ಇಂಧನ ಇಲಾಖೆಯಿಂದ ಮೇಕೆದಾಟು ಯೋಜನೆ ಡಿಪಿಆರ್ ಸಿದ್ದ: ಡಿ.ಕೆ.ಶಿವಕುಮಾರ್
ರಾಮನಗರ, ಜನವರಿ 27: ಮೇಕೆದಾಟು ಅಣೆಕಟ್ಟು ಯೋಜನೆಗೆ ಇಂಧನ ಇಲಾಖೆ ವತಿಯಿಂದ ಡಿಪಿಆರ್ ಸಿದ್ದಮಾಡಿಕೊಂಡಿದ್ದೇವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ರಾಮನಗರದಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, "ಮೇಕೆದಾಟು ಯೋಜನೆ, ಶಿವನ ಸಮುದ್ರ ಹಾಗೂ ರನ್ ಅಪ್ ರೀವರ್ ಸ್ಕಿಂಗೆ ಇಂಧನ ಇಲಾಖೆ ಎಲ್ಲ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.
ಯೋಜನೆಯಲ್ಲಿ ಇನ್ನೂ ಕೆಲವು ತಾಂತ್ರಿಕ ತೊಂದರೆಗಳಿವೆ. ತಮಿಳುನಾಡು ಯೋಜನೆಯ ಎನ್ಒಸಿ (NOC) ಕೇಳಿತ್ತು. ಅದನ್ನು ನೀಡಿದ್ದೇವೆ. ಅವರು ಒಪ್ಪುತಾರೂ ಬಿಡುತ್ತಾರೂ ನಾವಂತೂ ಯೋಜನೆ ಕೈಗೆತ್ತಿಕೊಳ್ಳಲು ರೂಪುರೇಷೆಗಳನ್ನು ಸಿದ್ದಮಾಡಿಟ್ಟುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಮುಂದಿನ ಸಿಎಂ ಎಂದಿಲ್ಲ
"ಬಂಗಾರಪೇಟೆಯಲ್ಲಿ ಮುಂದಿನ ಸಿಎಂ ನಾನೇ ಎಂದು ಹೇಳಿಲ್ಲ. ಅರ್ಜೆಂಟ್ನಲ್ಲಿರುವವರು ಅವರವರ ರೇಸ್ ಮುಗಿಸಲಿ ಎಂದು ಹೇಳಿದೆ ಅಷ್ಟೇ. ಶುಭಗಳಿಗೆ ಬಂದಾಗ ಆತುರಪಡಬೇಕಿಲ್ಲ. ನಾನು ಕಾಯಲು ತಯಾರಾಗಿದ್ದೇನೆ. ಮೊದಲು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗುತ್ತೇನೆ," ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿಕುಮಾರ್ ಸ್ಪಷ್ಟಪಡಿಸಿದರು.
ಹಿಂದೂ ಮುಸ್ಲಿಂ ಭೇದಭಾವವಿಲ್ಲ
ಕೋಮುಗಲಭೆಗಳಲ್ಲಿ ಭಾಗಿಯಾಗಿ ಪ್ರಕರಣ ದಾಖಲಾಗಿದ್ದವರ ಕೇಸ್ಗಳನ್ನ ರಾಜ್ಯ ಸರ್ಕಾರ ಹಿಂಪಡೆಯಲು ಚಿಂತಿಸಿರುವ ಬಗ್ಗೆ ಸ್ಪಷ್ಟನೆ ನೀಡಿದ ಶಿವಕುಮಾರ್, "ಯಾರು ಕನ್ನಡಕ್ಕಾಗಿ ಹೋರಾಟ ಮಾಡಿದ್ದಾರೋ, ಅಂತವರ ಪ್ರಕರಣಗಳನ್ನ ಮಾತ್ರ ಹಿಂಪಡೆಯಲು ಚಿಂತಿಸಿದ್ದೇವೆ. ಇದರಲ್ಲಿ ಹಿಂದೂ ಅಥವಾ ಮುಸ್ಲಿಂರದ್ದು ಎಂಬ ಭೇದಭಾವ ಮಾಡುವುದಿಲ್ಲ," ಎಂದು ತಿಳಿಸಿದರು.
ಮುಜುಗರ ಪಟ್ಟ ಸಚಿವರು
69 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದ ಇಂಧನ ಸಚಿವ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದರು. ಆದರೆ ಧ್ವಜಾರೋಹಣ ನೆರವೇರಿಸಲು ಇಂಧನ ಸಚಿವರು ಮುಂದಾದಾಗ ಎಷ್ಟು ಎಳೆದರು ಬಾವುಟ ಬಿಡಿಸಿಕೊಳ್ಳದೆ ಡಿ.ಕೆ.ಶಿವಕುಮಾರ್ ಕೆಲಕಾಲ ಕಸಿವಿಸಿಯಾದರು. ನಂತರ ಸಹಾಯಕನ ಸಹಾಯದೊಂದಿಗೆ ಶಿವಕುಮಾರ್ ಧ್ವಜಾರೊಹಣ ನೆರವೇರಿಸಿದರು. ಇನ್ನು ಸಮಾರಂಭದಲ್ಲಿ ಕೆಲಸಾಧಕರಿಗೆ ಸನ್ಮಾನ ಮಾಡಲಾಯಿತು.
ಗಮನಸೆಳೆದ ಮಲ್ಲಕಂಬ ಪ್ರದರ್ಶನ
ಇನ್ನು ಕಾರ್ಯಕ್ರಮದಲ್ಲಿ ನಾಡು ನುಡಿ ವೈಶಿಷ್ಟ್ಯಗಳನ್ನು ಸಾರುವ ನೃತ್ಯಗಳಿಗೆ ಶಾಲಾ ಮಕ್ಕಳು ಹೆಜ್ಜೆಹಾಕಿದರು. ಅದರಲ್ಲು ಬಿಡದಿ ಜ್ಞಾನ ವಿಕಾಸನ ಶಾಲೆಯ ಮಕ್ಕಳು ನಡೆಸಿಕೊಟ್ಟ ಮಲ್ಲಕಂಬ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಮಕ್ಕಳು ಮಲ್ಲಕಂಬದ ಮೇಲೆ ನಾನಾ ರೀತಿಯ ಕಸರತ್ತು ಮಾಡುವ ಮೂಲಕ ನೆರದಿದ್ದವರ ಹುಬ್ಬೇರುವಂತೆ ಮಾಡಿದರು.