ಮಕ್ಕಳಲ್ಲಿ ಸಾಮೂಹಿಕ ಚರ್ಮ ಸಮಸ್ಯೆ; ಹಾಸ್ಟೆಲ್ ವಾರ್ಡನ್ ಅಮಾನತಿಗೆ ಆದೇಶ
ರಾಮನಗರ, ಸೆಪ್ಟೆಂಬರ್ 3: ಸ್ವಚ್ಛತೆ ಕೊರತೆಯಿಂದಾಗಿ ಮಕ್ಕಳಲ್ಲಿ ಸಾಮೂಹಿಕವಾಗಿ ಚರ್ಮ ಸಮಸ್ಯೆ ಕಾಣಿಸಿಕೊಂಡು ಈಚೆಗೆ ಸುದ್ದಿಯಾಗಿದ್ದ ರಾಮನಗರದ ಕೈಲಾಂಚ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಾರ್ಡನ್ ಅನ್ನು ಅಮಾನತುಗೊಳಿಸಲಾಗಿದೆ.
ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಚರ್ಮರೋಗ ತಗುಲಿದ್ದು, ವಸತಿ ಶಾಲೆಯಲ್ಲಿನ ಅಶುದ್ಧತೆಯೇ ಇದಕ್ಕೆ ಕಾರಣ ಎನ್ನಲಾಗಿತ್ತು. ಈ ಹಾಸ್ಟೆಲ್ ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದರು. ಎಲ್ಲ ವ್ಯವಸ್ಥೆ ನೀಡುವ ಭರವಸೆಯನ್ನೂ ನೀಡಿದ್ದರು.
ವಸತಿ ಶಾಲೆಯಲ್ಲಿ ವಾರಕ್ಕೊಮ್ಮೆ ನೀರು; ಮಕ್ಕಳಿಗೆ ವ್ಯಾಪಿಸಿದೆ ಅಂಟು ರೋಗ
ಈ ವಿದ್ಯಮಾನಗಳಿಗೆ ಹಾಸ್ಟೆಲ್ ವಾರ್ಡನ್ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ, ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಅವರ ಕರ್ತವ್ಯ. ಆದರೆ ಆ ಕರ್ತವ್ಯಕ್ಕೆ ಲೋಪ ಎಸಗಲಾಗಿದೆ ಎಂದು ಹಾಸ್ಟೆಲ್ ವಾರ್ಡನ್ ಅಮಾನತ್ತಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಆದೇಶಿಸಿದ್ದಾರೆ.
ಸ್ವಚ್ಛತೆ ಇಲ್ಲದೇ ವಸತಿ ಶಾಲೆ ಮಕ್ಕಳಲ್ಲಿ ಹಬ್ಬಿದ ಚರ್ಮ ರೋಗ; ಸಚಿವ ಸುರೇಶ್ ಕುಮಾರ್ ಎಚ್ಚರಿಕೆ
"ಅಧಿಕಾರಿಗಳ ನಿರ್ಲ್ಯಕ್ಷದಿಂದಾಗಿ ಮಕ್ಕಳಿಗೆ ಚರ್ಮ ರೋಗ ಬಂದಿದೆ. ಬಡ ಮಕ್ಕಳಿಗೆ ಎಲ್ಲ ಸೌಲಭ್ಯ ನೀಡಬೇಕೆಂಬುದು ಸರ್ಕಾರದ ಆಶಯ. ಆದರೆ ಅಧಿಕಾರಿಗಳು ಈ ಆಶಯಕ್ಕೆ ಧಕ್ಕೆ ತರುತ್ತಿದ್ದಾರೆ. ಒಬ್ಬ ಅಧಿಕಾರಿಗೆ ಬಿಸಿ ಮುಟ್ಟಿಸಿದರೆ ಇನ್ನುಳಿದ ಅಧಿಕಾರಿಗಳಿಗೆ ಬುದ್ಧಿ ಬರುತ್ತದೆ" ಎಂದು ಹೇಳಿ ಅಮಾನತುಗೊಳಿಸಲು ಆದೇಶಿಸಿದ್ದಾರೆ.