ರಾಮನಗರ ರೇಷ್ಮೆ ಮಾರುಕಟ್ಟೆ ಜಮೀನು ವಿವಾದ ತಕ್ಷಣ ಬಗೆಹರಿಸಲು ಸಚಿವರಿಂದ ಖಡಕ್ ಎಚ್ಚರಿಕೆ
ರಾಮನಗರ, ಮೇ 11: ರೇಷ್ಮೆಗೆ ಹೆಸರಾಗಿರುವ ರಾಮನಗರ ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ ಮಾತ್ರ ಹೈಟೆಕ್ ಆಗಿಲ್ಲ. ಅತಿ ಶೀಘ್ರದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣ ಆಗಬೇಕು. ಆದರೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿಲ್ಲ. ಹೀಗಾಗಿ ಇದು ತಡವಾಗಿದೆ. ದಶಕಗಳಿಂದ ಇರುವ ಜಮೀನು ವಿವಾದ ಬಗೆಹರಿಯದಿರಲು ಅಧಿಕಾರಿಗಳ ನಿರಾಸಕ್ತಿಯೇ ಕಾರಣ ಎಂದು ರೇಷ್ಮೆ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಡಿಸಿಎಂ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ರಾಮನಗರಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, "ರಾಮನಗರದಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿ ರೇಷ್ಮೆ ಮಾರುಕಟ್ಟೆ ಇದೆ. ಇದನ್ನು ಹೈಟೆಕ್ ಮಾರುಕಟ್ಟೆಯಾಗಿ ಪರಿವರ್ತಿಸಬೇಕು. ಇದು ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ. ಅತ್ಯಾಧುನಿಕವಾಗಿ ಮಾರುಕಟ್ಟೆ ನಿರ್ಮಾಣ ಆದರೆ ಎಲ್ಲರಿಗೂ ಅನುಕೂಲ ಆಗತ್ತೆ. ಆದ್ರೆ ಮಾರುಕಟ್ಟೆ ಹಿಂಭಾಗದಲ್ಲಿರುವ ಭೂಮಿ ವಿವಾದದಲ್ಲಿ ಇದೆ. ದಶಕಗಳಿಂದ ಈ ಭೂ ವಿವಾದ ಬಗೆಹರಿಸಿಲ್ಲ. ಡಿಸಿ ಕಚೇರಿ ಪಕ್ಕದಲ್ಲೂ ಮೂರು ಎಕರೆ ಜಾಗ ಇದೆ. ಅಲ್ಲಿರುವ ಆರ್ ಟಿಒ ಕಚೇರಿ ಸ್ಥಳಾಂತರಿಸಿ ರೇಷ್ಮೆ ಮಾರುಕಟ್ಟೆಗೆ ಆ ಸ್ಥಳ ಬಳಸಿಕೊಳ್ಳಬೇಕು. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಯಾವುದೂ ಸಾಧ್ಯವಾಗಿಲ್ಲ" ಎಂದು ಆರೋಪಿಸಿದರು.
ಎಂಎಲ್ಸಿ ಶ್ರೀಕಂಠೇಗೌಡ ವಿರುದ್ಧ ಸಚಿವ ನಾರಾಯಣ ಗೌಡ ಗರಂ
ರೇಷ್ಮೆ ಮಾರುಕಟ್ಟೆ ಹಿಂಭಾಗದ ಜಮೀನು ವಿವಾದ ಕೋರ್ಟ್ ನಲ್ಲಿದೆ. ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿದರೆ ಕೋರ್ಟ್ ನಲ್ಲಿ ಪ್ರಕರಣ ಇಷ್ಟರೊಳಗೆ ಇತ್ಯರ್ಥ ಆಗುತ್ತಿತ್ತು. ಗಮನ ಹರಿಸದ ಕಾರಣ ನನೆಗುದಿಗೆ ಬಿದ್ದಿದೆ. ಇದನ್ನು ಶೀಘ್ರದಲ್ಲಿ ಪರಿಹರಿಸಲು ಹೆಚ್ಚಿನ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಖಡಕ್ ಸೂಚನೆ ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ವ್ಯವಹಾರ ಕೂಡ ಪಾರದರ್ಶಕವಾಗಿಲ್ಲ ಎಂಬ ದೂರುಗಳಿವೆ. ಈ ಕಾಲದಲ್ಲೂ ಕ್ಯಾಶ್ ವ್ಯವಹಾರ ನಡೆಸುತ್ತಾರೆ. ಆನ್ಲೈನ್ ವ್ಯವಹಾರ ಆರಂಭ ಆಗಬೇಕು. ಚೆಕ್, ಕ್ಯಾಶ್ ವ್ಯವಹಾರ ನಿಲ್ಲಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಇದಲ್ಲದೆ ರಾಮನಗರದಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪನೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಹೆಚ್ಚು ಮಾವು ಬೆಳೆಯುವ ರಾಮನಗರದಲ್ಲಿ ಸಂಸ್ಕರಣಾ ಘಟಕವೇ ಇಲ್ಲ. ಕಣ್ವ ಡ್ಯಾಂ ಸಮೀಪದಲ್ಲಿ ಘಟಕ ಸ್ಥಾಪನೆ ಆಗಬೇಕು. ಅದಕ್ಕೆ ಆಗಬೇಕಾದ ಎಲ್ಲ ಸಿದ್ಧತೆಯನ್ನು ಅಧಿಕಾರಿಗಳು ಮಾಡಬೇಕು ಎಂದು ತಿಳಿಸಿದ್ದಾರೆ.