ಸಾಮಾಜಿಕ ಅಂತರವಿಲ್ಲದೇ ಸಿ.ಪಿ ಯೋಗೇಶ್ವರ್ ಹುಟ್ಟುಹಬ್ಬ ಆಚರಣೆ
ರಾಮನಗರ, ಆಗಸ್ಟ್ 30: ರಾಜ್ಯದಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರೆಸಿದ್ದರೂ ಜನಪ್ರತಿನಿಧಿಗಳು ಮಾತ್ರ ತಮ್ಮ ಹುಟ್ಟುಹಬ್ಬವನ್ನು ಯಾವುದೇ ಭೀತಿಯಿಲ್ಲದೆ ಆಚರಿಸಿಕೊಳ್ಳುತ್ತಿದ್ದಾರೆ.
ಶನಿವಾರದಂದು ರಾಮನಗರ ಜಿಲ್ಲೆಯಲ್ಲಿ ಕೋವಿಡ್-19 ಗೆ ಇಬ್ಬರು ಬಲಿಯಾದರೆ, 152 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆದರೂ ಯಾವುದೇ ಅಳುಕಿಲ್ಲದೇ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಅವರು ಸಾಮಾಜಿಕ ಅಂತರವಿಲ್ಲದೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.
'ಕಳ್ಳನ ಮನಸ್ಸು ಹುಳ್ಳಗೆ' ಎಂದು ಡಿಕೆಶಿಗೆ ಟಾಂಗ್ ಕೊಟ್ಟ ಸಿ.ಪಿ ಯೋಗೇಶ್ವರ್
ಎಂಎಲ್ಸಿ ಸಿ.ಪಿ ಯೋಗೇಶ್ವರ್ ತಮ್ಮದೇ ಸರ್ಕಾರ ರೂಪಿಸಿರುವ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ನೂರಾರು ಜನರ ಮಧ್ಯೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಿ.ಪಿ ಯೋಗೀಶ್ವರ್ ತಮ್ಮ 59ನೇ ವರ್ಷದ ಜನ್ಮದಿನವನ್ನು ಸಂಭ್ರಮದಿಂದ ಆಚರಣೆ ಮಾಡಿಕೊಂಡರು.
ಬಿಜೆಪಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಮಧ್ಯಾಹ್ನ ಕಲ್ಯಾಣ ಮಂಟಪಕ್ಕೆ ಆಗಮಿಸಿದ ಯೋಗೀಶ್ವರ್ ಗೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬೃಹತ್ ಗಾತ್ರದ ಹೂವಿನ ಹಾರಗಳನ್ನು ಹಾಕಿ ಕೇಕ್ ಕತ್ತರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿದರು.
ಇತ್ತ ಮಾಧ್ಯಮದವರನ್ನು ಗಮನಿಸಿದ ಸಿಪಿವೈ, ತಕ್ಷಣ ಎಚ್ಚೆತ್ತು ಮಾಧ್ಯಮದವರ ಬಳಿ ಬಂದು ಈ ಸಭೆಯಲ್ಲಿ ಲೋಪವಾಗಿದೆ ಕ್ಷಮೆ ಇರಲಿ ಅಂತಾ ಮನವಿ ಮಾಡಿದರು. ನನ್ನ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಉತ್ಸಾಹ ತೋರಿದ್ದಾರೆ, ಇಲ್ಲಿ ಸಾಮಾಜಿಕ ಅಂತರ ಪಾಲನೆಯಾಗಿಲ್ಲ, ಇಲ್ಲಿ ನಾನು ಅಸಹಾಯಕನಾಗಿದ್ದೇನೆ ಎಂದು ತಮ್ಮ ಅಸಹಾಯಕತೆ ಹೇಳಿಕೊಂಡರು.