ಮಂಗಾಡಹಳ್ಳಿಯಲ್ಲಿ ಮಾಂಸದೂಟ ಸೇವಿಸಿ ಶಿವರಾತ್ರಿ ಆಚರಿಸಿದ ಜನ
ಚನ್ನಪಟ್ಟಣ, ಫೆಬ್ರವರಿ 22: ನಾಡಿನೆಲ್ಲೆಡೆ ನಿನ್ನೆ ಶಿವರಾತ್ರಿ ಹಬ್ಬವನ್ನು ಶಿವನ ನಾಮಸ್ಮರಣೆ ಮಾಡುತ್ತಾ, ಉಪವಾಸ, ಜಾಗರಣೆ ಮೂಲಕ ಭಕ್ತಿಯಿಂದ ಆಚರಿಸಲಾಗಿದೆ. ಶಿವರಾತ್ರಿಯಂದು ಉಪವಾಸ ಮಾಡುವುದು ಅಥವಾ ಶಿವನಿಗೆ ಇಷ್ಟವಾದ ತಿನಿಸುಗಳ ನೈವೇದ್ಯ ಮಾಡುವುದು ರೂಢಿ. ಈ ದಿನದಂದು ಶಿವಭಕ್ತರು ಮಾಂಸಾಹಾರ ಸೇವನೆ ಮಾಡುವುದಿಲ್ಲ.
Recommended Video
ಆದರೆ ಚನ್ನಪಟ್ಟಣದ ಈ ಊರಿನಲ್ಲಿ ಶಿವರಾತ್ರಿಯಂದು ಮಾಂಸಾಹಾರವೇ ವಿಶೇಷ. ಈ ಗ್ರಾಮದಲ್ಲಿ ಶಿವರಾತ್ರಿಯಂದು ಬಾಡೂಟವೇ ಪ್ರಧಾನ. ಹತ್ತಾರು ಹಳ್ಳಿಯ ಜನರು ಒಂದೆಡೆ ಸೇರಿ ಬಾಡೂಟ ಸವಿದು ರಾತ್ರಿಯೆಲ್ಲಾ ಹರ ನಾಮ ಸ್ಮರಣೆ ಮಾಡುತ್ತಾ ಮಹಾಶಿವರಾತ್ರಿ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಈ ಊರಿನ ಕುರಿತು ಇಲ್ಲಿದೆ ಮಾಹಿತಿ...
ಪಂಚಲಿಂಗ ಕ್ಷೇತ್ರದ ಉತ್ತರ ಕನ್ನಡದಲ್ಲಿ ಶಿವರಾತ್ರಿಯ ಮಹಾಸಂಭ್ರಮ
ಮಂಗಾಡಹಳ್ಳಿಯಲ್ಲಿ ಹೀಗೊಂದು ಆಚರಣೆ
ಚನ್ನಪಟ್ಟಣ ತಾಲೂಕಿನ ಮಂಗಾಡಹಳ್ಳಿ ಗ್ರಾಮದಲ್ಲಿ ಶಿವರಾತ್ರಿಯನ್ನು ಈ ರೀತಿಯಾಗಿ ವಿಭಿನ್ನವಾಗಿ ಆಚರಿಸಲಾಗಿದೆ. ಗ್ರಾಮದ ಸಿದ್ದಾಪ್ಪಜಿ ದೇವಸ್ಥಾನದ ಬಳಿ ಭಕ್ತರೆಲ್ಲರೂ ಸೇರಿ ಕುರಿ, ಕೋಳಿ ತಂದು ಅಲ್ಲಿಯೇ ಪ್ರಸಾದವನ್ನು ತಯಾರು ಮಾಡುತ್ತಾರೆ. ಆನಂತರ ದೇವರಿಗೆ ಈ ಪ್ರಸಾದವನ್ನು ಸಮರ್ಪಣೆ ಮಾಡಿ, ನಂತರ ದೇವಸ್ಥಾನದ ಮುಂಭಾಗ ಕುಳಿತು ಎಲ್ಲರೂ ಪ್ರಸಾದ ಸೇವಿಸುತ್ತಾರೆ.
ಗೌರಿ ಹಬ್ಬದಲ್ಲೂ ಮಾಂಸಾಹಾರ ಸೇವನೆ
ನೂರಾರು ವರ್ಷಗಳಿಂದ ಈ ಒಂದು ಆಚರಣೆಯನ್ನು ನಡೆಸಿಕೊಂಡು ಬಂದಿದ್ದಾರೆ. ಪ್ರತಿವರ್ಷ ಭಕ್ತರು ದೇವಸ್ಥಾನಕ್ಕೆ ಬಂದು ಹರಕೆ ಮಾಡಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥಗಳು ನೆರವೇರಿದ ಬಳಿಕ ಶಿವರಾತ್ರಿ ದಿನದಂದು ತಮ್ಮ ಹರಕೆ ತೀರಿಸುತ್ತಾರೆ. ಕೇವಲ ಶಿವರಾತ್ರಿ ದಿನದಂದು ಮಾತ್ರ ಅಲ್ಲ. ಗೌರಿ ಹಬ್ಬದಲ್ಲೂ ಮಾಂಸಾಹಾರ ಮಾಡುವ ರೂಢಿಯಿದೆ. ಕೆಲವೊಮ್ಮೆ ಹಬ್ಬ ಸೋಮವಾರದಂದು ಬಂದರೆ ಅಂದು ಕೂಡ ಮಾಂಸದೂಟ ಮಾಡಲಾಗುತ್ತದೆ.
ರಾಮೇನಹಳ್ಳಿಯಲ್ಲಿ ಶಿವರಾತ್ರಿ ಮರುದಿನ ನಡೆಯುತ್ತದೆ ಅದ್ಧೂರಿ ರಥೋತ್ಸವ
ಮಾಂಸದೂಟ ಮಾಡಿದ 3000 ಮಂದಿ
ಈ ರೀತಿಯ ವಿಭಿನ್ನ ಆಚರಣೆಗೆ ಕೇವಲ ಮಂಗಾಡಹಳ್ಳಿ ಗ್ರಾಮದ ಭಕ್ತರು ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮದ ಭಕ್ತರು ಕೂಡ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ನಿನ್ನೆ ನಡೆದ ಶಿವರಾತ್ರಿ ಆಚರಣೆಯಲ್ಲಿ ಸುಮಾರು 3000 ಸಾವಿರ ಮಂದಿ ದೇವಸ್ಥಾನಕ್ಕೆ ಬಂದು ಮಾಂಸದೂಟವನ್ನು ಸೇವಿಸಿದ್ದಾರೆ.
ಆಚರಣೆ ನಿಲ್ಲಿಸಲೂ ಆಗಲಿಲ್ಲ
ಈ ರೀತಿ ಶಿವರಾತ್ರಿ ಆಚರಿಸುವುದನ್ನು ನಿಲ್ಲಿಸಬೇಕೆಂದು ಕೆಲವು ಗ್ರಾಮಸ್ಥರು ಚಿಂತನೆ ಕೂಡ ಮಾಡಿದ್ದರು. ಆದರೆ ಕೆಲ ವರ್ಷಗಳ ಕೆಳಗೆ ಶಿವರಾತ್ರಿ ದಿನದಂದು ಮಾಂಸದೂಟ ಮಾಡದೆ ಇದ್ದಿದ್ದರಿಂದ ಕೋಳಿಗಳು ದೇವಸ್ಥಾನದ ಒಳಗೆ ನುಗ್ಗಿದ್ದವು. ಹೀಗಾಗಿ ಮತ್ತೆ ಆಚರಣೆ ಮುಂದುವರೆಸಿಕೊಂಡು ಬರಲಾಗಿದೆ. ಶಿವರಾತ್ರಿ ದಿನದಂದು ಭಕ್ತರು ವತ್ರ, ಉಪವಾಸ, ಸಸ್ಯಾಹಾರ ಸೇವಿಸುವ ಮೂಲಕ ಹಬ್ಬ ಆಚರಿಸಿದರೆ, ಮಂಗಾಡಹಳ್ಳಿ ಗ್ರಾಮದಲ್ಲಿ ಮಾತ್ರ ಮಾಂಸದೂಟ ಸವಿದು ರಾತ್ರಿಯೆಲ್ಲಾ ಹರಿನಾಮ ಸ್ಮರಣೆ ಮಾಡುತ್ತಾ ಹಬ್ಬ ಆಚರಿಸಿದರು.