ನಿಖಿಲ್ ಮದುವೆ ಮುಂದಕ್ಕೆ ಹೋಗುತ್ತಾ? ಕುಮಾರಸ್ವಾಮಿ ಪ್ರತಿಕ್ರಿಯೆ
ರಾಮನಗರ, ಏಪ್ರಿಲ್ 06: ಕೊರೊನಾ ಲಾಕ್ ಡೌನ್ ನಿಂದಾಗಿ, ಏಪ್ರಿಲ್ 17ಕ್ಕೆ ನಿಗದಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಮದುವೆ ನಡೆಯುವ ಸ್ಥಳದ ಬಗ್ಗೆ ಗೊಂದಲ ಏರ್ಪಟ್ಟಿತ್ತು. ಈ ಮೊದಲು ಚನ್ನಪಟ್ಟಣ ಮಧ್ಯ ಭಾಗದ ಜಾನಪದ ಲೋಕದಲ್ಲಿ ಮದುವೆ ನಿಶ್ಚಯವಾಗಿದ್ದು, ನಂತರ ಬೆಂಗಳೂರಿನಲ್ಲೇ ನಡೆಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದರು.
ಇದೀಗ ರಾಮನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಟನಲ್ ಗಳ ಉದ್ಘಾಟನೆಗೆ ಆಗಮಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮನೆಯಲ್ಲೇ, ಮನೆ ಸದಸ್ಯರ ಸಮ್ಮುಖದಲ್ಲಷ್ಟೇ ಮದುವೆ ನಡೆಸುವುದಾಗಿ ತಿಳಿಸಿದ್ದಾರೆ. "ಇದೇ ಏಪ್ರಿಲ್ 17ರ ಶುಭ ಲಗ್ನದಲ್ಲೇ ನಿಖಿಲ್ ಮದುವೆ ನಡೆಯುತ್ತದೆ. ನಮ್ಮ ಮನೆಯಲ್ಲಿ ಅಥವಾ ಹುಡುಗಿ ಮನೆಯಲ್ಲಿ ಮದುವೆ ನಡೆಯುತ್ತದೆ" ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ತಡೆಗೆ ಜಿಲ್ಲೆಯ ಎರಡು ಕಡೆ ಟನಲ್
"ಸಾರ್ವಜನಿಕರು ಹೆಚ್ಚು ಓಡಾಡುವ ಸ್ಥಳದಲ್ಲಿ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ಟನಲ್ ಮಾಡುವ ಮೂಲಕ ರೋಗವನ್ನು ತಾತ್ಕಾಲಿಕವಾಗಿ ತಡೆಯುವುದಕ್ಕೆ ಶುರು ಮಾಡಿದ್ದರು. ಇದು ನಮ್ಮಲ್ಲೂ ಪ್ರಾರಂಭವಾಗಿದೆ. ಸರ್ಕಾರದಿಂದ ಈ ಕೆಲಸ ಮಾಡಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆ ದೃಷ್ಟಿಯಿಂದ ಚನ್ನಪಟ್ಟಣ, ರಾಮನಗರ ಎರಡೂ ಕಡೆ ಐದು ಸ್ಥಳದಲ್ಲಿ ಟನಲ್ ಗಳನ್ನು ರೈತರ ಉಪಯೋಗಕ್ಕಾಗಿ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು ಎಚ್ ಡಿಕೆ.
ನಿಖಿಲ್ ಮದುವೆಗೆ ಕೊರೊನಾ ಭೀತಿ: ಎಚ್ಡಿಕೆ ಕನಸು ಭಗ್ನ
"ಸರ್ಕಾರ ಟೀಕಿಸುವ ಸಮಯ ಇದಲ್ಲ"
ಹಳ್ಳಿಯಿಂದ ಬರುವ ರೈತರಿಗೆ ಸೋಂಕು ತಡೆಯುವ ಸಣ್ಣ ಕಾರ್ಯವನ್ನು ಪ್ರಾರಂಭಿಸಿದ್ದೇವೆ. ಎಲ್ಲಾ ಕಡೆ ಈ ರೀತಿ ಟನಲ್ ಗಳನ್ನು ಸ್ಥಾಪನೆ ಮಾಡಬೇಕು. ಸರ್ಕಾರದ ಬಗ್ಗೆ ಟೀಕೆ ಮಾಡುವ ಸಮಯ ಇದಲ್ಲ. ಸರ್ಕಾರ ಸರಿಯಾದ ರೀತಿ ಕೆಲಸ ಮಾಡಬೇಕು ಎಂದು ಸಲಹೆ ಕೊಡುತ್ತೇವೆ. ಈ ಸಮಯಕ್ಕೆ ಸೇವೆ ಮಾಡುತ್ತಿರುವ ವೈದ್ಯಕೀಯ ಇಲಾಖೆಗೆ ಅವರಿಗೆ ಅಗತ್ಯ ವಸ್ತುಗಳನ್ನು ಕೊಡಲು ಕೋರುತ್ತೇನೆ. ಪಿಪಿಇ ಸೆಟ್ ಹಾಗೂ ಕಿಟ್ ಗಳನ್ನ ತಕ್ಷಣ ತರುವ ವ್ಯವಸ್ಥೆ ಸರ್ಕಾರದಿಂದ ಆಗಬೇಕು ಎಂದು ಹೇಳಿದರು.
ನಿಖಿಲ್ ಮದುವೆ ಎಲ್ಲಿ?
ಕೊರೊನಾ ಪರಿಣಾಮದಿಂದಾಗಿ ಏಪ್ರಿಲ್ 17ಕ್ಕೆ ನಡೆಯಬೇಕಿದ್ದ ನಿಖಿಲ್ ಕುಮಾರಸ್ವಾಮಿ ಮದುವೆ ಎಲ್ಲಿ ನಡೆಯುತ್ತದೆ ಎಂಬ ಪ್ರಶ್ನೆ ಉಂಟಾಗಿತ್ತು. ಮೊದಲು ಜಾನಪದ ಲೋಕದಲ್ಲಿ ಮದುವೆ ನಡೆಯುವ ತಯಾರಿ ನಡೆದಿದ್ದು, ನಂತರ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯುವುದಾಗಿ ತಿಳಿದುಬಂದಿತ್ತು. ಇದೀಗ ಮನೆ ಸದಸ್ಯರ ಸಮ್ಮುಖದಲ್ಲಿ ಮನೆಯಲ್ಲಿಯೇ ಮದುವೆ ನಡೆಯುತ್ತದೆ ಎಂದು ಮಾಹಿತಿ ನೀಡಿದ್ದಾರೆ ಕುಮಾರಸ್ವಾಮಿ.
ಮಗ ನಿಖಿಲ್ ಮದುವೆ ಬಗ್ಗೆ ಹೀಗೆ ಹೇಳಿದ್ಯಾಕೆ ತಾಯಿ ಅನಿತಾ ಕುಮಾರಸ್ವಾಮಿ?
ಮುಂದೆ ರಾಮನಗರದಲ್ಲಿ ಕಾರ್ಯಕ್ರಮ
"17ರ ಶುಭ ಲಗ್ನದಲ್ಲೇ ನಿಖಿಲ್ ಮದುವೆ ನಡೆಯುತ್ತದೆ. ನಮ್ಮ ಮನೆ ಇಲ್ಲಾ, ಹುಡುಗಿಯ ಮನೆಯಲ್ಲಿ ಮದುವೆ ಕಾರ್ಯ ನಡೆಯುತ್ತದೆ. ಮದುವೆಯಲ್ಲಿ ಮನೆಯ ಸದಸ್ಯರು ಮಾತ್ರ ಇರುತ್ತಾರೆ. ಮುಂದೆ ಸಮಯ ನೋಡಿ ರಾಮನಗರದಲ್ಲಿ ಕಾರ್ಯಕ್ರಮ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.