"ಎಚ್ಡಿಕೆ ಅಧಿಕಾರವಧಿಯಲ್ಲಿ ತಮ್ಮ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ನೀಡಿಲ್ಲ''
ರಾಮನಗರ, ಫೆಬ್ರವರಿ 25: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ನಡೆಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಚನ್ನಪಟ್ಟಣ ತಾಲ್ಲೂಕಿನ ಯಾವೊಬ್ಬ ಮುಖಂಡರನ್ನು ಚನ್ನಪಟ್ಟಣ ಪ್ರಾಧಿಕಾರ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ. ನಾವು ಇದೀಗ ಅಧ್ಯಕ್ಷರನ್ನು ಮಾಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ನೇರವಾಗಿ ಎಚ್ಡಿಕೆಗೆ ಟಾಂಗ್ ನೀಡಿದರು.
ರಾಮನಗರ ಜಿಲ್ಲೆ ಚನ್ನಪಟ್ಟಣ ಯೋಜನಾ ಪ್ರಾಧಿಕಾರ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿಪಿವೈ, ಚನ್ನಪಟ್ಟಣ ಯೋಜನಾ ಪ್ರಾಧಿಕಾರಕ್ಕೆ ಯಾವ ಮುಖಂಡರನ್ನು ಅಧ್ಯಕ್ಷರನ್ನಾಗಿ ಮಾಡುವ ಮನಸ್ಸು ಕೂಡ ಮಾಡಿರಲಿಲ್ಲ. ಕುಮಾರಸ್ವಾಮಿ ಅವರು ಅಲ್ಲಿ, ಇಲ್ಲಿ ತಾಲ್ಲೂಕಿನ ಅಭಿವೃದ್ಧಿ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ ಅಂತಾ ಕುಟುಕಿದರು.
ಐಎಂಎ ಹಗರಣ; ಎಚ್. ಡಿ. ಕುಮಾರಸ್ವಾಮಿ ಸ್ಪಷ್ಟನೆ
ಇನ್ನು ಇದೇ ಸಂದರ್ಭದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಳಾಂತರ ವಿಚಾರವಾಗಿ ಮಾತನಾಡಿ, ತಂತ್ರಜ್ಞಾನ ಹಾಗೂ ಅಧುನೀಕರಣ ಬದಲಾದಂತೆ ರೇಷ್ಮೆ ಮಾರುಕಟ್ಟೆ ಕೂಡ ಬದಲಾವಣೆ ಆಗುತ್ತಿದೆ. ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ರಾಮನಗರ-ಚನ್ನಪಟ್ಟಣ ಮಧ್ಯೆ ಹೈಟೆಕ್ ಮಾರುಕಟ್ಟೆ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
ಮಾರುಕಟ್ಟೆ ವಿಚಾರದಲ್ಲಿ ವಿರೋಧ ಮಾಡುವರು ಮಾಡಲಿ, ಮಾರುಕಟ್ಟೆ ನಿರ್ಮಾಣ ಮಾಡಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಸ್ಪಷ್ಟಪಡಿಸಿದರು.
ಇದೇ ವೇಳೆ ಮೀಸಲಾತಿ ವಿಚಾರವಾಗಿ ಸಮಾಜದಲ್ಲಿ ನೊಂದಿರುವ, ತುಳಿತಕ್ಕೆ ಒಳಗಾದ ಜಾತಿ, ಉಪಜಾತಿಗಳು ಇವೆ. ನಮ್ಮ ಸರಕಾರ ಸಂವಿಧಾನದ ಬದ್ಧವಾಗಿ ಏನು ನಿರ್ಧಾರ ತಗೆದುಕೊಳ್ಳಬೇಕೊ ಅದನ್ನು ತಗೆದುಕೊಳ್ಳುತ್ತದೆ. ನಿರ್ಮಾಲಾನಂದ ಸ್ವಾಮಿಗಳು ರಾಜ್ಯ ಸುತ್ತುತ್ತಾರೆ. ಅವರಿಗೆ ಸಮುದಾಯದ ನೋವು-ನಲಿವುಗಳ ಬಗ್ಗೆ ಅರಿವಿದೆ. ಅವರ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಸಿಪಿ ಯೋಗೇಶ್ವರ್ ಹೇಳಿದರು.