ನ್ಯಾಯಕ್ಕಾಗಿ ಪ್ರಿಯಕರನ ಮನೆ ಮುಂದೆ ಧರಣಿ ಕುಳಿತ ಗೃಹಿಣಿ
ರಾಮನಗರ, ಡಿಸೆಂಬರ್ 10: ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟ ಯುವಕನ ಮನೆಯ ಮುಂದೆ ಗೃಹಿಣಿ ಧರಣಿ ಕುಳಿತಿರುವ ಘಟನೆ ರಾಮನಗರದ ಬಸವನಪುರದಲ್ಲಿ ನಡೆದಿದೆ.
ಬಸವನಪುರದ ಮಧುರ ಗಾರ್ಮೆಂಟ್ಸ್ನಲ್ಲಿ ಭರತ್ ಹಾಗೂ ಗೃಹಿಣಿ ನಿರ್ಮಲ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿ ಪ್ರೀತಿ ಬೆಳೆದು ಮದುವೆಯಾಗುತ್ತೇನೆ ಎಂದು ನಂಬಿಸಿದ್ದ ಭರತ್. ಆಕೆಯನ್ನು ಆತ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದೀಗ ಸರ್ಕಾರಿ ಕೆಲಸ ಸಿಕ್ಕಿತು ಅಂತ ಜಾತಿಯ ನೆಪವೊಡ್ಡಿ ಮದುವೆಯಾಗಲ್ಲ ಎಂದು ತಿಳಿಸಿದ್ದಾನೆ.
ಇದರಿಂದ ಮನನೊಂದ ಗೃಹಿಣಿ ನಿರ್ಮಲ ಯುವಕ ಭರತ್ನ ಮನೆಯ ಮುಂದೆ ಮಹಿಳಾ ಸಂಘಟನೆಯ ಕಾರ್ಯಕರ್ತರ ಸಹಾಯದೊಂದಿದೆ ಧರಣಿ ಕುಳಿತಿದ್ದಾರೆ. ಮದುವೆಯಾಗಿದ್ದರೂ ಸಹ ಗಂಡನಿಲ್ಲದಿದ್ದರಿಂದ ಮರುಮದುವೆಯಾಗುತ್ತೇನೆ ಎಂದು ನಂಬಿಸಿ ಹಣವನ್ನು ಕಿತ್ತುಕೊಂಡು, ಲೈಂಗಿಕವಾಗಿ ಬಳಸಿಕೊಂಡು ಇದೀಗ ಮದುವೆಯಾಗಲ್ಲ ಎಂದು ಮೋಸ ಮಾಡಿದ್ದಾನೆ. ನನಗೆ ನ್ಯಾಯ ಬೇಕು ಎಂದು ಯುವಕನ ಮನೆಯ ಮುಂದೆ ಧರಣಿ ಕೂತಿದ್ದಾರೆ.
ಇನ್ನು ಭರತ್ ಮನೆಯವರು ನಿರ್ಮಲಳ ಧರಣಿಗೆ ತಲೆಕೆಡಿಸಿಕೊಂಡಿಲ್ಲ. ನೀನು ಏನು ಬೇಕಾದರೂ ಮಾಡಿಕೊಳ್ಳು ಎಂದು ಮನೆಯ ಬಾಗಿಲಿಗೆ ಬೀಗ ಜಡಿದು ಹೊರ ಹೋಗಿದ್ದಾರೆ. ಈ ಬಗ್ಗೆ ಪೋಲೀಸರಿಗೆ ದೂರು ನೀಡಲು ಹೋದರೆ ನನ್ನ ದೂರು ಸ್ವೀಕರಿಸುತ್ತಿಲ್ಲ ಎಂದು ನಿರ್ಮಲ ಆರೋಪಿಸಿದ್ದಾರೆ.