ದೆಹಲಿ ಗಲಭೆಗೆ ಬಿಜೆಪಿಯೇ ನೇರ ಕಾರಣ ಎಂದ ಸಂಸದ ಡಿ.ಕೆ.ಸುರೇಶ್
ರಾಮನಗರ, ಫೆಬ್ರವರಿ 28: ದೆಹಲಿಯಲ್ಲಿ ನಡೆದ ಗಲಭೆಗೆ ಬೇರೆ ಯಾರು ಕಾರಣ ಅಲ್ಲ ಬಿಜೆಪಿಯೇ ನೇರ ಕಾರಣ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದರು.
ಬಿಡದಿಯಲ್ಲಿ ಬೈರಮಂಗಲ ಕೆರೆ ಶುದ್ಧೀಕರಣ ಕಾಮಗಾರಿ ವಿಕ್ಷೀಸಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ದೆಹಲಿಯಲ್ಲಿ ನಡೆದ ಗಲಭೆಗೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರೇ ನೇರ ಕಾರಣ ಎಂದರು.
ಬಿಜೆಪಿ ಅಧಿಕಾರಕ್ಕಾಗಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿದೆ: ಎಚ್ಡಿಕೆ
ಬಿಜೆಪಿ ಮುಖಂಡರ ಪ್ರಚೋದನೆಯೇ ಗಲಭೆಗೆ ಕಾರಣ. ಅಮಾಯಕರು ಗಲಭೆಯಲ್ಲಿ ಮೃತಪಟ್ಟಿದ್ದಾರೆ. ಗಲಭೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆಗೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಅಗ್ರಹಿಸಿವೆ. ಬಿಜೆಪಿವರು ತಮ್ಮ ಮೇಲಿನ ತಪ್ಪನ್ನು ಮುಚ್ಚಿಹಾಕಲು ಕಾಂಗ್ರೆಸ್ ನಾಯಕರು ಹಾಗೂ ಮುಖಂಡರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.
ಇನ್ನು ಮಹದಾಯಿ ನದಿ ನೀರು ಹಂಚಿಕೆ ವಿಚಾರ ಸಂಬಂಧಿಸಿದಮತೆ ಸಂಸದ ಡಿ.ಕೆ ಸುರೇಶ್ ಪ್ರತಿಕ್ರಿಯೆ ನೀಡಿ, ಅಧಿಸೂಚನೆ ಹೊರಡಿಸಿರುವುದು ಸಂತೋಷದ ವಿಚಾರ. ಈ ಹೋರಾಟ ಆ ಭಾಗದ ರೈತರಿಗೆ ಸಿಕ್ಕ ಜಯ ಹಾಗೂ ಗೌರವ. ರಾಜ್ಯ ಸರ್ಕಾರ ಕಾಲಹರಣ ಮಾಡದೇ ಕಾಮಗಾರಿಯನ್ನು ತಕ್ಷಣವೇ ಕೈಗೆತ್ತಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು. ಹಿಂದಿನ ಸರ್ಕಾರಗಳು ಕಾರ್ಯರೂಪ ಮಾಡಿವೆ, ಅದರಂತೆ ಸಂಪೂರ್ಣ ನೀರನ್ನು ಬಳಕೆ ಮಾಡಿಕೊಳ್ಳಬೇಕಿದೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮೇಕೆದಾಟು ಯೋಜನೆ ವಿಚಾರವಾಗಿ ನಾನು ನೀರಾವರಿ ಸಚಿವರ ಬಳಿ ಚರ್ಚೆ ಮಾಡಿದ್ದೇನೆ. ಸುಪ್ರೀಂ ಕೋರ್ಟ್ನಿಂದ ಯಾವುದೇ ತಡೆಯಾಜ್ಞೆ ಇಲ್ಲ. ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಮುಂದಿನ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಕೇಂದ್ರದ ಮೇಲೆ ಒತ್ತಡ ತಂದು ಅನುಮತಿ ಪಡೆದು ಕಾಮಗಾರಿ ಮಾಡುವುದಕ್ಕೆ ನಮ್ಮ ಸಹಕಾರವಿದೆ. ರಾಜಕೀಯ ಏನೇ ಇದ್ದರೂ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ಕೊಡುತ್ತೇವೆ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರ ಅಯ್ಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸದ ಸಂಸದ ಡಿ.ಕೆ.ಸುರೇಶ್, ನನಗೆ ಏನು ಗೊತ್ತಿಲ್ಲ ನಿಮಗೆ ಗೊತ್ತಿದ್ದರೆ ಹೇಳಿ ತಿಳಿದುಕೊಳ್ಳುತ್ತೇನೆ. ನನಗೆ ಏನಿದ್ದರೂ ನನ್ನ ಕ್ಷೇತ್ರದ ಅಭಿವೃದ್ಧಿಯ ಚಿಂತನೆ. ಬೇರೆ ಇನ್ನೇನು ಆಲೋಚನೆ ನನ್ನಲ್ಲಿ ಇಲ್ಲ, ಕೆಪಿಸಿಸಿ, ಪಕ್ಷವನ್ನೆಲ್ಲಾ ಚುನಾವಣೆ ಬಂದಾಗ ನೋಡುತ್ತೇನೆ. ಸದ್ಯಕ್ಕೆ ನನ್ನ ಕ್ಷೇತ್ರದ ಜನರ ಕಷ್ಟ ಸುಖ ಮಧ್ಯೆ ಕ್ಷೇತ್ರಕ್ಕೆ ಆಗಬೇಕಾದ ಕೆಲಸಗಳ ಕಡೆ ಗಮನ ನೀಡುತ್ತೇನೆ ಎಂದರು.