ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಜೆಡಿಎಸ್ ಶಾಸಕ ಮಂಜುನಾಥ್
ರಾಮನಗರ ಮೇ. 22 : ಶಾಸಕರಾಗಿ ಆಯ್ಕೆಯಾದ ದಿನದಿಂದ ತಮ್ಮ ಪಕ್ಷದ ವರಿಷ್ಠರ ಕಟ್ಟಪ್ಪಣೆಯಂತೆ ರೆಸಾರ್ಟ್ ವಾಸ್ತವ್ಯದಲ್ಲಿರುವ ಶಾಸಕರು ತಮ್ಮ ಕ್ಷೇತ್ರಗಳತ್ತ ಮುಖ ಮಾಡಿಲ್ಲ. ಆದರೆ ರಾಮನಗರ ಜಿಲ್ಲೆ ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜುನಾಥ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳವ ಸಲುವಾಗಿ ಕ್ಷೇತ್ರಕ್ಕೆ ಬಂದಿದ್ದರು.
ಚುನಾವಣಾ ಸಮರದಲ್ಲಿ ಗೆದ್ದು, ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಥಮಬಾರಿಗೆ ಕ್ಷೇತ್ರಕ್ಕೆ ಬಂದ ಶಾಸಕರನ್ನು ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಾಯಕನ ಪರ ಘೋಷಣೆ ಕೂಗಿ, ವಿವಿಧ ರೀತಿಯ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಆಚರಿಸಿದರು.
ಸದ್ಯ ಎಲ್ಲರ ಬಾಯಲ್ಲೂ ಕೇಳಿ ಬರುತ್ತಿರುವುದು ಇದೊಂದೇ ಲೆಕ್ಕಚಾರ!
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಂಜುನಾಥ್ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಅದೆಲ್ಲವು ಎಚ್ ಡಿಕೆ ಹಾಗೂ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ನುಣಿಚಿಕೊಂಡರು. ಕ್ಷೇತ್ರದ ಜನರು ನನ್ನ ಹುಟ್ಟು ಹಬ್ಬಕ್ಕೆ ಶಾಸಕ ಸ್ಥಾನವನ್ನು ಗಿಫ್ಟ್ ನೀಡಿದ್ದಾರೆ ಮುಂದಿನ ದಿನಗಳಲ್ಲಿ ಇವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷ ಆಡಳಿತದ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದೆ. ಅದೇ ರೀತಿ ಮಾಗಡಿ ಕ್ಷೇತ್ರದಲ್ಲಿ ಕೇವಲ ಅಭಿವೃದ್ಧಿ ದೃಷ್ಠಿಯಿಂದ ಇಲ್ಲಿನ ಕಾಂಗ್ರೆಸ್ ನಾಯಕರ ಜತೆಗೆ ದಾರಳ ಮನಸ್ಸು ಮಾಡಿ ಹೊಂದಿಕೊಂಡು ಹೋಗುತ್ತೇನೆ ಎನ್ನುವ ಮೂಲಕ ತಮ್ಮ ವಿರೋಧಿ ಎಚ್.ಸಿ.ಬಾಲಕೃಷ್ಣಗೆ ಟಾಂಗ್ ನೀಡಿದರು.