ಗುಜರಾತ್ ನಿಂದ ಕಾಲ್ಕಿತ್ತ ನಿತ್ಯಾನಂದ ಶಿಷ್ಯರು ಬಿಡದಿ ಆಶ್ರಮದಲ್ಲಿ ಪ್ರತ್ಯಕ್ಷ
ಬಿಡದಿ, ಡಿಸೆಂಬರ್ 5: ಗುಜರಾತ್ ಆಶ್ರಮದಿಂದ ಕಾಲ್ಕಿತ್ತ ನಿತ್ಯಾನಂದನ ಶಿಷ್ಯ ವರ್ಗ ನಿನ್ನೆ ಸಂಜೆ ವೇಳೆಗೆ ಬಿಡದಿಯ ನಿತ್ಯಾನಂದನ ಆಶ್ರಮದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಸುಮಾರು 30 ವಿದ್ಯಾರ್ಥಿಗಳು, ಹತ್ತಕ್ಕೂ ಹೆಚ್ಚು ಮಹಿಳಾ ಭಕ್ತರು ಸೇರಿದಂತೆ 45ಕ್ಕೂ ಹೆಚ್ಚು ಜನರು ಗುಜರಾತ್ ಆಶ್ರಮದಿಂದ ಬಿಡದಿ ಆಶ್ರಮಕ್ಕೆ ಬಂದಿದ್ದಾರೆ.
ನಿತ್ಯಾನಂದನ ಹೊಸ ದೇಶಕ್ಕೆ ಪ್ರಧಾನಿ, ಕ್ಯಾಬಿನೆಟ್ ರಚನೆ
ಗುಜರಾತ್ ನಿಂದ ಬಂದ ನಿತ್ಯನ ಶಿಷ್ಯರು ಮತ್ತು ವಿದ್ಯಾರ್ಥಿಗಳು ಆಶ್ರಮದಲ್ಲಿರುವ ರಾಜ್ಯಸಭಾ, ಚಿಕ್ಕಸಭಾ ಎಂಬ ಎರಡು ಕಟ್ಟಡಗಳಲ್ಲಿ ಪೂಜೆ, ಪ್ರವಚನ ಮತ್ತು ಧ್ಯಾನದಂತಹ ಧಾರ್ಮಿಕ ಚಟುವಟಿಕೆಗಳು ನಡೆಸುತ್ತಿದ್ದಾರೆ. ಎರಡು ಕಟ್ಟಡಗಳಲ್ಲಿ ಅತ್ಯಾಧುನಿಕ ತಾಂತ್ರಿಕ ಸಲಕರಣೆಗಳಿದ್ದು ನಿತ್ಯಾನಂದ ಹೊರ ದೇಶದಲ್ಲಿದ್ದರೂ ತನ್ನ ಶಿಷ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ ಎನ್ನಲಾಗಿದೆ.
ವರ್ಷದ ಹಿಂದೆಯೆ ಆಶ್ರಮದ ಚಟುವಟಿಕೆಗಳು ಹೊರಗೆ ಕಾಣಿಸದಂತೆ ಕಾಂಪೌಂಡ್ ಗೋಡೆಯನ್ನು ಐದು ಅಡಿಯಿಂದ ಸುಮಾರು ಹತ್ತು ಅಡಿಗಳಿಗೂ ಹೆಚ್ಚು ಎತ್ತರ ಹೆಚ್ಚಿಸಲಾಗಿತ್ತು. ಇದೀಗ ಆಶ್ರಮಕ್ಕೆ ನಿತ್ಯನ ಭಕ್ತರು ಬಂದ ನಂತರ ಆಶ್ರಮ ಮುಖ್ಯದ್ವಾರವೇ ಬಂದ್ ಮಾಡಿದ್ದು, ಆಶ್ರಮಕ್ಕೆ ಸಂಬಂಧಪಟ್ಟವರಿಗೆ ಬಿಟ್ಟು ಬೇರೆ ಯಾರಿಗೂ ಒಳಪ್ರವೇಶಕ್ಕೆ ಅವಕಾಶ ಇಲ್ಲದಾಗಿದೆ.