ವಿಡಿಯೋ: ನನ್ನ ಮತ್ತು ಪಕ್ಷದ ನಡುವೆ ಡಿಕೆಶಿ ವಿಷ ಬೀಜ ಬಿತ್ತುತ್ತಿದ್ದಾರೆ: ಸಿಪಿವೈ
ರಾಮನಗರ, ಜುಲೈ 30: ನನ್ನ ಮತ್ತು ಬಿಜೆಪಿ ಪಕ್ಷದ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ನೂತನ ಮೇಲ್ಮನೆ ಸದಸ್ಯ ಸಿ.ಪಿ ಯೋಗೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿ, ಡಿಕೆಶಿ ಹೇಳಿಕೆಗೆ ಸಿಪಿವೈ ಸ್ಪಷ್ಟನೆ ನೀಡಿದ್ದಾರೆ.
Recommended Video
ಕಳೆದ 15 ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರಲು ನನ್ನ ಬಳಿಗೆ ಬಂದು 5 ನಿಮಿಷ ನನ್ನ ಕಾಲು ಹಿಡಿದಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಧ್ಯಮಗಳಲ್ಲಿ ಗಾಳಿ ಸುದ್ದಿ ಹರಡಿ, ನನ್ನ ಮತ್ತು ಬಿಜೆಪಿ ಪಕ್ಷದ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಸಿ.ಪಿ ಯೋಗೇಶ್ವರ್ ಆರೋಪ ಮಾಡಿದರು.
ಎಚ್ಡಿಕೆ ಮತ್ತು ಡಿಕೆಶಿ ಇಬ್ಬರೂ ರಿಟೈರ್ಡ್ ಕುದುರೆಗಳು; ಸಿ.ಪಿ.ಯೋಗೇಶ್ವರ್
ಕಳೆದ 6 ತಿಂಗಳ ಹಿಂದೆಯೇ ಪಕ್ಷದ ವರಿಷ್ಠರು ನೀನು ಚುನಾವಣೆಯಲ್ಲಿ ಸೋತಿದ್ದರೂ ಪರವಾಗಿಲ್ಲ. ನಿನ್ನನ್ನು ಮೇಲ್ಮನೆ ಸದಸ್ಯನನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಮುಖ್ಯಮಂತ್ರಿಗಳು ಕೂಡಾ 3-4 ತಿಂಗಳಿನಿಂದ ಹಲವಾರು ಬಾರಿ ಹೇಳಿದ್ದಾರೆ ಮತ್ತು ಕಳೆದ ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದಾಗ ನಿನ್ನನ್ನು ಮೇಲ್ಮನೆಗೆ ನಾಮಕರಣ ಮಾಡುತ್ತಿದ್ದೇನೆ ಎಂದು ಹೇಳಿದ್ದರು ಎಂದು ಸ್ಪಷ್ಟಪಡಿಸಿದರು.
ಶಿವಕುಮಾರ್ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು
ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳು ಮತ್ತು ನಮ್ಮ ಪಕ್ಷ ನನ್ನನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಿದೆ. ನಾನು ಪಕ್ಷ ಸಂಘಟನೆಯಲ್ಲಿ ಕಾರ್ಯ ನಿರತನಾಗಿದ್ದೇನೆ. ವಿಶ್ವಾಸ, ಸಂಬಂಧ ಗಟ್ಟಿಯಾಗಿರುವ ಸಂದರ್ಭದಲ್ಲಿ ನನ್ನ ಮತ್ತು ಪಕ್ಷದ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು ಎಂದರು.
ಕೊತ್ವಾಲ್ ರಾಮಚಂದ್ರ ಸಂಸ್ಕೃತಿಯಿಂದ ಹೊರ ಬರಲಿ
ನಾನು ಡಿಕೆಶಿಯವರ ಕಾಲು ಹಿಡಿದಿಲ್ಲ, ಮುಂದೆಯೂ ಹಿಡಿಯುವುದಿಲ್ಲ. ಅವರು ಮೊದಲು ಕೊತ್ವಾಲ್ ರಾಮಚಂದ್ರ ಸಂಸ್ಕೃತಿಯಿಂದ ಹೊರಬಂದು ಗೌರಯುತವಾಗಿ ಮಾತನಾಡಲಿ. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ, ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ಮಾತನಾಡುವುದನ್ನು ಕಲಿಯಲಿ ಎಂದು ತಿಳಿಸಿದರು.
ಯೋಗೇಶ್ವರ್ ಜೊತೆ ರಹಸ್ಯ ಮಾತುಕತೆ ಬಿಚ್ಚಿಟ್ಟ ಡಿಕೆಶಿ, ಯಡಿಯೂರಪ್ಪ ಟೆನ್ಷನ್!
ನನ್ನ ಮತ್ತು ಯಡಿಯೂರಪ್ಪ ಸಂಬಂಧ ಹಾಳು ಮಾಡಲು ಡಿಕೆಶಿ ಯತ್ನ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರನ್ನು ಅಧಿಕಾರದಿಂದ ಕೆಳಗಿಳಿಸಲು ನಾನು ಪ್ರಯತ್ನ ಮಾಡುತ್ತಿದ್ದೇನೆ ಎಂದು ಪದೇ ಪದೇ ಆರೋಪ ಮಾಡುವ ಮೂಲಕ ಡಿ.ಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ಇಬ್ಬರು ಸಹೋದರರು ನನ್ನ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನಡುವಿನ ಸಂಬಂಧ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪನವರೇ ಮುಂದುವೆರೆಯುತ್ತಾರೆ
ರಾಜ್ಯದಲ್ಲಿ ಸರ್ಕಾರ ಬರಲು ಮತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ನನ್ನದು ಅಳಿಲು ಸೇವೆ ಇದೆ ಎಂದು ರಾಜ್ಯದ ಜನರ ಮುಂದೆ ಸ್ಪಷ್ಟಪಡಿಸುತ್ತೇನೆ ಎಂದರು. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಇನ್ನೂ ಮೂರು ವರ್ಷ ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪನವರೇ ಮುಂದುವೆರೆಯುತ್ತಾರೆ. ನನ್ನ ಕನಸಿನ ಸರ್ಕಾರವನ್ನು ಉರುಳಿಸುವ ಸಂಚು, ಪಿತೂರಿ ಮಾಡುವ ಅವಶ್ಯಕತೆ ಇಲ್ಲ ಎಂದು ತಮ್ಮ ವಿಡಿಯೋ ಹೇಳಿಕೆಯಲ್ಲಿ ಮೇಲ್ಮನೆ ಸದಸ್ಯ ಸಿ.ಪಿ ಯೋಗೇಶ್ವರ್ ಸ್ಪಷ್ಟಪಡಿಸಿದ್ದಾರೆ.