ಶಾಸಕ ರೇಣುಕಾಚಾರ್ಯಗೆ ಎಚ್ಚರಿಕೆ ನೀಡಿದ ಸಿಪಿವೈ ಬೆಂಬಲಿಗರು
ರಾಮನಗರ, ಮೇ 28: ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಸಚಿವ ಸಿ.ಪಿ ಯೋಗೇಶ್ವರ್ರ ಪ್ರಯತ್ನಕ್ಕೆ ಸೊಪ್ಪು ಹಾಕಿಲ್ಲ. ಈಗ ಯೋಗೇಶ್ವರ್ ವಿರುದ್ಧ ಬಿಜೆಪಿಯ ಹಲವು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಚನ್ನಪಟ್ಟಣ ತಾಲ್ಲೂಕು ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿ, ಎಚ್ಚರಿಕೆ ನೀಡಿದ್ದಾರೆ.
ಚನ್ನಪಟ್ಟಣ ತಾಲ್ಲೂಕು ಬಿಜೆಪಿ ಮುಖಂಡರು ಹಾಗೂ ಸಚಿವ ಸಿ.ಪಿ ಯೋಗೇಶ್ವರ್ ಬೆಂಬಲಿಗರಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ಸರಕಾರದ ಗೊಂದಲ ಬಗ್ಗೆ ಮಾತನಾಡಿದರು.
ನಮ್ಮ ನಾಯಕ ಸಿ.ಪಿ ಯೋಗೇಶ್ವರ್ ಬಗ್ಗೆ ಹಲವು ಶಾಸಕರು ನಾಲಿಗೆ ಹಿಡಿತವಿಲ್ಲದೆ ಮಾತುಗಳನ್ನಾಡಿದ್ದಾರೆ. ಸಿ.ಪಿ ಯೋಗೇಶ್ವರ್ ವಾರಕ್ಕೊಮ್ಮೆ ದೆಹಲಿಗೆ ಹೋಗುವುದು ಸಹಜ. ಇಲಾಖೆಯ ಕೆಲಸದ ಮೇಲೆ ದೆಹಲಿಗೆ ಹೋಗಿ ಬರುತ್ತಾರೆ ಎಂದರು.
ಸಿ.ಪಿ ಯೋಗೇಶ್ವರ್ ಸರಕಾರ ಬೀಳಿಸುವ ಹುನ್ನಾರ ಮಾಡುತ್ತಿದ್ದಾರೆಂದು ಬಿಂಬಿಸುತ್ತಿದ್ದಾರೆ. ಕೆಲ ಶಾಸಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ನಾಯಕ ಸಿ.ಪಿ ಯೋಗೇಶ್ವರ್ರನ್ನು ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ. ಇದೇ ಎಂ.ಪಿ ರೇಣುಕಾಚಾರ್ಯ ಸಿಎಂ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಮಾತನಾಡಿದ್ದರು ಎಂದು ನೆನಪಿಸಿದರು.
ನಮ್ಮ ನಾಯಕರ ವಿರುದ್ಧ ಮಾತನಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯರಿಗೆ ಎಚ್ಚರಿಕೆ ನೀಡಿದ ಸಚಿವ ಸಿ.ಪಿ ಯೋಗೇಶ್ವರ್ ಬೆಂಬಲಿಗರು, ಅವರ ಇತಿಹಾಸ ರಾಜ್ಯದ ಎಲ್ಲಾ ಜನರಿಗೂ ಗೊತ್ತಿದೆ ಎಂದು ಲೇವಡಿ ಮಾಡಿದರು.
Recommended Video
ಸಚಿವ ಸಿ.ಪಿ ಯೋಗೇಶ್ವರ್ ಅವರು ಸಿಎಂ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿಲ್ಲ. ಆದರೂ ಎರಡ್ಮೂರು ಶಾಸಕರು ನಮ್ಮ ಯೋಗೇಶ್ವರ್ ವಿರುದ್ಧ ಮಾತನಾಡುತ್ತಿದ್ದಾರೆ. ಮುಂದೆ ಇದೇ ರೀತಿ ಮಾತನಾಡಿದರೆ ಅವರ ಮನೆ ಮುಂದೆ ಕ್ಷೇತ್ರದ ಜನ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಚನ್ನಪಟ್ಟಣದ ಬಿಜೆಪಿ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಸಿದರು.