ಬೆಂಬಲಿಗನ ಬರ್ತ್ ಡೇ ಆಚರಿಸಿದ ಮಾಗಡಿ ಶಾಸಕ ಎ.ಮಂಜುನಾಥ್ ವಿರುದ್ಧ ವ್ಯಾಪಕ ಟೀಕೆ
ರಾಮನಗರ, ಜುಲೈ 7: ಮಹಾಮಾರಿ ಕೊರೊನಾ ವೈರಸ್ ಸೋಂಕು ಎದುರಿಸಲು ಜನರಿಗೆ ತಿಳುವಳಿಕೆ ನೀಡಬೇಕಾದ ಮಾಗಡಿ ಶಾಸಕ ಎ.ಮಂಜುನಾಥ್ ಸಾಮಾಜಿಕ ಅಂತರ ಇಲ್ಲದೆ ತಮ್ಮ ಪಕ್ಷದ ಹಿರಿಯ ಮುಖಂಡರೊಬ್ಬರ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ಮಾಗಡಿ ಶಾಸಕ ಎ.ಮಂಜುನಾಥ್ ಸೇಫ್
ತಮ್ಮ ಬೆಂಬಲಿಗ ಹಾಗೂ ಪಕ್ಷದ ಹಿರಿಯ ಮುಖಂಡರಾದ ಶೇಷಪ್ಪ ಎಂಬುವವರ 60 ನೇ ವರ್ಷದ ಹುಟ್ಟುಹಬ್ಬವನ್ನು ಶಾಸಕರ ನೇತೃತ್ವದಲ್ಲಿ ಬಿಡದಿಯ ಹೊಸದೊಡ್ಡಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಬರ್ತ್ ಡೇ ಪಾರ್ಟಿ ಗೆ ಬೆಂಗಳೂರು, ಮೈಸೂರು, ಮಂಡ್ಯದಿಂದ ಜನರು ಆಗಮಿಸಿದ್ದರು ಎನ್ನಲಾಗಿದೆ.
ಮಾಗಡಿ ಶಾಸಕರಾದ ಎ.ಮಂಜುನಾಥ್ ತಮ್ಮ ಆತ್ಮೀಯ ಮುಖಂಡ ಮತ್ತು ಅಪ್ತ ಸಹಾಯಕ ಇಬ್ಬರಲ್ಲೂ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿ, ವೈದ್ಯಕೀಯ ಪರೀಕ್ಷೆಯಲ್ಲಿ ಕೊರೊನಾ ವೈರಸ್ ನೆಗಟಿವ್ ವರದಿ ಬಂದ ಎರಡೇ ದಿನದಲ್ಲೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹುಟ್ಟುಹಬ್ಬ ಆಚರಣೆ ಮಾಡಿದ ಶಾಸಕರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.