ನನಗೆ ಟೋಪಿ ಹಾಕಿದ 7 ಶಾಸಕರನ್ನು ಮಾಗಡಿ ರಂಗನಾಥಸ್ವಾಮಿ ನೋಡಿಕೊಳ್ತಾನೆ
Recommended Video
ಮಾಗಡಿ (ರಾಮನಗರ ಜಿಲ್ಲೆ), ಮಾರ್ಚ್ 26: "ಏಳು ಶಾಸಕರು ಎರಡು ವರ್ಷಗಳ ಹಿಂದೆಯೇ ನನಗೆ ಟೋಪಿ ಹಾಕಿ, ಈಗ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಜೆಡಿಎಸ್ ನಿರ್ನಾಮ ಮಾಡಲು ಹೊರಟಿದ್ದಾರೆ. ಅವರನ್ನು ಆ ಮಾಗಡಿ ರಂಗನಾಥಸ್ವಾಮಿಯೇ ನೋಡಿಕೊಳ್ಳುತ್ತಾನೆ" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಭಿನ್ನಮತೀಯ ಶಾಸಕರ ವಿರುದ್ಧ ಇಲ್ಲಿ ಹರಿಹಾಯ್ದರು.
ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಮಾಗಡಿಯ ಶಾಸಕರು ಜೆಡಿಎಸ್ ಪಕ್ಷ ಇಪ್ಪತ್ತರಿಂದ ನಲವತ್ತು ಸ್ಥಾನ ಗೆಲ್ಲಬಹುದು. ಅದಕ್ಕಿಂತ ಸ್ಥಾನ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಅವರಿಗೆ ಇಲ್ಲಿ ಸೇರಿರುವ ಜೆಡಿಎಸ್ ಕಾರ್ಯಕರ್ತರು ತಕ್ಕ ಉತ್ತರ ನೀಡುತ್ತಾರೆ ಎಂದರು.
ಚಿತ್ರಗಳು : ವಿಕಾಸ ಪರ್ವ ಯಾತ್ರೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ನಮ್ಮನ್ನು ಬಿಟ್ಟು ಹೋದರವರ ಬಗ್ಗೆ ಮಾತನಾಡಿ ಕೆಸರಿನ ಮೇಲೆ ಕಲ್ಲು ಹಾಕಿಕೊಳ್ಳಲು ಇಷ್ಟವಿಲ್ಲ. ಕೆಸರೆಲ್ಲಾ ಇಂದು ದೂರವಾಗಿದ್ದಾರೆ. ಇನ್ನು ರಾಹುಲ್ ಗಾಂಧಿ ಭಾಷಣ ನೋಡಿದರೆ ಅವರು ಸಿದ್ದರಾಮಯ್ಯನವರ ಪಂಜರದ ಗಿಳಿಯಾಗಿದ್ದಾರೆ. ಜೆಡಿಎಸ್ ಎಂದರೆ ಸಂಘ ಪರಿವಾರ ಅಂತಾ ರಾಹುಲ್ ಹೇಳಿದ್ದಾರೆ. ಕಾವೇರಿ ನದಿ ನೀರು ಹರಿಯುವ ಪ್ರದೇಶದಲ್ಲಿ ಬಂದು ಜೆಡಿಎಸ್ ಪಕ್ಷವನ್ನ ಕೆಣುಕಿದ್ದೀರಿ ಎಂದರು.
ಭಾಗ್ಯಗಳ ಹೆಸರಿನಲ್ಲಿ ಕಾಂಗ್ರೆಸ್ ಸರಕಾರದಿಂದ ಹಗಲು ದರೋಡೆ
ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುವುದು ಸತ್ಯ ಎಂಬುದು ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯ ಅವರು ಹಲವು ಭಾಗ್ಯಗಳನ್ನು ಕೊಟ್ಟೆ ಎಂದು ಡ್ಯಾನ್ಸ್ ಮಾಡುತ್ತ ಹೇಳುತ್ತಾರೆ. ಅದರೆ ಭಾಗ್ಯಗಳ ಹೆಸರಿನಲ್ಲಿ ಸರಕಾರ ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿದರು.
ಲಿಕ್ಕರ್ ಗೆ ನೀಡುವ ತೆರಿಗೆ ಹಣದಿಂದಲೇ ಅಕ್ಕಿ ನೀಡಲಾಗುತ್ತಿದೆ
ಸಿದ್ದರಾಮಯ್ಯನವರು ಏನು ಸಿದ್ದರಾಮಯ್ಯನ ಹುಂಡಿಯಿಂದ ಹಣ ತಂದು ಅನ್ನಭಾಗ್ಯ ನೀಡುತ್ತಿಲ್ಲ. ನೀವು ಸಂಜೆ ಲಿಕ್ಕರ್ ಗೆ ನೀಡುವ ತೆರಿಗೆ ಹಣದಿಂದ ಅಕ್ಕಿ ನೀಡಲಾಗುತ್ತಿದೆ. ಸಿದ್ದರಾಮಯ್ಯ ಅವರ ವರ್ತನೆಯಿಂದ ಬೇಸತ್ತು, ಬಿಜೆಪಿ ಪಕ್ಕದಲ್ಲಿ ಕೂತು ನಾನು ಕೆಮ್ಮಿದರೆ ಕಾಂಗ್ರೆಸ್ ಸರ್ವನಾಶವಾಗುತ್ತದೆ ಎಂದು ಹೇಳಿಕೆ ನೀಡಿದೆ. ಅದರೆ ಕಾಂಗ್ರೆಸ್ ನವರು ಅದಕ್ಕೂ ಬಣ್ಣ ಕಟ್ಟಿದರು. ಬಿಜೆಪಿ ಜೊತೆ ಕೈ ಜೋಡಿಸುತ್ತಿದ್ದಾರೆ ಎಂದರು. ನಮಗೆ ಎರಡೂ ಪಕ್ಷಗಳ ಸಹವಾಸವೂ ಬೇಡ ಎಂದು ಹೇಳಿದರು.
ಸ್ವಾಭಿಮಾನ ಅಡವಿಟ್ಟು ರಾಜಕೀಯ ಮಾಡಿಲ್ಲ
ನನ್ನ ಬಗ್ಗೆ ಸೀರಿಯಲ್ ಆಗಿ ಬಿಡ್ತೀನಿ ಅಂತಾರೆ. ಹಾಗೆ ಬಿಚ್ಚಿಡೋಕೆ ಏನೂ ಇಲ್ಲ. ನಾವು ದೇವೇಗೌಡರ ಮಕ್ಕಳು. ನಮ್ಮದು ಅಂಥದ್ದು ಏನೂ ಇಲ್ಲ. ನಾವು ಯಾವತ್ತೂ, ಯಾರಿಗೂ ಹೆದರಿ ರಾಜಕಾರಣ ಮಾಡಿಲ್ಲ ಹಾಗೂ ಅಧಿಕಾರ ಇರುವವರ ಮುಂದೆ ನಿಮ್ಮ ಹಾಗೆ ಸ್ವಾಭಿಮಾನ ಅಡವಿಟ್ಟು ರಾಜಕೀಯ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನನ್ನ ನೇತೃತ್ವದ ಸರಕಾರ ತಡೆಯಲು ಯಾರಿಗೂ ಆಗಲ್ಲ
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಯೊಳಗಾಗಿ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಇರುವ ರೈತರ ಸಾಲ ಮನ್ನಾ ಮಾಡುತ್ತೇನೆ. ಇನ್ನು ನನ್ನನ್ನು ಕೆಣಕಬೇಡಿ. ನನ್ನ ನೇತೃತ್ವದಲ್ಲಿ ಸರಕಾರ ಅಸ್ತಿತ್ವಕ್ಕೆ ಬರುವುದನ್ನು ಯಾರೂ ತಪ್ಪಿಸುವುದಕ್ಕೆ ಆಗಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.