ಕಾಂಗ್ರೆಸ್ನ ಕಣ ಕಣದಲ್ಲೂ ಭ್ರಷ್ಟಾಚಾರ ತುಂಬಿದೆ; ಸಚಿವ ಅಶ್ವಥ್ ನಾರಾಯಣ
ರಾಮನಗರ, ಏಪ್ರಿಲ್ 28: ಬಿಜೆಪಿ ಸರ್ಕಾರದಲ್ಲಿ ಬರೀ ಹಗರಣಗಳೇ ಇವೆ ಎನ್ನುವ ಕಾಂಗ್ರೆಸ್ನವರ ಕಣ ಕಣದಲ್ಲೂ ಭ್ರಷ್ಟಾಚಾರ ತುಂಬಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ರಾಮನಗರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದ ಆರ್.ವಿ.ಸಿ.ಎಸ್. ಕಲ್ಯಾಣ ಮಂಪದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ರಾಜ್ಯ ಮಟ್ಟದಲ್ಲಿ ಕನ್ನಡ, ರಾಷ್ಟ್ರಮಟ್ಟದಲ್ಲಿ ಹಿಂದಿ ಎಂದ ಅಶ್ವತ್ಥನಾರಾಯಣ
ಪಿಎಸ್ಐ ನೇಮಕಾತಿ ಹಗರಣದ ವಿಚಾರವಾಗಿ ಬಿಜೆಪಿ ಸರ್ಕಾರದಲ್ಲಿ ಬರಿ ಹಗರಣಗಳೇ ಇವೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ, ಯಾರ ಬಾಯಲ್ಲಿ ಯಾವ ಮಾತು ಬರುತ್ತಿವೆ. ಇವತ್ತು ಅವರ ಮಾತಲ್ಲಿ ಒಳ್ಳೆಯ ಮಾತುಗಳ ಬರುತ್ತಿವೆ, ಬಹಳ ಸಂತೋಷವೆಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ನಲ್ಲಿ ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ
ಕಾಂಗ್ರೆಸ್ನವರ ಬಾಯಿಯಲ್ಲಿ ಭ್ರಷ್ಟಾಚಾರ ಮುಕ್ತ, ಪಾರದರ್ಶಕತೆ, ಆಡಳಿತ ಇಂತಹ ಮಾತುಗಳು ಬರುತ್ತಿವೆ ಅಂದರೆ ನಮಗೆ ಸಂತೋಷವಾಗುತ್ತದೆ. ಅವರ ಕಣಕಣದಲ್ಲೂ ಭ್ರಷ್ಟಾಚಾರವನ್ನು ತುಂಬಿದೆ. ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ ಇವೆಲ್ಲವನ್ನು ಅವರು ಅಳವಡಿಸಿಕೊಂಡಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ಗೆ ಸಚಿವ ಅಶ್ವಥ್ ನಾರಾಯಣ ತಿರುಗೇಟು ಕೊಟ್ಟರು.
ಇದೇ ವೇಳೆ ಕನಕಪುರದಲ್ಲಿ ಬಿಜೆಪಿ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದ ಸಚಿವರು, ಕನಕಪುರದಲ್ಲಿನ ಅಧಿಕಾರ ದುರ್ಬಳಕೆ, ಉಸಿರುಗಟ್ಟುವಂತಹ ವಾತಾವರಣ, ಇದಕ್ಕೆಲ್ಲಾ ಕೊನೆಗಾಲ ಬಂದಿದೆ. ಕೊನೆಯ ಆಟ ಆಡುವಾಗ ಉಸಿರು ಜೋರಾಗಿ ಆಡುತ್ತಾರೆ ಅನ್ನುವ ರೀತಿ ಇದೆ ಎಂದರು.
ಜಿಯೋಗ್ರಫಿ ವಿಷಯದಲ್ಲಿ ಕೆಲವು ಪ್ರಶ್ನೆಗಳು ಸೋರಿಕೆ
ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿ ಎಲ್ಲೂ ಭ್ರಷ್ಟಾಚಾರ ನಡೆದಿಲ್ಲ. ಜಿಯೋಗ್ರಫಿ ವಿಷಯದಲ್ಲಿ ಕೆಲವು ಪ್ರಶ್ನೆಗಳು ಸೋರಿಕೆಯಾಗಿವೆ. ಪ್ರಶ್ನೆ ಪತ್ರಿಕೆ ತಯಾರು ಮಾಡುತ್ತಿದ್ದವರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಎಲ್ಲವನ್ನೂ ಪಾರದರ್ಶಕವಾಗಿ ತನಿಖೆ ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಒಂದು ರೂಪಾಯಿ ಭ್ರಷ್ಟಾಚಾರ ಮಾಡುವ ಪ್ರಶ್ನೆಯೇ ಇಲ್ಲ. ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ನವರ ಸಂಸ್ಕೃತಿ. ನಾವು ಅಧಿಕಾರಕ್ಕೆ ಬಂದಿರುವುದು, ಬರೀ ಜೇಬಿಗೆ ಕೈ ಹಾಕಿಕೊಳ್ಳುವುದಕ್ಕೆ ಅಲ್ಲ, ಜನರ ಪರವಾಗಿ ಕೆಲಸ ಮಾಡುವುದಕ್ಕೆ ನಾವು ಬಂದಿರೋದು ಎಂದು ಸಚಿವ ಅಶ್ವಥ್ ನಾರಾಯಣ ತಿಳಿಸಿದರು.
ಎಚ್ಡಿಕೆ, ಡಿಕೆ ಬ್ರದರ್ಸ್ ಕಿತ್ತೆಸೆಯಿರಿ
ರಾಮನಗರ ಜಿಲ್ಲಾ ಬಿಜೆಪಿ ಕಾರ್ಯಕಾರಣಿಯಲ್ಲಿ ಬಾಷಣ ಮಾಡಿದ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ, ಕುಟುಂಬ ರಾಜಕಾರಣ ಹಾಗೂ ವಂಶಪಾರಂಪರ್ಯ ರಾಜಕಾರಣ ಪಕ್ಷವಲ್ಲದ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸೂಕ್ತ ಸ್ಥಾನ ಸಿಗಬೇಕು ಎಂದು ಎಚ್ಡಿಕೆ ಹೆಸರು ಹೇಳದೇ ಟೀಕಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಕೃತಿಯ ಸಂಪತ್ತನ್ನು ಲೂಟಿ ಹೊಡೆದವರು. ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಿದ್ದು, ಅವರನ್ನು ರಾಜಕೀಯದಿಂದ ಕಿತ್ತೆಸೆಯುವ ಕೆಲಸ ಮಾಡಬೇಕು ಎಂದು ಡಿಕೆ ಬ್ರದರ್ಸ್ ಹೆಸರನ್ನು ಹೇಳದೆ ಕಿಡಿಕಾರಿದರು. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬೇಕು, ಅದಕ್ಕಾಗಿ ಶ್ರಮಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಸಚಿವ ಅಶ್ವಥ್ ನಾರಾಯಣ್ ಕರೆ ನೀಡಿದರು.
ಸಂಸದೆ ಸುಮಲತಾರನ್ನು ಪಕ್ಷಕ್ಕೆ ಹ್ವಾನಿಸಿದ್ದೇವೆ; ಸಿಪಿವೈ
ಮಂಡ್ಯ ಸಂಸದೆ ಸುಮಲತಾರನ್ನು ಮದುವೆ ಕಾರ್ಯಕ್ರಮದಲ್ಲಿ ಭೇಟಿ ಆಗಿದ್ದೆ. ಅವರನ್ನು ಬಿಜೆಪಿಗೆ ಆಹ್ವಾನ ಮಾಡಿದ್ದೇವೆ ಎಂದು ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ಪಷ್ಟಪಡಿಸಿದರು.
ಸಂಸದೆ ಸುಮಲತಾ ಅವರನ್ನು ನಮ್ಮ ಪಕ್ಷಕ್ಕೆ ಸಪೋರ್ಟ್ ಮಾಡಿ ಎಂದಿದ್ದೇವೆ, ಅವರ ಗೆಲುವಿನಲ್ಲಿ ನಮ್ಮ ಪಕ್ಷ ಕೂಡ ಬೆಂಬಲ ನೀಡಿದೆ. ಪಕ್ಷ ಬಲವರ್ಧನೆಗೆ ಬೆಂಬಲ ನೀಡಿ ಎಂದಿದ್ದೇವೆ, ಏನು ತೀರ್ಮಾನ ಮಾಡುತ್ತಾರೆ ನೋಡೋಣ. ಸಮಾಜಮುಖಿ ಕೆಲಸ ಮಾಡುವವರಿಗೆ ಪಕ್ಷಕ್ಕೆ ಆಹ್ವಾನ ಮಾಡುವುದು ನಮ್ಮ ಕರ್ತವ್ಯ. ಹಾಗೆ ಮಂಡ್ಯದ ಲಕ್ಷ್ಮಿ ಅಶ್ವಿನ್ ಕುಮಾರ್ ಅವರನ್ನು ಕೂಡ ಬಿಜೆಪಿಗೆ ಆಹ್ವಾನ ಮಾಡಿದ್ದೇವೆ ಎಂದು ತಿಳಿಸಿದರು.
ನಾನೇನೂ ಅಪರೇಷನ್ ಎಕ್ಸ್ಪರ್ಟ್ ಅಲ್ಲ; ಸಿಪಿವೈ
ನಾನೇನೂ ಅಪರೇಷನ್ ಎಕ್ಸ್ಪರ್ಟ್ ಅಲ್ಲ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ. ನಾಳೆಯಿಂದ ಮಂಡ್ಯ ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮಾಡುತ್ತೇವೆ. ಪಕ್ಷದ ವರಿಷ್ಠರು ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ, ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದರು.
ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ್ಳಲೂ ಒಳ್ಳೇಯ ಅಭ್ಯರ್ಥಿಗಳನ್ನ ಹಾಕಲಾಗುತ್ತದೆ. ಪಕ್ಷ ನನ್ನನ್ನು ಎಲ್ಲೆಲ್ಲಿ ತೊಡಗಿಸಿಕೊಳ್ಳಬೇಕು ಅನ್ನುತ್ತದೋ ಅಲ್ಲಲ್ಲಿ ತೊಡಗಿಸಿಕೊಳ್ಳುತ್ತೇನೆ. ರಾಮನಗರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.
Recommended Video