ಬೆಂಗಳೂರು ಹಾಲು ಒಕ್ಕೂಟದ ನಿರ್ಧಾರ ಖಂಡಿಸಿದ ಶಾಸಕ ಎ.ಮಂಜುನಾಥ್
ರಾಮನಗರ, ಮೇ 31: ರೈತರಿಂದ ಖರೀದಿಸುವ ಹಾಲಿನ ಬೆಲೆಯಲ್ಲಿ 1.50 ರೂ. ಕಡಿತಕ್ಕೆ ಮುಂದಾಗಿರುವ ಬೆಂಗಳೂರು ಹಾಲು ಒಕ್ಕೂಟ ನಿರ್ಧಾರವನ್ನು ಮಾಗಡಿ ಶಾಸಕ ಎ.ಮಂಜುನಾಥ ಖಂಡಿಸಿ, ಹೋರಾಟದ ಎಚ್ಚರಿಕೆ ನೀಡಿದರು.
ಬೆಂಗಳೂರು ಹಾಲು ಒಕ್ಕೂಟವು ಕೊರೊನಾ ಸಂಕಷ್ಟ ಕಾಲದಲ್ಲಿ ರೈತರ ನೆರವಿಗೆ ಧಾವಿಸದೆ ರೈತರಿಂದ ತೆಗೆದುಕೊಳ್ಳುವ ಹಾಲಿನ ಬೆಲೆ ಕಡಿಮೆ ಮಾಡಲು ಮುಂದಾಗಿರುವುದರ ವಿರುದ್ಧ ಮಾಗಡಿ ಶಾಸಕ ಎ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ರಾಮನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾಗಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜುನಾಥ್, ಬೆಂಗಳೂರು ಹಾಲು ಒಕ್ಕೂಟ ಮಂಗಳವಾರದಿಂದ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ 1 ರೂ. 50 ಪೈಸೆ ಕಡಿತ ಮಾಡಿದೆ. ಅಲ್ಲದೇ ರೈತರಿಂದ ವಾರದಲ್ಲಿ ಎರಡು ದಿನ ಹಾಲಿ ಖರೀದಿಸದಿರಲು ಬೆಂಗಳೂರು ಹಾಲು ಒಕ್ಕೂಟ ಹಲವಾರು ಸಭೆಗಳನ್ನು ನಡೆಸುತ್ತಿದೆ ಎಂದು ಶಾಸಕ ಎ.ಮಂಜುನಾಥ್ ಆರೋಪಿಸಿದರು.
ಕೋವಿಡ್ ಮಹಾಮಾರಿ ಇನ್ನಿಲ್ಲದಂತೆ ಜನರನ್ನು ಕಾಡುತ್ತಿದೆ ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನೆಲಸಿದ್ದ ಗ್ರಾಮೀಣ ಭಾಗದ ಜನರು ಉದ್ಯೋಗ ತೊರೆದು ಗ್ರಾಮಕ್ಕೆ ವಾಪಸ್ಸು ಬಂದು ಹಸು ಸಾಕಾಣಿಕೆಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಆಟೋ ಚಾಲಕರು, ಸಣ್ಣಪುಟ್ಟ ವೃತ್ತಿ ಸೇರಿದಂತೆ ಇಂಜಿನಿಯರ್ ಉದ್ಯೋಗ ತೊರೆದು ಹಳ್ಳಿ ಸೇರಿದ ನೂರಾರು ಮಂದಿ ಹೈನು ಉದ್ಯಮ ಆಸರೆಯಾಗಿತ್ತು. ಅದರೆ ಒಕ್ಕೂಟದ ನಿರ್ಧಾರದಿಂದ ಕೊಡಲಿ ಪೆಟ್ಟು ನೀಡಿದೆ ಎಂದು ಶಾಸಕ ಎ.ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
ಬೆಂಗಳೂರು ಹಾಲು ಒಕ್ಕೂಟಕ್ಕೆ ಲಾಭ ಬರುತ್ತಿಲ್ಲ ಎಂದು ರೈತರ ಮೇಲೆ ಗದಾಪ್ರಹಾರಕ್ಕೆ ಮುಂದಾಗಿದ್ದು, ಅದರ ಬದಲು ಒಕ್ಕೂಟದಲ್ಲಿ ಅಗುತ್ತಿರುವ ಸೋರಿಕೆಯನ್ನು ತಪ್ಪಿಸಬೇಕು. ಅಲ್ಲದೇ ಒಬ್ಬರು ಕಾರ್ಯನಿರ್ವಹಿಸುವ ಜಾಗದಲ್ಲಿ ಮೂರು ಮಂದಿ ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ಒಕ್ಕೂಟ ಸಂಬಳ ನೀಡುವ ಮೂಲಕ ನಷ್ಟದ ಹಾದಿ ಹಿಡಿದಿದೆ ಎಂದು ಶಾಸಕ ಎ.ಮಂಜುನಾಥ್ ಆರೋಪಿಸಿದರು.
Recommended Video
ಬೆಂಗಳೂರು ಹಾಲು ಒಕ್ಕೂಟ ತಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು. ರೈತರಿಂದ ಖರೀದಿಸುವ ಹಾಲಿಗೆ ಬೆಲೆ ಕಡಿತ ಮಾಡಿದರೆ, ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿ ರೈತರ ಪರವಾಗಿ ಹೋರಾಟ ಮಾಡುವುದಾಗಿ ಮಾಗಡಿ ಎ.ಮಂಜುನಾಥ್ ಒಕ್ಕೂಟಕ್ಕೆ ಎಚ್ಚರಿಕೆ ನೀಡಿದರು.