ಕಳೆಗಟ್ಟಿದ 700 ವರ್ಷಗಳ ಇತಿಹಾಸವಿರುವ ಮಾಗಡಿ ದನಗಳ ಜಾತ್ರೆ
ರಾಮನಗರ, ಏಪ್ರಿಲ್ 7: ಕೊರೊನಾ ಮೊದಲ ಮತ್ತು ಎರಡನೇ ಅಲೆಯ ಭೀತಿಯಿಂದ ಕಳೆಗುಂದಿದ್ದ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧವಾದ ಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಮಾಗಡಿ ಶ್ರೀ ರಂಗನಾಥಸ್ವಾಮಿ ದನಗಳ ಜಾತ್ರೆ ಈ ಬಾರಿ ಕಳೆಗಟ್ಟಿದ್ದು, ದೂರದ ಊರಿನಿಂದ ರಾಸುಗಳನ್ನು ಮಾರಲು ಮತ್ತು ಕೊಳ್ಳಲು ಜನರು ಜಾತ್ರೆಗೆ ಮುಗಿಬಿದ್ದಿದ್ದಾರೆ.
ಪುರಾಣ ಮತ್ತು ಇತಿಹಾಸದ ಹಿನ್ನಲೆ ಇರುವ ಮಾಗಡಿ ಶ್ರೀ ರಂಗನಾಥಸ್ವಾಮಿ ದೇವಾಲಯದ ಬಳಿ ನಡೆಯುತ್ತಿರುವ ರಾಸುಗಳ ಜಾತ್ರೆಗೆ ಸುಮಾರು 700 ವರ್ಷಗಳ ಇತಿಹಾಸ ಹೊಂದಿದೆ. ದನಗಳ ಜಾತ್ರೆ ಇಂದಿಗೂ ತನ್ನದೆಯಾದ ಮಹತ್ವವನ್ನು ಪಡೆದಿದೆ. ಮಾಗಡಿ ಪಟ್ಟಣದ ಎನ್ಇಎಸ್ ಬಡಾವಣೆ, ತಿರುಮಲೆ, ಹೊಸಪೇಟೆ ಗೇಟ್, ತಿಮ್ಮಸಂದ್ರ ವ್ಯಾಪ್ತಿಯ ಸುಮಾರು ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಲಕ್ಷಾಂತರ ರಾಸುಗಳನ್ನು ಕಟ್ಟಲಾಗಿದೆ.
ಜಾತ್ರೆಯಲ್ಲಿ ದುಬಾರಿ ಬೆಲೆ ಬಾಳುವ ದನಗಳನ್ನು ದರ್ಶನಕ್ಕೆ ಕಟ್ಟಿರುವ ಪ್ರತಿಷ್ಠಿತ ರೈತ ಕುಟುಂಬಗಳು ಈ ಬಾರಿ ಪೆಂಡಾಲುಗಳಲ್ಲಿ ಕಟ್ಟಿ, ದನಗಳನ್ನು ಸಿಂಗಾರ ಮಾಡಿ ತಮ್ಮ ನೆಚ್ಚಿನ ರಾಸುಗಳ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಬಡ ರೈತರು ಉರಿ ಬಿಸಿಲಿನಲ್ಲೇ ದನಗಳನ್ನು ಕಟ್ಟಿ ವ್ಯವಹಾರ ನಡೆಸುತ್ತಿದ್ದಾರೆ.
50 ಸಾವಿರದಿಂದ 13 ಲಕ್ಷ ರೂಪಾಯಿ ಬೆಲೆ ಬಾಳುವ ರಾಸು
ಮಾಗಡಿ ದನಗಳ ಜಾತ್ರೆಯಲ್ಲಿ ಸುಮಾರು 50 ಸಾವಿರದಿಂದ 13 ಲಕ್ಷ ರೂಪಾಯಿ ಬೆಲೆ ಬಾಳುವ ರಾಸುಗಳನ್ನು ಜಾತ್ರೆಯಲ್ಲಿ ಕಟ್ಟಿದ್ದಾರೆ. ಚಾಮರಾಜನಗರ, ಮಂಡ್ಯ, ತುಮಕೂರು, ರಾಮನಗರ, ನೆಲಮಂಗಲ, ಕುಣಿಗಲ್, ಹಾಸನ, ಪಾಂಡವಪುರ, ಶಿವಮೊಗ್ಗ, ಅರಸೀಕೆರೆ ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ರೈತರು ತಮ್ಮ ರಾಸುಗಳನ್ನು ಮಾರಾಟ ಮಾಡಲು ಜಾತ್ರೆಗೆ ಆಗಮಿಸಿದ್ದಾರೆ.
ರಾಜ್ಯದಲೇ ಉತ್ತಮ ತಳಿಯ ರಾಸುಗಳಿಗೆ ಹೆಸರುವಾಸಿಯಾಗಿರುವ ಶ್ರೀ ರಂಗನಾಥ ರಾಸುಗಳ ಜಾತ್ರೆಯಲ್ಲಿ ರಾಸುಗಳನ್ನು ಖರೀದಿಸಲು ಚಿತ್ರದುರ್ಗ, ರಾಯಚೂರು, ಗುಲಬರ್ಗ, ಯಾದಗಿರಿ, ಆನೇಕಲ್ಲು, ಮಂಡ್ಯ, ಮೈಸೂರು ಅಷ್ಟದೇ ಅಲ್ಲದೇ ಹೊರ ರಾಜ್ಯದ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರ ರಾಜ್ಯದ ರೈತರು ದನ ಕೊಳ್ಳಲು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕಳೆಗಟ್ಟಿದ ಮಾಗಡಿ ದನಗಳ ಜಾತ್ರೆ
ಕೊರೊನಾ ಭೀತಿಯಿಂದ ಕಳೆದ ಎರಡು ವರ್ಷಗಳಿಂದ ಕಳೆ ಕಳೆದುಕೊಂಡಿದ್ದ ಮಾಗಡಿ ದನಗಳ ಜಾತ್ರೆ, ಈ ಬಾರಿ ವಿಜೃಂಭಣೆಯಿಂದ ಜರುಗಿದೆ. ಶ್ರೀ ರಂಗನಾಥ ದೇವಾಲಯ ಆವರಣ ಸೇರಿದಂತೆ ಸುತ್ತಮುತ್ತಲಿನ ಮೈದಾನಗಳು ರಾಸುಗಳಿಂದ ತುಂಬಿ ತುಳುಕಿದ್ದು, ರಾಸುಗಳ ಮಾರಾಟ ಭರ್ಜರಿಯಾಗಿದೆ ನಡೆದಿದೆ. ಕಳೆದ ಎರಡು ವರ್ಷ ಜಾತ್ರೆ ನಡೆಯದದ್ದನ್ನು ಗಮನಿಸಿದ ತಾಲೂಕು ಆಡಳಿತ, ಈ ಬಾರಿ ದನಗಳ ಜಾತ್ರೆಯಲ್ಲಿ ಸುಂಕ ವಸೂಲಿಯನ್ನು ಕೈಬಿಟ್ಟಿತ್ತು. ಹಾಗಾಗಿ ಅಂಗಡಿ ಮುಂಗಟ್ಟು ಸೇರಿದಂತೆ ರಾಸುಗಳನ್ನು ಕಟ್ಟಿದ್ದ ರೈತರಿಂದ ಸುಂಕ ವಸೂಲಿ ಮಾಡಲಿಲ್ಲ.
ಸಿಕ್ಕ ಸಿಕ್ಕ ಬಯಲು ಪ್ರದೇಶದಲ್ಲೆ ಶೌಚಾಲಯ
ಕಿಲೋಮೀಟರ್ ದೂರ ಕಟ್ಟಿದ್ದ ರಾಸುಗಳ ಜಾತ್ರೆಯಲ್ಲಿ ಬೆಳಕಿನ ವ್ಯವಸ್ಥೆ ಸರಿಯಾಗಿ ಇಲ್ಲದ ಜಾಗಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಪ್ರತಿವರ್ಷದಂತೆ ಈ ಬಾರಿಯೂ ನಡೆದಿದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತು ಮುಂದಿನ ಬಾರಿಯ ಜಾತ್ರೆಯ ಸಮಯದಲ್ಲಿ ಹೆಚ್ಚಿನ ಭದ್ರತೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಇನ್ನು ಜಾತ್ರೆಗೆ ಬರುವ ರೈತರಿಗೆ ತಾಲೂಕು ಆಡಳಿತ ತಾತ್ಕಾಲಿಕ ಶೌಚಾಲಯ ನಿರ್ಮಿಸದ ಕಾರಣ ರೈತರು ಸಿಕ್ಕ ಸಿಕ್ಕ ಬಯಲು ಪ್ರದೇಶದಲ್ಲೆ ಶೌಚಾಲಯ ಮಾಡಿಕೊಂಡ ಹಿನ್ನಲೆಯಲ್ಲಿ ಸುತ್ತಮುತ್ತ ವಾಸಿಸುವ ಜನರು ಮುಜುಗರಕ್ಕೆ ಒಳಗಾದ ಘಟನೆ ನಡೆದಿದೆ.
ಒಂದು ವಾರಗಳ ಕಾಲ ಪೌರಾಣಿಕ ನಾಟಕ ಪ್ರದರ್ಶನ
ಮಾಗಡಿ ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಮೈದಾನ, ಹೊಸಪೇಟೆ, ಎನ್ಇಎಸ್ ವೃತ್ತಗಳ ಬಳಿ ತಾಲೂಕಿನ ವಿವಿಧ ಗ್ರಾಮಗಳ ಜನರು ಒಂದು ವಾರಗಳ ಕಾಲ ಪೌರಾಣಿಕ ನಾಟಕ ಪ್ರದರ್ಶಿಸುವ ಮೂಲಕ ಜಾತ್ರೆಗೆ ಬಂದ ರೈತರಿಗೆ ಮನರಂಜನೆ ಒದಗಿಸಿದ್ದು ವಿಶೇಷವಾಗಿತ್ತು.
ಮಾಗಡಿ ಶ್ರೀ ರಂಗನಾಥ ದನಗಳ ಜಾತ್ರೆ ಯಶಸ್ವಿಯಾಗಲು ತಾಲ್ಲೂಕು ಆಡಳಿತದೊಂದಿಗೆ ಜನಪ್ರತಿನಿಧಿಗಳು ಹಾಗೂ ತಾಲ್ಲೂಕಿನ ಪ್ರಮುಖರು ಸಹಾಯ ಹಸ್ತ ಚಾಚಿದ್ದು ವಿಶೇಷವಾಗಿತ್ತು. ದನಗಳ ಜಾತ್ರೆಗೆ ತಾಲೂಕು ಆಡಳಿತ ಅಗತ್ಯ ಸೌಕರ್ಯಗಳನ್ನು ಒದಗಿಸಿತ್ತು. ಪಟ್ಟಣದ ಪುರಸಭೆ ದನಗಳ ಜಾತ್ರೆಯ ಮೈದಾನದಲ್ಲಿ ದೀಪ, ಸ್ವಚ್ಛತೆ ವ್ಯವಸ್ಥೆ ಮಾಡಿದರೆ, ಪಶು ಇಲಾಖೆಯಿಂದ ಜಾತ್ರೆಗೆ ಬರುವ ರಾಸುಗಳ ಆರೋಗ್ಯ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ತಾತ್ಕಾಲಿಕ ಪಶು ಆಸ್ಪತ್ರೆ ನಿರ್ಮಿಸಿದ್ದಾರೆ.
ಮಾಗಡಿ ತಹಶೀಲ್ದಾರ್ ಪ್ರತಿಕ್ರಿಯೆ
ರಾಜ್ಯದ ನಾನಾ ಮೂಲೆಗಳಿಂದ ಜಾತ್ರೆಗೆ ಸೇರುವ ರಾಸುಗಳು ಮತ್ತು ರೈತರ ಅನುಕೂಲಕ್ಕಾಗಿ ಶಾಸಕ ಎ.ಮಂಜುನಾಥ್, ಸಮಾಜ ಸೇವಕರಾದ ಕೆ.ಪಿ. ಮಹದೇವಶಾಸ್ತ್ರಿ, ಕೆ. ಬಾಗೇಗೌಡ ಸೇರಿದಂತೆ ಹಲವರು ರೈತರಿಗೆ ಊಟದ ವ್ಯವಸ್ಥೆ, ರಾಸುಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಜಾತ್ರೆ ಯಶಸ್ವಿಯಾಗಲು ಸಹಕಾರ ನೀಡಿದರು.
ಕೊರೊನಾದಿಂದ ಎರಡು ವರ್ಷಗಳ ಕಾಲ ಸಣ್ಣ ಪ್ರಮಾಣದಲ್ಲಿ ದನಗಳ ಜಾತ್ರೆ ನಡೆದಿತ್ತು ಈ ಬಾರಿ ಕೋವಿಡ್ ಭೀತಿ ತಗ್ಗಿದ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣದ ರಾಸುಗಳ ಜಾತ್ರೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪ್ರತಿವರ್ಷಕ್ಕಿಂತ ಈ ಬಾರಿ ದನಗಳ ಜಾತ್ರೆಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ರಾಸುಗಳಿಗೆ ಬೇಕಾದ ಮೂಲಭೂತ ವ್ಯವಸ್ಥೆ, ಜಾತ್ರೆಯ ಮೈದಾನದಲ್ಲಿ ಬೆಳಕಿನ ವ್ಯವಸ್ಥೆ ಹಾಗೂ ರೈತರಿಗೆ ಹಾಗೂ ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ತಾಲ್ಲೂಕು ಆಡಳಿತ ಕ್ರಮ ವಹಿಸಿದೆ ಎಂದು ತಹಶೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್ ತಿಳಿಸಿರು.
ರಾಸು ಮಾಲೀಕರ ಪ್ರತಿಕ್ರಿಯೆ
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ರೈತ ಜುಟ್ನಹಳ್ಳಿ ಜಯರಾಮು ಮಾತನಾಡಿ, ಇತ್ತೀಚೆಗೆ ನಾಟಿ ಹಸುಗಳ ತಳಿ ಮರೆಯಾಗುತ್ತಿರುವ ಸಮಯದಲ್ಲಿ ಮಾಗಡಿ ಶ್ರೀ ರಂಗನಾಥಸ್ವಾಮಿ ಜಾತ್ರೆ ರಾಜ್ಯದಲ್ಲೇ ಪ್ರಸಿದ್ಧಿ ಹೊಂದಿದೆ. ರಾಜ್ಯದ ಮೂಲೆಮೂಲೆಗಳಿಂದ ಜಾತ್ರೆಗೆ ಬರುವ ರಾಸುಗಳಿಗೆ ಮತ್ತು ರೈತರಿಗೆ ತಾಲೂಕು ಆಡಳಿತ ಮೂಲಭೂತ ಸೌಲಭ್ಯದ ಒದಗಿಸುವುದರ ಜೊತೆಗೆ ಈ ಬಾರಿಯ ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.