ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ: ಸ್ಪಷ್ಟನೆ ನೀಡಿದ ಸಚಿವ ಸಿ.ಪಿ ಯೋಗೇಶ್ವರ್
ರಾಮನಗರ, ಜೂನ್ 2: ಅಚ್ಚರಿ ಬೆಳವಣಿಗೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳನ್ನು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಭೇಟಿ ಮಾಡಿದರು. ಎಸ್ಕಾರ್ಟ್ ವಾಹನ ಬಿಟ್ಟು ಸ್ವಂತ ವಾಹನದಲ್ಲಿ ಬಂದ ಸಚಿವ ಸಿಪಿ ಯೋಗೇಶ್ವರ್ ರಾಮನಗರದ ಅರ್ಚಕರಹಳ್ಳಿ ಬಳಿಯ ಬಿಜಿಎಸ್ ಮಠದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದರು.
ನಂತರ ರಾಮನಗರದ ಬಿಜಿಎಸ್ ಮಠದಲ್ಲಿ ಸ್ವಾಮೀಜಿಗಳ ಭೇಟಿ ಬಳಿಕ ಸಚಿವ ಸಿ.ಪಿ ಯೋಗೇಶ್ವರ್ ಪ್ರತಿಕ್ರಿಯಿಸಿ, "ನಾನು ಕಳೆದ 3 ದಿನಗಳಿಂದ ಚನ್ನಪಟ್ಟಣದಲ್ಲೇ ಇದ್ದೇನೆ. ಹಾಗಾಗಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ನಾನು ಹಲವು ಬಾರಿ ಭೇಟಿ ಆಗುತ್ತೇನೆ, ಆದರೆ ಅದು ನಿಮ್ಮ ಕಣ್ಣಿಗೆ ಕಾಣಲ್ಲ, ವಿಶೇಷ ಸಂದರ್ಭದಲ್ಲಿ ಮಾತ್ರ ಕಾಣುತ್ತದೆ ಅಷ್ಟೇ'' ಎಂದರು.
ನನಗೆ ಈಗ ಬಹಳ ಏನು ಜವಾಬ್ದಾರಿ ಇಲ್ಲ, ಹಾಗಾಗಿ ಚನ್ನಪಟ್ಟಣದಲ್ಲೇ ಇದ್ದೇನೆ. ಬಿ.ವೈ ವಿಜಯೇಂದ್ರ ದೆಹಲಿ ಪ್ರವಾಸ ಮಾಡಿದ ವಿಚಾರವಾಗಿ ಕೇಳಿದಾಗ, ಯಾರೂ ಬೇಕಾದರೂ ದೆಹಲಿಗೆ ಹೋಗಬಹುದು, ಅದರಲ್ಲಿ ವಿಶೇಷ ಇಲ್ಲ. ಇನ್ನು ಸಚಿವ ಸಂಪುಟದಿಂದ ಕೈಬಿಡುವ ವಿಚಾರದ ಬಗ್ಗೆ, ನನಗೆ ಯಾವ ಬೆಳವಣಿಗೆಯೂ ಗೊತ್ತಿಲ್ಲ ಎಂದು ಜಾರಿಕೊಂಡರು.
ನಮ್ಮದು ರಾಷ್ಟ್ರೀಯ ಪಕ್ಷ, ಹೈಕಮಾಂಡ್ ಇದೆ ಅವರು ಮಾತನಾಡುತ್ತಾರೆ. ಸ್ನೇಹಿತರ ಮಾತಿನಿಂದ ನೋವಾಗಿದೆ, ಮುಂದೆ ಎಲ್ಲದಕ್ಕೂ ಉತ್ತರ ಕೊಡುವ ಸಂದರ್ಭ ಬರಲಿದೆ ಎಂದ ಸಚಿವ ಸಿ.ಪಿ ಯೋಗೇಶ್ವರ್, ನಿಮಗೂ ಅರ್ಥ ಆಗಲಿದೆ, ಅವರು ಮಾತನಾಡ್ತಿದ್ದಾರೋ, ಮಾತನಾಡಿಸುತ್ತಿದ್ದಾರೋ ಅಂತಾ ಎಂದು ಪರೋಕ್ಷವಾಗಿ ಶಾಸಕ ರೇಣುಕಾಚಾರ್ಯರಿಗೆ ತಿರುಗೇಟು ನೀಡಿದರು.
ನನ್ನ ಹೇಳಿಕೆ ಇಷ್ಟೊಂದು ಪ್ರಚಾರ ಆಗುತ್ತೆ ಎಂದು ಗೊತ್ತಿರಲಿಲ್ಲ, ಈ ವಿಚಾರಗಳು ಸಮಾಜದಲ್ಲಿ ಚರ್ಚೆಯಾಗಲಿ. ಯಾರೋ ನಾಲ್ಕು ಜನ ಸ್ನೇಹಿತರು ಮಾತನಾಡುತ್ತಿದ್ದಾರೆ. ಆದರೆ, ಈಗ ಬಲಾಬಲ ತೋರಿಸುವ ಕಣ ಅಲ್ಲ. ಯಾರು, ಯಾವಾಗ ಯಾರ ಪರವಾಗಿ ಮಾತನಾಡ್ತಾರೆ ಅನ್ನುವ ಸಂದರ್ಭವೂ ಇದಲ್ಲ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
ಮೆಗಾಸಿಟಿ ವಿಚಾರವಾಗಿ ತನಿಖೆಯಾಗಲಿ, ನಾನು ಸಾರ್ವಜನಿಕ ಜೀವನದಲ್ಲಿ ಪಾರದರ್ಶಕವಾಗಿರಲು ಬಯಸುತ್ತೇನೆ. ಈ ಹಿಂದೆ ಎಚ್.ಡಿ ಕುಮಾರಸ್ವಾಮಿ, ಡಿ.ಕೆ ಬ್ರದರ್ಸ್ ಸಹ ತನಿಖೆ ಮಾಡಿಸಿದ್ದರು. ಹಿಂದೆಯೂ ತನಿಖೆ ಎದುರಿಸಿದ್ದೇನೆ, ಮುಂದೆಯೂ ಎದುರಿಸುತ್ತೇನೆ. ಕಾನೂನು ವಿಚಾರದಲ್ಲಿ ಓಡಿ ಹೋಗಲು ಸಾಧ್ಯವಿಲ್ಲ ಎಂದು ಉತ್ತರಿಸಿದರು.
Recommended Video
ನನ್ನ ಹೇಳಿಕೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೃಷ್ಣಭೈರೇಗೌಡ, ಡಿ.ಕೆ ಬ್ರದರ್ಸ್ ಟೀಕೆ ಮಾಡುತ್ತಾರೆ. ನಮ್ಮ ಸರ್ಕಾರದ ಬಗ್ಗೆ ಅವರಿಗೇಕೆ ಚಿಂತೆ, ಅವರಿಗೂ ಇದಕ್ಕೂ ಏನು ಸಂಬಂಧ ಎಂದು ನಿರ್ಮಲಾನಂದ ಸ್ವಾಮೀಜಿ ಭೇಟಿ ಬಳಿಕ ಸಚಿವ ಸಿ.ಪಿ ಯೋಗೇಶ್ವರ್ ಹೇಳಿಕೆ ನೀಡಿದರು.