ಡಿಕೆಶಿ 4 ವರ್ಷಗಳ ಹಿಂದೆಯೇ ಕೆಪಿಸಿಸಿ ಅಧ್ಯಕ್ಷರಾಗಬೇಕಿತ್ತು; ಸಿ.ಎಂ.ಲಿಂಗಪ್ಪ
ರಾಮನಗರ, ಮಾರ್ಚ್ 12: "ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ 4 ವರ್ಷಗಳ ಹಿಂದೆಯೇ ಸಿಗಬೇಕಿತ್ತು. ಆದರೆ ತಡವಾಗಿ ಸಿಕ್ಕಿದೆ, ಪಕ್ಷದ ನಾಯಕರಿಗೆ ಧನ್ಯವಾದ ಹೇಳುತ್ತೇನೆ" ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಸಂಜೆ ನಗರದ ಕಾಂಗ್ರೆಸ್ ಕಚೇರಿ ಮುಂದೆ ಡಿಕೆಶಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಅಮಿತ್ ಶಾ ಡಿಕೆಶಿ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ; ಲಿಂಗಪ್ಪ
"ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಕಡಿಮೆಯಾಗಿದೆ. ಹಾಗಾಗಿ ಇಷ್ಟು ದಿನ ವಿಳಂಬವಾಯ್ತು. ಪಕ್ಷದೊಳಗಿನ ಕೆಲ ಬದಲಾವಣೆಗಳಿಂದ ಶಿಸ್ತು ಕಡಿಮೆಯಾಯ್ತು. ಜೆಡಿಎಸ್ ಜೊತೆಗಿನ ಹೊಂದಾಣಿಕೆಯೂ ಇದಕ್ಕೆ ಒಂದು ಕಾರಣ. ಮುಂದೆ ಡಿ.ಕೆ.ಶಿವಕುಮಾರ್ ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ" ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಸಮರ್ಥವಾಗಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಎಂಎಲ್ಸಿ ಲಿಂಗಪ್ಪ, ಡಿಕೆಶಿ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಪಕ್ಷ ಒಡಕಾಗುತ್ತದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದರು. ಇದುವರೆಗೂ ಈಶ್ವರಪ್ಪ ಅವರು ಹೇಳಿದ ಮಾತು ಯಾವುದೂ ನಿಜವಾಗಿಲ್ಲ ಎಂದು ವ್ಯಂಗ್ಯವಾಡಿದರು.