Breaking News: ಮುದುಗೆರೆ ಬಳಿ ಅಪಘಾತವಾಗಿದ್ದು, ಪ್ರತಾಪ್ ಸಿಂಹ ಇದ್ದ ಕಾರಲ್ಲ
ಚನ್ನಪಟ್ಟಣ, ನವೆಂಬರ್ 22: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿದ್ದ ಕಾರು ಹೆದ್ದಾರಿಯಲ್ಲಿ ಪಲ್ಟಿಯಾಗಿಲ್ಲ. ಈ ಬಗ್ಗೆ ಖುದ್ದು ಪ್ರತಾಪ್ ಸಿಂಹ ಅವರು ಖುದ್ದು ಫೇಸ್ ಬುಕ್ ಲೈವ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಬಳಿ ದುರ್ಘಟನೆ ಸಂಭವಿಸಿದೆ ಎಂಬ ಬ್ರೇಕಿಂಗ್ ಸುದ್ದಿ ಕೇಳಿ ಎಲ್ಲರೂ ಗಾಬರಿಯಾಗಿದ್ದರು. ಹೆದ್ದಾರಿಯಲ್ಲಿ ಅಪಘಾತವಾಗಿದ್ದು ನಿಜ, ಆದರೆ, ಆ ಕಾರಿನಲ್ಲಿ ಪ್ರತಾಪ್ ಸಿಂಹ ಅವರಾಗಲಿ ಅವರ ಕುಟುಂಬದವರಾಗಲಿ ಇರಲಿಲ್ಲ ಎಂದು ಇದೀಗ ಖಚಿತವಾಗಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮದ ಬಳಿ ಹೆದ್ದಾರಿಯಲ್ಲಿ ವಾಹನ ಪಲ್ಟಿಯಾಗಿದೆ. ಪಲ್ಟಿಯಾಗಿರುವ ವಾಹನದ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರತಾಪ್ ಸಿಂಹ ಅವರ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದರು. ಈ ಬಗ್ಗೆ ಆತಂಕ ನಿವಾರಣೆಯಾಗಿದ್ದು, ಘಟನೆ ಬಗ್ಗೆ ಪ್ರತಾಪ್ ಸಿಂಹ ಅವರೇ ವಿವರರಿಸಿದ್ದಾರೆ.
ಅಪಘಾತಕ್ಕೀಡಾದವರಿಗೆ ನೆರವು:
ಪ್ರತಾಪ್ ಸಿಂಹ ಅವರು ಫೇಸ್ ಬುಕ್ ಲೈವ್ ಬಂದು ಘಟನೆ ಬಗ್ಗೆ ವಿವರಿಸಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದೆ ಮಾರ್ಗ ಮಧ್ಯದಲ್ಲಿ ವೈಶಾಲಿ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಸಮಯದಲ್ಲಿ ಹೋಟೆಲ್ ಮುಂದೆ ಇರುವ ಹೆದ್ದಾರಿಯಲ್ಲಿ ಕಾರು ಪಲ್ಟಿಯಾಗಿದ್ದು ಕಂಡು ಬಂದಿತು. ಬೆಂಗಳೂರಿಗೆ ತೆರಳುತ್ತಿದ್ದ ಇನ್ನೋವಾ ಕಾರಿನ ಚಕ್ರ ಸ್ಫೋಟಗೊಂಡು ಪಲ್ಟಿಯಾಗಿತ್ತು.
ಕಾರಿನಲ್ಲಿ ಗಂಡ, ಹೆಂಡತಿ, ಮಗಳು, ಚಾಲಕ ಸೇರಿ 6 ಜನರಿದ್ದರು. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅತೀ ವೇಗವಾಗಿ ಬಂದ ಫಾರ್ಚೂನರ್ ಕಾರು ಪಲ್ಟಿ ಹೊಡೆದಿದೆ. ಹಾಗೂ ಕಾರು ಚಾಲಕನಿಗೆ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾರಿಗೂ ತೀವ್ರ ನೋವು, ಗಾಯಗಳಾಗಿಲ್ಲ, ನಾನು ನನ್ನ ಗನ್ ಮ್ಯಾನ್ ತಕ್ಷಣವೆ ನೆರವಿಗೆ ಧಾವಿಸಿದೆವು. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಬಂದು ನೆರವಾದರು.
Recommended Video
ಪ್ರತಾಪ್ ಸಿಂಹ ಅವರಿದ್ದ ಕಾರು ಪಲ್ಟಿಯಾಗಿದೆ ಎಂಬ ಸುದ್ದಿ ಹಬ್ಬಿ, ಅನೇಕ ಮಂದಿ ನನಗೆ ಕಾಲ್ ಮಾಡಿದ್ರು, ಟಿವಿಯಲ್ಲಿ ಸುದ್ದಿ ಬಂದಿದೆ ಎಂದು ಹೇಳಿದರು, ಅದಕ್ಕೆ ಈ ಬಗ್ಗೆ ಸ್ಪಷ್ಟ ಚಿತ್ರಣ ನೀಡೋದಕ್ಕೆ ಫೇಸ್ ಬುಕ್ ಲೈವ್ ಬಂದಿದ್ದೀನಿ, ಅಪಘಾತಕ್ಕೀಡಾದವರು ಕೋವಿಡ್ ಡ್ಯೂಟಿ ಮುಗಿಸಿಕೊಂಡು ಬೆಂಗಳೂರು ಕಡೆಗೆ ತೆರಳುತ್ತಿದ್ದರು ಎಂದು ಕಾಣುತ್ತದೆ. ಅವರ ಬಗ್ಗೆ ಹೆಚ್ಚಿನ ವಿವರ ಸಿಕ್ಕಿಲ್ಲ. ಅಪಘಾತದಿಂದ ಆಘಾತಕ್ಕೊಳಗಾಗಿದ್ದರು, ಸಮಾಧಾನಪಡಿಸಿ, ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದ್ದೇವೆ. ಹೆದ್ದಾರಿಯಲ್ಲಿ ಅಪಘಾತವಾದಾಗ ನೆರವಾಗದೆ ಅನೇಕ ಮಂದಿ ಹಾಗೆ ಪಾಸ್ ಆಗುತ್ತಿದ್ದರು. ಈ ರೀತಿ ಮಾಡಬಾರದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.