ಚನ್ನಪಟ್ಟಣ ಬೊಂಬೆಯ ಬೇಡಿಕೆ ಕಸಿದ ಸರಳ ದಸರಾ
ರಾಮನಗರ, ಅಕ್ಟೋಬರ್ 23: ವಿಶ್ವವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ, ಚನ್ನಪಟ್ಟಣ ಬೊಂಬೆ ತಯಾರಕರಿಗೆ ಮತ್ತು ವ್ಯಾಪಾರಸ್ಥರಿಗೆ ರಾಜ್ಯ ಸರ್ಕಾರದ ಸರಳ ದಸರಾ ಆಚರಣೆಯ ನಿರ್ಧಾರ ಭಾರಿ ನಿರಾಸೆ ಮೂಡಿಸಿದೆ.
ಪ್ರತಿವರ್ಷ ಮೈಸೂರು ದಸರಾ ಪ್ರಾರಂಭವಾದರೆ ಬೊಂಬೆನಾಡಿನ ಕರಕುಶಲಕರ್ಮಿಗಳಲ್ಲಿ ಸಂತಸ ಮನೆ ಮಾಡುತ್ತಿತ್ತು, ದಸರಾ ಪ್ರಾರಂಭದ ದಿನದಿಂದ ಕೊನೆಯ ದಿನದವರೆಗೆ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಚನ್ನಪಟ್ಟಣಕ್ಕೂ ಭೇಟಿ ನೀಡಿ ಬೊಂಬೆಗಳನ್ನು ಖರೀದಿಸುತ್ತಿದ್ದರು.
ಬೊಂಬೆ ತಯಾರಿಕೆಯ ಮೇಲೆ ಕೇಂದ್ರ ಸರ್ಕಾರದ ಗದಾ ಪ್ರಹಾರ: ಎಚ್ಡಿಕೆ ಆಕ್ರೋಶ
ಆದರೆ ಈ ಬಾರಿ ಕೊರೊನಾ ಭೀತಿಯಿಂದಾಗಿ ಪ್ರವಾಸಿಗರಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ. ವಿಶ್ವದಾದ್ಯಂತ ಕೊರೊನಾ ವೈರಸ್ ಅಬ್ಬರಕ್ಕೆ ಎಲ್ಲಾ ಉದ್ಯಮಗಳು ನಲುಗಿಹೋಗಿದೆ. ಅದೇ ರೀತಿ ವಿಶ್ವದಲ್ಲೇ ಪ್ರಸಿದ್ಧಿಯಾದ ಚನ್ನಪಟ್ಟಣದ ಗೊಂಬೆಗಳ ಉದ್ಯಮವೂ ಕೂಡ ಪಾತಾಳಕ್ಕೆ ಬಿದ್ದಿದೆ.
ವಿಶ್ವದ ಮೂಲೆ ಮೂಲೆಗೂ ರಫ್ತಾಗುತ್ತಿದ್ದ ಇಲ್ಲಿನ ಗೊಂಬೆಗಳು ಈಗ ಟಾಯ್ಸ್ ಶೋ ರೂಮ್ ಗಳಲ್ಲೇ ಧೂಳಿಡಿದಿವೆ. ದಸರಾ ಆರಂಭಕ್ಕೆ ಎರಡು ತಿಂಗಳು ಇದ್ದಂತೆ ಇಲ್ಲಿನ ಗೊಂಬೆಗಳಿಗೆ ಸಾಕಷ್ಟು ಬೇಡಿಕೆ ಇರುತ್ತಿತ್ತು, ಆದರೆ ಈ ಬಾರಿಯ ಸರಳ ದಸರಾದಿಂದಾಗಿ ಇಲ್ಲಿನ ಮಾರಾಟಗಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಧೂಳು ಹಿಡಿದಿದ್ದ ಎಲ್ಲಾ ಗೊಂಬೆಗಳನ್ನು ಇಟ್ಟುಕೊಂಡೇ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಬೊಂಬೆ ತಯಾರಕ ಈಶ್ವರ್ ರಾಜ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು-ಮೈಸೂರು ನಡುವಿನ ಚನ್ನಪಟ್ಟಣದಲ್ಲಿ ಹತ್ತಾರು ಟಾಯ್ಸ್ ಶೋ ರೂಮ್ಸ್ ಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಬೊಂಬೆ ಖರೀದಿ ಮಾಡುತ್ತಿದ್ದರು.
ಲಾಕ್ ಡೌನ್ ತೆರವಿನ ನಂತರ ಚೇತರಿಕೆ ಕಂಡಿದ್ದ ಬೊಂಬೆ ಮಾರಾಟ, ಸರ್ಕಾರದ ಸರಳ ದಸರಾ ನಿರ್ಧಾರದಿಂದ ಇದೀಗ ದಸರಾ ಗೊಂಬೆಗಳಿಗೆ ಬೇಡಿಕೆ ಇಲ್ಲದೇ ಕಂಗಲಾಗಿ ಹೋಗಿದ್ದಾರೆ. ಇನ್ನು ಪ್ರವಾಸಿಗರಿಲ್ಲದೇ ಶೋ ರೂಮ್ಗಳಲ್ಲಿ ವ್ಯಾಪಾರ-ವಹಿವಾಟು ಆಗುತ್ತಿಲ್ಲ.
Recommended Video