾಲಶೀಲಂ ರೆಡ್ಡಿ, ಧನಶೇಖರನ್, ರಾಗಿಣಿ, ಜಮುನಾರಾಣಿ ಕೂಡಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಆರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ನಿತ್ಯಾನಂದನ ಶಿಷ್ಯ ಶಿವವಲ್ಲಭನೇನಿ ವಿಚಾರಣೆಗೆ ಹಾಜರಾಗಿರಲಿಲ್ಲ. ಅಲ್ಲದೇ ಕಳೆದ ಹಲವು ವಿಚಾರಣೆಗಳಲ್ಲೂ ಕೂಡ ಹಾಜರಾಗದ ಹಿನ್ನೆಲೆಯಲ್ಲಿ ಶಿವವಲ್ಲಭನೇನಿ ವಿರುದ್ಧ ನ್ಯಾಯಾಧೀಶ ಗೋಪಾಲಕೃಷ್ಣ ರೈ ಜಾಮೀನು ರಹಿತ ವಾರೆಂಟ್ ಆದೇಶಿಸಿದರು.
ಇನ್ನು ಉಳಿದ ಆರೋಪಿಗಳ ವಿರುದ್ದ ದೋಷಾರೋಪಣೆ ಪಟ್ಟಿಯಲ್ಲಿದ್ದ ಆರೋಪ ನಿಗದಿಯನ್ನು ನ್ಯಾಯಾಧೀಶರು ಓದಿ ಹೇಳಿದರು. ಕಳೆದ ಜನವರಿ 2ರಂದು ದೋಷಾರೋಪ ನಿಗದಿಗೆ ಮುಂದಾಗಿದ್ದ ವೇಳೆ ನಿತ್ಯಾನಂದ ಪರ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು.
ರಾಮನಗರ ನ್ಯಾಯಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದು ನಿತ್ಯಾನಂದನ ಪ್ರಕರಣವನ್ನು ಕಳೆದ ಫೆಬ್ರವರಿ 17ರಂದು ತಿರಸ್ಕರಿಸಿತ್ತು. ಈ ಹಿನ್ನಲೆಯಲ್ಲಿ ಇಂದು ದೋಷಾರೋಪ ಪಟ್ಟಿ ಓದಿದ ನ್ಯಾಯಾಧೀಶರು ವಿಚಾರಣೆಯನ್ನು ಇದೇ ಜೂನ್ 14ಕ್ಕೆ ಮುಂದೂಡಿದರು.