ಕೊರೊನಾ ಸಾವಿನ ಕೂಪವಾಗುತ್ತಿರುವ ರಾಮನಗರವನ್ನು ರಕ್ಷಿಸಿ ಎಂದ ನೆಟ್ಟಿಗರು
ರಾಮನಗರ, ಜುಲೈ 6: ಕೊರೊನಾ ವೈರಸ್ ಸೋಂಕಿನಿಂದ ಸಾವಿನ ಕೂಪವಾಗುತ್ತಿರುವ ರಾಮನಗರವನ್ನು ರಕ್ಷಿಸಿ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೌನಕಾಂತ್ರಿ ಹೋರಾಟದ ವೇದಿಕೆ ಹೆಸರಿನಲ್ಲಿ ಅಧಿಕಾರಿಗಳ ವೈಫಲ್ಯದ ವಿರುದ್ಧ ಬೆಳಕು ಚೆಲ್ಲುವ ವಿನೂತನ ಅಭಿಯಾನ ಪ್ರಾರಂಭವಾಗಿದೆ.
ಮೌನಕ್ರಾಂತಿಯೇ ನಮ್ಮ ಆಯುಧ, ಕೊರೊನಾ ವೈರಸ್ ನ್ನು ನಿರ್ಲಕ್ಷ್ಯಸುತ್ತಿರುವ ಅಧಿಕಾರಿಗಳ ವಿರುದ್ಧದ ಹೋರಾಟವೇ ನಮ್ಮ ಗುರಿ, ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಈ ಪೋಸ್ಟ್ ಹಂಚುವ ಮೂಲಕ ನಮ್ಮ ಹೋರಾಟಕ್ಕೆ ಶಕ್ತಿ ತುಂಬಿ ಎಂದು ಮೌನಕ್ರಾಂತಿ ಹೋರಾಟ ವೇದಿಕೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದೆ.
ಕೊರೊನಾ ವೈರಸ್ ಭೀತಿಯಿಂದ ಮಾಗಡಿ ಶಾಸಕ ಎ.ಮಂಜುನಾಥ್ ಸೇಫ್
ಕೊರೊನಾ ವೈರಸ್ ತಡೆಗಟ್ಟುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿರುವ ಮೌನಕ್ರಾಂತಿ ಹೋರಾಟ ವೇದಿಕೆ ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾಡಳಿತ ಕೋವಿಡ್-19 ಬಗೆಗಿನ ನಿರ್ಲಕ್ಷ್ಯ ಧೋರಣೆಯನ್ನು ಪಟ್ಟಿ ಮಾಡಿ ಪ್ರಕಟಿಸುವ ಮೂಲಕ ಗಂಭೀರ ಚರ್ಚೆ ಹುಟ್ಟು ಹಾಕಿದೆ.
ಕೋವಿಡ್ ಸೋಂಕಿತರನ್ನು 9 ದಿನಗಳ ನಂತರ ಗಂಟಲು ದ್ರವ ಪರೀಕ್ಷೆ ಮಾಡಿಸದೇ ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತಿದ್ದಾರೆ. ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಿಲ್ಲ, ಶಂಕಿತರ ಗಂಟಲು ದ್ರವ ಪರೀಕ್ಷೆ 10 ದಿನ ತಡವಾಗುತ್ತಿರುವುದು, ಶಂಕಿತರು ಮತ್ತು ಸೋಂಕಿತರನ್ನು ಒಟ್ಟಿಗೆ ಕ್ವಾರಂಟೈನ್ ಮಾಡಿರುವುದು. ಕ್ವಾರಂಟೈನ್ ಕೇಂದ್ರಗಳು ಸೋಂಕಿತರ ಪಾಲಿಗೆ ನರಕವಾಗಿವೆ, ಜನರ ಆರೋಗ್ಯ ಕಾಪಾಡಬೇಕಾದ ಅಧಿಕಾರಿಗಳು ಕೊರೊನಾ ಹೆಸರಿನಲ್ಲಿ ಹಣ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ಅಭಿಯಾನಕ್ಕೆ ಮೌನ ಕ್ರಾಂತಿ ಸದಸ್ಯರು ಮುಂದಾಗಿದ್ದಾರೆ.