ರಾಮನಗರ: ಶ್ರೀರಾಮ ಬಿಜೆಪಿಯವರ ಸ್ವತ್ತಲ್ಲ ಎಂದ ಸಂಸದ ಡಿ.ಕೆ ಸುರೇಶ್
ರಾಮನಗರ, ಆಗಸ್ಟ್ 06: ಶ್ರೀರಾಮ ಏನು ಬಿಜೆಪಿಯವರ ಸ್ವತ್ತಾ, ಅದು ಬಿಜೆಪಿಯವರು ಮಾಡಿಕೊಂಡಿರುವುದು ಅಷ್ಟೇ. ಶ್ರೀರಾಮ 130 ಕೋಟಿ ಭಾರತೀಯರ ಸ್ವತ್ತು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ ಸುರೇಶ್ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Recommended Video
ರಾಮನಗರದ ಬಸವನಪುರದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಇ-ಖಾತಾ ಆಂದೋಲನಕ್ಕೆ ಚಾಲನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಮತ್ತು ಪ್ರತಿಪಕ್ಷಗಳಿಗೆ ಆಹ್ವಾನ ನೀಡದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೊದಲು ಸರ್ವಾಧಿಕಾರಿ ಧೋರಣೆ ಬಿಡಬೇಕು ಎಂದು ಕಿಡಿಕಾರಿದರು.
ಕೊರೊನಾ ಹೆಸರಲ್ಲಿ ಸರ್ಕಾರ ಜನರನ್ನು ಕತ್ತಲಲ್ಲಿ ಇಟ್ಟಿದೆ: ಸಂಸದ ಡಿ.ಕೆ ಸುರೇಶ್
ಕೋವಿಡ್-19 ಸಂಕಷ್ಟ ಕಾಲದಲ್ಲಿ ರಾಜ್ಯ ಸರಕಾರ ಜನರಿಗೆ ನಯ ಪೈಸೆ ಕೊಟ್ಟಿಲ್ಲ, ಕೇವಲ ಭಾಷಣ ಮಾಡೋದು, ಟಿವಿಗಳಲ್ಲಿ ಪ್ರಚಾರ ಪಡೆಯೋದು ಅಷ್ಟೆ ಇವರ ಸಾಧನೆಯಾಗಿದೆ. ಬಿಜೆಪಿ ಸರ್ಕಾರ ಹಗರಣದ ಸರಮಾಲೆ ಬಿಟ್ಟರೆ ಏನು ಮಾಡಿದೆ ಅಂತಾ ಪ್ರಶ್ನೆ ಮಾಡಿದರು.
ಕೊರೊನಾ ವೈರಸ್ ಭೀತಿಯಿಂದ ಜನ ನಲುಗಿದ್ದಾರೆ, ಹಾಗಾಗಿ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳ ವಸತಿ ಮತ್ತು ವಾಣಿಜ್ಯ ಸ್ವತ್ತುಗಳ ತೆರಿಗೆಯನ್ನು ಮನ್ನಾ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಈ ಸಂಬಂಧ ನಾನು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಂದು ಕಡೆ ಕೊರೊನಾ ಸೋಂಕು ಮತ್ತೊಂದು ಕಡೆ ಪ್ರವಾಹ ಬಂದಿದೆ, ರಾಜ್ಯ ಸರಕಾರ ಇನ್ನಾದರೂ ಎಚ್ಚೆತ್ತು ಕೆಲಸ ಮಾಡಲಿ, ಈಗ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಕಷ್ಟ ಎದುರಿಸಬೇಕಾಗುತ್ತದೆ ಎಂದು ರಾಜ್ಯ ಸರಕಾರವನ್ನು ಎಚ್ಚರಿಸಿದರು.
ಹವಾಮಾನ ಇಲಾಖೆ 15 ದಿನಗಳ ಹಿಂದೆಯೇ ಮಳೆಯ ಮುನ್ಸೂಚನೆ ನೀಡಿತ್ತು, ಇಷ್ಟಾದರೂ ರಾಜ್ಯ ಸರಕಾರ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಅಂತಾ ರಾಜ್ಯ ಸರಕಾರವನ್ನು ಟೀಕಿಸಿದರು.