ಕೊರೊನಾ: ರಾಮನಗರ ಅಧಿಕಾರಿಯಿಂದ ವೈದ್ಯಕೀಯ ಕಿಟ್ ವಿತರಣೆ
ರಾಮನಗರ, ಏಪ್ರಿಲ್ 08: ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ವೇತನದ ಹಣ ಬಳಸಿ ಕೊರೊನಾ ವೈರಸ್ ಸೋಂಕಿತರು ಉಸಿರಾಟ ತೊಂದರೆ ಉಂಟಾದಾಗ ರೋಗಿಗಳ ಚಿಕಿತ್ಸೆಗಾಗಿ ಅತ್ಯವಶ್ಯಕವಾಗಿ ಬೇಕಾಗುವ ನೆಬ್ಲೈಜರ್(neblizer) ಗಳನ್ನು ರಾಮನಗರ ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಕೆ.ಎಚ್. ರವಿ ಅವರು ವೇತನದಲ್ಲಿ ಒಂದು ಲಕ್ಷ ರೂ. ಮೌಲ್ಯದ ಸುಮಾರು 43 ನೆಬ್ಲೈಜರ್(neblizer) ಗಳನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಹಸ್ತಾಂತರಿಸಿದರು.
ಅದೇ ರೀತಿ ಕೊರೊನಾ ವೈರಸ್ ತಡೆಗಟ್ಟಲು ಲಾಕ್ ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು, ಬಡವರು ಮತ್ತು ನಿರ್ಗತಿಕರಿಗೆ ಬಿಡದಿ ಕೈಗಾರಿಕಾ ಸಂಘ 500 ಆಹಾರ ಪದಾರ್ಥಗಳುಳ್ಳ ಕಿಟ್ಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರಿಗೆ ಹಸ್ತಾಂತರಿಸಿದರು.
ಪ್ರತಿ ಆಹಾರದ ಕಿಟ್ನಲ್ಲಿ 10 kg ಅಕ್ಕಿ , ಗೋಧಿ ಹಿಟ್ಟು-3 kg, ರಾಗಿ ಹಿಟ್ಟು-1 kg, ಸಕ್ಕರೆ-1.5 kg, ತೊಗರಿ ಬೇಳೆ-2 kg, ಈರುಳ್ಳಿ-1 ಕೆ.ಜಿ., ಉಪ್ಪು-1 ಕೆ.ಜಿ., ಅಡುಗೆ ಎಣ್ಣೆ-1 ಲೀ, ಮತ್ತು ಸಾಂಬಾರ್ ಪುಡಿ-200 ಗ್ರಾಂ., ಒಳಗೊಂಡಿದೆ.
ಅಲ್ಲದೇ 500 ಆಹಾರ ಕಿಟ್ ಜೊತೆಯಲ್ಲಿ ಅಕ್ಕಿ-300 ಕೆ.ಜಿ, ಗೋಧಿ ಹಿಟ್ಟು-100 ಕೆ.ಜಿ, ತೊಗರಿ ಬೇಳೆ-50 ಕೆ.ಜಿ, ಅಡುಗೆ ಎಣ್ಣೆ-10 ಲೀ, ಆಲುಗೆಡ್ಡೆ 1 ಮೂಟೆ ಹಾಗೂ ಈರುಳ್ಳಿ-1 ಮೂಟೆಗಳನ್ನು ಜಿಲ್ಲಾಡಳಿತಕ್ಕೆ ನೀಡಿದರು.
ಈ ಸಂದರ್ಭದಲ್ಲಿ ಬಿಡದಿ ಕೈಗಾರಿಕಾ ಸಂಘದ ಭದ್ರತಾ ವಿಭಾಗದ ಮೇಜರ್ ಶಿವಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜು ಎಲ್ ಹಾಗೂ ಉಪನಿರ್ದೇಶಕ ಕೆ.ಶಿವಲಿಂಗಯ್ಯ ಉಪಸ್ಥಿತರಿದ್ದರು.