ನಿಖಿಲ್ ಮದುವೆ ಜವಾಬ್ದಾರಿಯನ್ನು ಕಾರ್ಯಕರ್ತರಿಗೇ ವಹಿಸಿದ ಎಚ್ಡಿಕೆ
ರಾಮನಗರ, ಫೆಬ್ರವರಿ 28: ಮಗ ನಿಖಿಲ್ ಕುಮಾರಸ್ವಾಮಿ ಮದುವೆಯ ಪೂರ್ವಭಾವಿ ಸಭೆ ನಡೆಸಿ, ಲಗ್ನ ಪತ್ರಿಕೆಯನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪುತ್ರ ನಿಖಿಲ್ ಮತ್ತು ರೇವತಿ ಮದುವೆ ಲಗ್ನ ಪತ್ರಿಕೆ ಅಧಿಕೃತವಲ್ಲ ಎಂದು ಅಲ್ಲಗಳೆದಿದ್ದ ಕುಮಾರಸ್ವಾಮಿ, ನಿನ್ನೆ ತಮ್ಮ ತೋಟದ ಮನೆಯಲ್ಲಿ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಲಗ್ನ ಪತ್ರಿಕೆ ಪ್ರದರ್ಶಿಸಿ ಸೋಮವಾರದಿಂದ ಲಗ್ನಪತ್ರಿಕೆ ಹಂಚುವುದಾಗಿ ತಿಳಿಸಿದರು.
ನಿಖಿಲ್-ರೇವತಿ ವಿವಾಹ ಸಿದ್ಧತಾ ಕಾರ್ಯ; ಎಚ್ ಡಿಕೆ ದಂಪತಿ ವಿಶೇಷ ಪೂಜೆ
ಮಗನ ಮದುವೆಯ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಾದ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಸಭೆ ನಡೆಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, "" ಇದು ನಿಮ್ಮ ಮನೆಯ ಮಗನ ಮದುವೆಯೆಂದು ತಿಳಿದು, ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಸುಸೂತ್ರವಾಗಿ ನಡೆಸಿಕೊಡಬೇಕೆಂದು'' ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಲಗ್ನ ಪತ್ರಿಕೆ ಪ್ರದರ್ಶನ ಮಾಡಿದ ಎಚ್ಡಿಕೆ, ""ಇದೇ ಅಧಿಕೃತ ಲಗ್ನ ಪತ್ರಿಕೆ, ರಾಜ್ಯಾದ್ಯಂತ ಇರುವ ಅಭಿಮಾನಿಗಳಿಗೆ ಲಗ್ನಪತ್ರಿಕೆ ತಲುಪಿಸುತ್ತೇನೆ. ಶ್ರೀಮಂತರಿಗೆ ಬೇರೆ ಲಗ್ನ ಪತ್ರಿಕೆ, ಬಡವರಿಗೆ ಬೇರೆ ಲಗ್ನ ಪತ್ರಿಕೆ ಎಂಬ ಸಂಶಯ ಬೇಡ ಎಲ್ಲರಿಗೂ ತಲುಪುವುದು ಇದೇ ಪತ್ರಿಕೆ. ಇದರಲ್ಲಿ ನನ್ನ ಕೇಲವು ಅಂತರಾಳ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ ಅಷ್ಟೇ. ಊಟದಲ್ಲೂ ಯಾವುದೇ ಪ್ರತ್ಯೇಕವಿಲ್ಲ ಎಲ್ಲರಿಗೂ ಒಂದೇ ಮಾದರಿಯ ಊಟದ ವ್ಯವಸ್ಥೆ ಮಾಡಿದ್ದೇವೆ ಎಂದರು.
ನಿಖಿಲ್ ಮದ್ವೆಗೆ ಜನತೆಯನ್ನು ಆಮಂತ್ರಿಸಿದ ಎಚ್ಡಿಕೆ ದಂಪತಿ
ಪ್ರತಿ ಜಿಲ್ಲೆಯಲ್ಲೂ ಕಾರ್ಯಕರ್ತರ ಸಭೆ ಕರೆದು ಲಗ್ನ ಪತ್ರಿಕೆ ಹಂಚುತ್ತೇನೆ, ಆದರೆ ನನ್ನನ್ನು ರಾಜಕೀಯವಾಗಿ ಬೆಳಸಿದ ರಾಮನಗರ ಜಿಲ್ಲೆಯ ನಾಲ್ಕು ತಾಲ್ಲೂಕಿನ ಪ್ರತಿ ಮನೆಗೆ ಮದುವೆಯ ಆಮಂತ್ರಣ ಪತ್ರಿಕೆ ತಲುಪಬೇಕು ಹಾಗಾಗಿ ನೀವುಗಳು ಜವಾಬ್ದಾರಿ ವಹಿಸಿಕೊಂಡು ಪ್ರತಿ ಮನೆಗೂ ಲಗ್ನ ಪತ್ರಿಕೆ ತಲುಪಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಅಲ್ಲದೇ ಕೆಲ ಕಾರಣಗಳಿಂದ ನಮ್ಮಿಂದ ದೂರಾಗಿರೋ ಮತ್ತು ನಮ್ಮ ಮೇಲೆ ಮುನಿಸಿಕೊಂಡಿರುವ ಎಲ್ಲಾ ಸ್ನೇಹಿತರಿಗೂ ಲಗ್ನ ಪತ್ರಿಕೆ ತಲುಪಿಸಿ ಎಂದು ಕಿವಿ ಮಾತು ಹೇಳಿದರು. ನಾನು ಕೂಡ ಎಲ್ಲಾ ಮನಸ್ತಾಪಗಳನ್ನು ಮರೆತು ಎಲ್ಲರನ್ನೂ ಮದುವೆಯ ಆಮಂತ್ರಣ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.
ಎಪ್ರಿಲ್ 17 ರ ಶುಕ್ರವಾರ ರಾಮನಗರದ ಜಾನಪದ ಲೋಕದ ಪಕ್ಕದ ಸಪ್ತಪದಿ ಮಂಟಪದಲ್ಲಿ ಜರುಗಲಿರುವ ನಿಖಿಲ್ ಹಾಗೂ ರೇವತಿ ಯವರ ಕಲ್ಯಾಣಕ್ಕೆ ಸ್ಥಳ ನಿಗದಿ ಮಾಡಿ ಈಗಾಗಲೇ ಎಚ್ಡಿಕೆ ದಂಪತಿಗಳು ಹಾಗೂ ವಧು ರೇವತಿ ಪೋಷಕರು ಹೋಮ-ಹವನ ಹಾಗೂ ಭೂಮಿ ಪೂಜೆ ಸಲ್ಲಿಸಿ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಸುಮಾರು 80 ಎಕರೆ ವಿಶಾಲವಾದ ಜಾಗದಲ್ಲಿ ಸಪ್ತಪದಿ ಮಂಟಪ ಸೇರಿದಂತೆ ಇನ್ನೀತರೆ ಕಟ್ಟಡ ನಿರ್ಮಾಣ ಕಾರ್ಯ ಬರದಿಂದ ಸಾಗಿದೆ.