ಮೀನಿನ ಜೊತೆ ಬಂದಿದ್ದ ಗಾಂಜಾ; ಜಾಲ ಬೇಧಿಸಿದ ಮಾಗಡಿ ಪೊಲೀಸರ ಪ್ಲಾನ್
ರಾಮನಗರ, ಸೆಪ್ಟೆಂಬರ್ 22: ಮೀನು ಮಾರಾಟಗಾರರ ಸೋಗಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ರಾಮನಗರದ ಮಾಗಡಿ ಪೊಲೀಸರು ಪತ್ತೆಹಚ್ಚಿದ್ದು, ಆಂಧ್ರ ಮೂಲದ ಒಬ್ಬನನ್ನು ಬಂಧಿಸಿ, 60 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಖರೀದಿ ಮಾಡುವವರಂತೆ ನಟಿಸಿ, ಮಾದಕ ಜಾಲದ ಹಿಂದೆ ಬಿದ್ದ ಪೊಲೀಸರು ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಗಾಂಜಾ ಮಾರಾಟಗಾರನನ್ನು ಸಂಪರ್ಕಿಸಿ ಗಾಂಜಾ ಖರೀದಿಸುವ ಆಮಿಷ ತೋರಿಸಿದ್ದಾರೆ. ಗಾಂಜಾ ಸಮೇತ ಮೀನು ಮಾರಾಟಗಾರರ ಸೋಗಿನಲ್ಲಿ ಬಂದವರನ್ನು ಹೆಡೆಮುರಿ ಕಟ್ಟುವಲ್ಲಿ ಮಾಗಡಿ ಪೊಲೀಸರು ಸಫಲರಾಗಿದ್ದಾರೆ. ಮೀನು ವ್ಯಾಪಾರಿಯಂತೆ ಜಿಲ್ಲೆಗೆ ಬಂದ ವಿಶಾಖಪಟ್ಟಣಂ ಮೂಲದ ಪಾಂಗಿಪ್ರಸಾದ್ ಎಂಬಾತನನ್ನು ಬಂಧಿಸಿ, ಆರೋಪಿ ಸಹಚರರಾದ ಬೆಂಗಳೂರಿನ ಕುಪ್ಪ, ಶಿವರಾಜು, ಶಂಕರ್, ಮಂಜುನಾಥ್, ನವೀನ್, ಶರತ್ ಎಂಬ ಆರೋಪಿಗಳನ್ನೂ ಜೈಲಿಗಟ್ಟಿದ್ದಾರೆ.
ವಿಶಾಖಪಟ್ಟಣಕ್ಕೇ ಹೋಗಿದ್ದ ಪೊಲೀಸರು
ಮಾಗಡಿಯ ಮಂಚನಬೆಲೆ ಬಳಿ ಗಾಂಜಾ ಮಾರಾಟದ ಮಾಹಿತಿ ಪಡೆದ ಮಾಗಡಿ ಪೊಲೀಸರು ಮೊದಲಿಗೆ ಆರೋಪಿ ಶಿವರಾಜ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಆತ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ಬರುತ್ತಿದೆ ಎಂದು ಮಾಹಿತಿ ಕೊಟ್ಟಿದ್ದಾನೆ. ಗಾಂಜಾ ಮಾರಾಟಗಾರರ ಬೆನ್ನು ಬಿದ್ದ ಪೊಲೀಸರು ವಿಶಾಖಪಟ್ಟಣಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಲು ಪ್ಲಾನ್ ಮಾಡಿಕೊಂಡಿದ್ದರು. ಎಚ್ಚೆತ್ತುಕೊಂಡಿದ್ದ ಆರೋಪಿ ಪಾಂಗಿ ಪ್ರಸಾದ್, ನಮಗೆ ಮಾಹಿತಿ ಕೊಡದೆ ಬಂದಿದ್ದೀಯ, ನಿನ್ನ ಮೇಲೆ ನಂಬಿಕೆ ಇಲ್ಲ ಎಂದು ತಪ್ಪಿಸಿಕೊಂಡಿದ್ದಾನೆ. ಮೊದಲ ಪ್ರಯತ್ನದಲ್ಲಿ ಬರಿಗೈಯಲ್ಲಿ ಪೊಲೀಸರು ವಾಪಸ್ಸಾದರು.
44 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ರಾಮನಗರ ಪೊಲೀಸರು
ಜಾಲ ಬೇಧಿಸಲು ಪೊಲೀಸರ ಪ್ಲಾನ್
ಮೊದಲ ಪ್ರಯತ್ನದ ಸೋಲಿನಿಂದ ಧೃತಿಗೆಡದ ಮಾಗಡಿ ಪೊಲೀಸರು ಮತ್ತೊಂದು ಯೋಜನೆ ರೂಪಿಸಿ ಪೂರೈಕೆದಾರನ ವಿಶ್ವಾಸಗಳಿಸಲು ಆತನ ಬ್ಯಾಂಕ್ ಖಾತೆಗೆ ಹಣ ಹಾಕುವ ಮೂಲಕ ಖರೀದಿ ಮಾಡಲು ಮಾತುಕತೆ ಮಾಡಿಕೊಂಡರು. ಈ ವೇಳೆ ಪೊಲೀಸರನ್ನು ನಂಬಿದ ಪಾಂಗಿಪ್ರಸಾದ್, ಅವರಿಗೆ ಬರುವಂತೆ ಸೂಚನೆ ನೀಡಿದ್ದಾನೆ. ಇದರಿಂದ ಅಪಾಯ ಅರಿತ ಪೊಲೀಸರು, ನಮ್ಮಲ್ಲಿ ಒಬ್ಬನಿಗೆ ಕೊರೊನಾ ಬಂದಿದೆ ನೀವೇ ತಂದುಕೊಡಿ ಎಂದು ಮನವಿ ಮಾಡಿದ್ದಾರೆ.
ಮೀನು ಸಾಗಾಣಿಕೆ ನೆಪದಲ್ಲಿ ಗಾಂಜಾ ತಂದಿದ್ದ
ಗಾಂಜಾ ಖರೀದಿಗಾರರಂತೆ ಮಾತನಾಡಿದ ಪೊಲೀಸರನ್ನು ನಂಬಿದ ಆರೋಪಿ ಪಾಂಗಿಪ್ರಸಾದ್ ನೇರವಾಗಿ ಮಾಗಡಿಗೆ ಗಾಂಜಾ ತಂದುಕೊಡುವ ಭರವಸೆ ನೀಡಿ, 60 ಕೆ.ಜಿ ಗಾಂಜಾವನ್ನು ಮೀನು ಸಾಗಾಣಿಕೆ ರೂಪದಲ್ಲಿ ತಂದಿದ್ದಾನೆ. ಈ ಸಂದರ್ಭ ಮಾಗಡಿಗೆ ಬಂದಿದ್ದ ಆರೋಪಿ ಪಾಂಗಿಪ್ರಸಾದ್ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ದಾವಣಗೆರೆಯಲ್ಲಿ ಚುರುಕುಗೊಂಡ ಕಾರ್ಯಾಚರಣೆ; ಈ ತಿಂಗಳು ಪತ್ತೆಯಾದ ಗಾಂಜಾ ಪ್ರಕರಣವೆಷ್ಟು?
Recommended Video
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘನೆ
ವ್ಯವಸ್ಥಿತ ಯೋಜನೆ ರೂಪಿಸಿ ಅಂತರರಾಜ್ಯ ಗಾಂಜಾ ಮಾದಕ ಜಾಲದ ಹೆಡೆಮುರಿ ಕಟ್ಟಿದ ಮಾಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಅವರು ಅಭಿನಂದಿಸಿದ್ದಾರೆ.