ಕಾಂಗ್ರೆಸ್ ಎಂದಿಗೂ ರೈತರ ಭೂಮಿ ಕಿತ್ತುಕೊಂಡಿಲ್ಲ; ಸಂಸದ ಡಿ.ಕೆ.ಸುರೇಶ್
ರಾಮನಗರ, ಡಿಸೆಂಬರ್ 07: ಕೇಂದ್ರ ಸರ್ಕಾರದ ರೈತ ವಿರೋಧಿ ನಡೆಯನ್ನು ಖಂಡಿಸಿ ರೈತರು ಡಿ.8ರಂದು ಕರೆ ನೀಡಿರುವ 'ಭಾರತ್ ಬಂದ್' ಅನ್ನು ಕಾಂಗ್ರೆಸ್ ಪಕ್ಷ ಬೆಂಬಲಿಸಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕ ಸಭಾ ಸದಸ್ಯ ಡಿ.ಕೆ.ಸುರೇಶ್ ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಕಳೆದ 70 ವರ್ಷಗಳಿಂದ ರೈತರ ಭೂಮಿ ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿರಲಿಲ್ಲ. ಚಳಿ, ಮಳೆ, ಬಿಸಿಲು ಎನ್ನದೇ ಕೇಂದ್ರದ ರೈತ ವಿರೋಧಿ ಕಾಯ್ದೆಯನ್ನು ಖಂಡಿಸಿ ರೈತರು ದೆಹಲಿ ಹೊರ ವಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲೂ ರೈತರು ಕರೆ ನೀಡಿರುವ ಬಂದ್ ಅನ್ನು ನಾನು ಸೇರಿದಂತೆ ಕಾಂಗ್ರೆಸ್ ಪಕ್ಷ ಬೆಂಬಲಿಸಿದೆ. ರೈತರ ಹೋರಾಟ ಯಶಸ್ವಿಯಾಗಲಿ ಎಂದು ಹೇಳಿದರು.
ಡಿಸೆಂಬರ್ 8 ರಂದು ಭಾರತ ಬಂದ್: ಕರ್ನಾಟಕ ರೈತ ಸಂಘ ಬೆಂಬಲ
ರೈತರಿಂದ ಬಿಜೆಪಿ ಕೃಷಿ ಭೂಮಿಯನ್ನು ಕಿತ್ತುಕೊಳ್ಳುತ್ತಿದೆ. ಕಾಂಗ್ರೆಸ್ ರೈತರಿಗೆ ಭೂಮಿ ನೀಡುವ ಕೆಲಸ ಮಾಡಿತ್ತು, ಭೂಮಿ ಕಿತ್ತುಕೊಳ್ಳುವ ಸಂಸ್ಕ್ರತಿ ಕಾಂಗ್ರೆಸ್ ಪಕ್ಷದ್ದಲ್ಲ. ಒಂದು ವೇಳೆ ನಾವು ಒಟ್ಟಾಗಿ ರೈತ ವಿರೋಧಿ ಕಾಯ್ದೆಗಳ ಹೋರಾಟ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ನೀಡಲು ಭೂಮಿಯೇ ಇರುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನರೇಗಾ ಕಾಂಗ್ರೆಸ್ ಹಿರಿಮೆ: ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ) ಯೋಜನೆ ಕಾಂಗ್ರೆಸ್ ಪಕ್ಷದ ಹಿರಿಮೆ. ಕೆಲಸವಿಲ್ಲದೇ ನಿರುದ್ಯೋಗ ಸಮಸ್ಯೆಯಿಂದ ಬಳಲಿದ್ದ ಗ್ರಾಮೀಣ ಮಂದಿಗೆ ಕೆಲಸ ನೀಡಿದ ಯೋಜನೆ. ಇದನ್ನು ನಾವು ಮಾಡಿದ್ದು ನಾವು ಮಾಡಿದ್ದು ಎನ್ನುತ್ತಾರೆ ಬಿಜೆಪಿ ನಾಯಕರು. ಅವರಿಗೆ ನಾಚಿಕೆಯಾಗಬೇಕು ಎಂದು ಡಿ.ಕೆ.ಸುರೇಶ್ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.