ಸ್ವಚ್ಛತೆ ಇಲ್ಲದೇ ವಸತಿ ಶಾಲೆ ಮಕ್ಕಳಲ್ಲಿ ಹಬ್ಬಿದ ಚರ್ಮ ರೋಗ; ಸಚಿವ ಸುರೇಶ್ ಕುಮಾರ್ ಎಚ್ಚರಿಕೆ
Recommended Video
ರಾಮನಗರ, ಆಗಸ್ಟ್ 29: ಸ್ವಚ್ಛತೆ ಕೊರತೆಯಿಂದಾಗಿ ಸಾಮೂಹಿಕವಾಗಿ ವಿದ್ಯಾರ್ಥಿಗಳಲ್ಲಿ ಚರ್ಮ ರೊಗ ಕಾಣಿಸಿಕೊಂಡು ಸುದ್ದಿಯಾಗಿದ್ದ ರಾಮನಗರದ ಕೈಲಾಂಚ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಇಂದು ಭೇಟಿ ನೀಡಿದ್ದರು.
ವಸತಿ ಶಾಲೆಯಲ್ಲಿ ವಾರಕ್ಕೊಮ್ಮೆ ನೀರು; ಮಕ್ಕಳಿಗೆ ವ್ಯಾಪಿಸಿದೆ ಅಂಟು ರೋಗ
ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಚರ್ಮರೋಗ ತಗುಲಿದ್ದು, ವಸತಿ ಶಾಲೆಯಲ್ಲಿನ ಅಶುದ್ಧತೆಯೇ ಇದಕ್ಕೆ ಕಾರಣ ಎನ್ನಲಾಗಿತ್ತು. ಇಂದು ಸುರೇಶ್ ಕುಮಾರ್ ಅವರು ಆ ವಸತಿ ಶಾಲೆಗೆ ತೆರಳಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
ವಾರಕ್ಕೊಮ್ಮೆ ಸ್ನಾನ ಸಾಕೇ?
ಕೊಡಗು ಪ್ರವಾಹ ಪೀಡಿತ ಪ್ರದೇಶಗಳ ಭೇಟಿಗೆ ಬಂದಿದ್ದ ಸಚಿವ ಸುರೇಶ್ ಕುಮಾರ್ ಅವರು ಮಾಧ್ಯಮಗಳಲ್ಲಿ ಈ ವಸತಿ ಶಾಲೆ ಮಕ್ಕಳ ಸುದ್ದಿ ನೋಡಿ ರಾಮನಗರಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದರು.
ಮಕ್ಕಳಲ್ಲಿ ಚರ್ಮ ರೋಗ ಇರುವುದು ದೃಢಪಟ್ಟಿದ್ದು, ಚಿಕ್ಕ ವಸತಿ ಶಾಲೆಯಲ್ಲಿ ಮಕ್ಕಳು ಇಕ್ಕಟ್ಟಿನಿಂದ ಮಲಗುತ್ತಿರುವ ವಿಷಯವೂ ತಿಳಿದುಬಂದಿದೆ. ಸದ್ಯಕ್ಕೆ ನೀರಿನ ಸಮಸ್ಯೆಯಿದ್ದು, ವಾರಕ್ಕೊಮ್ಮೆ ಸ್ನಾನ ಮಾಡುತ್ತಿದ್ದಾರೆ. ಪ್ರತಿನಿತ್ಯ ಸ್ನಾನಕ್ಕೆ ಅವಕಾಶ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಈ ಕುರಿತು ಕೂಡಲೇ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಪರ್ಯಾಯ ಜಾಗಕ್ಕೆ ಹಾಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ತುರ್ತು ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.
ನಮ್ಮ ಮಗು ಈ ಶಾಲೆಯಲ್ಲಿದ್ದರೆ ಹೀಗೇ ಆಗುತ್ತಿತ್ತಾ?
"ಮುಂದಿನ ದಿನಗಳಲ್ಲಿ ಹೀಗಾಗದಂತೆ ಕ್ರಮ ವಹಿಸಲಾಗುವುದು. ಮಕ್ಕಳ ಜೀವದೊಂದಿಗೆ ಚೆಲ್ಲಾಟ ಆಡಬಾರದು. ನಮ್ಮ ಮಗು ಈ ವಸತಿ ಶಾಲೆಯಲ್ಲಿದೆ ಎಂದಿದ್ದರೆ ಹೀಗೇ ಆಗುತ್ತಿತ್ತಾ" ಎಂದಿದ್ದಾರೆ ಸುರೇಶ್ ಕುಮಾರ್.
ಈ ಕುರಿತು ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ಚರ್ಚೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದರು. ನಾಳೆ ಶಿಕ್ಷಣ ಇಲಾಖೆಯೊಂದಿಗೆ ಸಭೆ ನಡೆಸುವುದಾಗಿಯೂ ತಿಳಿಸಿದರು.
ಚಾಮರಾಜನಗರದಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಸರ್ಕಾರಿ ಶಾಲೆ
ಹಾಸ್ಟೆಲ್ ವಾರ್ಡನ್ ತಲೆದಂಡ ಆಗುತ್ತಾ...?
ಮಕ್ಕಳಿಗೆ ಹರಡಿರುವ ಚರ್ಮ ರೋಗ ಸಂಬಂಧ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯ ವಹಿಸಿದ್ದರು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಸ್ವಚ್ಛತೆ ಕೊರತೆಯಿಂದ ಮಕ್ಕಳಲ್ಲಿ ಚರ್ಮರೋಗ ಉಲ್ಬಣಿಸಿದೆ. ಹೀಗಿದ್ದರೂ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ನಿರ್ಲಕ್ಷ್ಯ ವಹಿಸಿದ್ದಾರೆ. ಮಕ್ಕಳಿಗೆ ಕಜ್ಜಿ ಕಾಣಿಸಿಕೊಂಡಿದ್ದು, ಮೈಯೆಲ್ಲ ಹಬ್ಬಿಕೊಂಡಿದೆ. ಹಾಸ್ಟೆಲ್ ನ ಬಹುತೇಕ ಮಕ್ಕಳಲ್ಲಿ ಇದು ಒಬ್ಬರಿಂದ ಒಬ್ಬರಿಗೆ ಹಬ್ಬಿದೆ. ಕೈ ಕಾಲು, ಹೊಟ್ಟೆ, ಗುಪ್ತಾಂಗಗಳಲ್ಲೂ ಚರ್ಮ ಕಿತ್ತು ಬಂದು ರಕ್ತ ಸೋರುತ್ತಿದೆ ಎಂಬ ಮಾಹಿತಿ ಬಂದಿತ್ತು.
"ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು" ಎಂದಿದ್ದಾರೆ ಸುರೇಶ್ ಕುಮಾರ್. ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಅವರು.
ಇಡೀ ಹಾಸ್ಟೆಲ್ ಗೆ ಮೂರೇ ಶೌಚಾಲಯ
ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದಿರುವ ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿಯ 104 ಬಾಲಕರು ಹಾಗೂ 28 ಬಾಲಕಿಯರು ಸೇರಿದಂತೆ ಒಟ್ಟು 138 ವಿದ್ಯಾರ್ಥಿಗಳಿದ್ದಾರೆ. ಎಲ್ಲರನ್ನು ಎರಡು ಕಿರಿದಾದ ರೂಂಗಳಲ್ಲಿ ಇಡಲಾಗಿದೆ. ನಾಲ್ಕು ಕೊಠಡಿಗಳು ಮಾತ್ರ ಇಲ್ಲಿದ್ದು. ಒಂದು ಕಟ್ಟಡದಲ್ಲಿನ ಎರಡು ಕೊಠಡಿಗಳು ಬಾಲಕಿಯರಿಗೆ ಮೀಸಲಿದೆ. ಮತ್ತೊಂದು, ಕಟ್ಟಡದಲ್ಲಿನ ಎರಡು ಕೊಠಡಿಗಳಲ್ಲಿ ನೂರಕ್ಕೂ ಹೆಚ್ಚು ಬಾಲಕರು ವಾಸಿಸುತ್ತಿದ್ದಾರೆ.
ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಇಡೀ ಹಾಸ್ಟೆಲ್ ಗೆ ಮೂರು ಶೌಚಾಲಯ ಮತ್ತು ಸ್ನಾನದ ಗೃಹಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಒಂದು ಬಾಲಕಿಯರಿಗೆ ಹಾಗೂ ಉಳಿದ ಎರಡು ಬಾಲಕರಿಗೆ ಮೀಸಲಾಗಿದೆ. ಅದರಲ್ಲೂ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ.