ಡಿಕೆಶಿ ಬ್ರದರ್ಸ್ ಕೋಟೆಯೊಳಗೆ ಸೈನಿಕ ಯೋಗೇಶ್ವರ್ 'ಸರ್ಜಿಕಲ್ ಸ್ಟ್ರೈಕ್'?
Recommended Video
ಸಚಿವ ಡಿ.ಕೆ.ಶಿವಕುಮಾರ್ ಮತ್ತು ಅವರ ಸೋದರ ಡಿ.ಕೆ.ಸುರೇಶ್ ಗೆ ಎದುರಾಳಿಗಳೇ ಇಲ್ಲವಾ? ಎಂದು ರಾಮನಗರ ಜಿಲ್ಲೆಯಲ್ಲಿ ಯಾರನ್ನಾದರೂ ಕೇಳಿದರೆ, ತಕ್ಷಣಕ್ಕೆ ಹೇಳುವ ಹೆಸರು ಸಿ.ಪಿ.ಯೋಗೇಶ್ವರ್ ದು. ಆತ ಒಂದೆರಡು ಸೋಲಿನ ಬಡಪೆಟ್ಟಿಗೆ ಬಗ್ಗುವ ಆಸಾಮಿ ಅಲ್ಲ. ಡಿಕೆಶಿ ಬ್ರದರ್ಸ್ ಕೋಟೆಗೆ 'ಸೈನಿಕ' ಯೋಗೇಶ್ವರ್ ದಾಳಿ ಮಾಡುವ ಎಲ್ಲ ಲಕ್ಷಣಗಳು ಕಂಡು ಬಂದಿವೆ ಎನ್ನುತ್ತಾರೆ ಇಲ್ಲಿನ ಜನ.
ಕಳೆದ ಐದು ವರ್ಷಗಳಿಂದ ಭದ್ರಕೋಟೆಯನ್ನಾಗಿ ಮಾಡಿಕೊಂಡಿರುವ ಡಿಕೆಶಿ ಬ್ರದರ್ಸ್ ಅವರನ್ನು ಮಣಿಸುತ್ತಾರಾ ಎಂಬುದು ಎಲ್ಲರ ಕುತೂಹಲವಾಗಿದೆ. ತನ್ನ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್ ಪ್ರಬಲವಾಗಿ ನೆಲಯೂರಿದ್ದಾರೆ. ಅವರಿಗೆ ಬೆನ್ನೆಲುಬಾಗಿ ಸಹೋದರ- ಸಚಿವ ಡಿ.ಕೆ.ಶಿವಕುಮಾರ್ ಇದ್ದಾರೆ. ಜತೆಗೆ ಬೆಂಬಲಿಗರ ದೊಡ್ಡ ಪಡೆಯಿದೆ. ಅಷ್ಟೇ ಅಲ್ಲ, ಜೆಡಿಎಸ್ ಬೆನ್ನಿಗಿದೆ. ಇವೆಲ್ಲವನ್ನೂ ಭೇದಿಸಿ ಮುನ್ನುಗ್ಗುತ್ತಾರಾ 'ಸೈನಿಕ' ಸಿ.ಪಿ.ಯೋಗೇಶ್ವರ್ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಆ ಎರಡು ಆಘಾತದಿಂದ ಸಿ.ಪಿ.ಯೋಗೇಶ್ವರ್ ಹೊರಬಂದಿಲ್ವಾ?
ರಾಮನಗರ ವ್ಯಾಪ್ತಿಯಲ್ಲಿ ತನ್ನದೇ ಆದ ಮತದಾರರು, ಕಾರ್ಯಕರ್ತರು, ಬೆಂಬಲಿಗರ ಪಡೆಯನ್ನು ಕಟ್ಟಿಕೊಂಡಿರುವ ಸಿ.ಪಿ.ಯೋಗೇಶ್ವರ್ ಯಾವ ಪಕ್ಷಕ್ಕೆ ಹೋದರೂ ಸುಲಭವಾಗಿ ಗೆಲುವು ಸಾಧಿಸಿಬಿಡುತ್ತಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆ ಅವರ ಉತ್ಸಾಹಕ್ಕೆ ತಣ್ಣೀರು ಎರಚಿದ್ದಂತೂ ಸತ್ಯ. ಇದೀಗ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಅವರ ಹೆಸರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಡಿಕೆಶಿ ಸೋದರರ ತೋಳ್ಬಲ, ದೌರ್ಜನ್ಯ ನಡೆಯದು
ಹೀಗಿರುವಾಗ ಡಿಕೆಶಿ ಬ್ರದರ್ಸ್ ಕೋಟೆಗೆ ಯಾವ ರೀತಿಯಲ್ಲಿ ಲಗ್ಗೆಯಿಡುತ್ತಾರೆ? ಮತದಾರರನ್ನು ಸೆಳೆಯಲು ಯಾವ್ಯಾವ ತಂತ್ರ ಮಾಡುತ್ತಾರೆ ಎಂಬಿತ್ಯಾದಿ ಕುತೂಹಲ ಜನರಲ್ಲಿ ಹುಟ್ಟು ಹಾಕಿದೆ. ಈಗಾಗಲೇ ಡಿಕೆಶಿ ಬ್ರದರ್ಸ್ ಮೇಲೆ ಮಾತಿನ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಸಿ.ಪಿ.ಯೋಗೇಶ್ವರ್, ಡಿ.ಕೆ.ಶಿವಕುಮಾರ್ ಅವರ ಕಪ್ಪು ಸಾಮ್ರಾಜ್ಯದ ಅಧಃಪತನ ಆರಂಭವಾಗಿದ್ದು, ಇನ್ನು ಮುಂದೆ ಡಿಕೆಶಿ ಸಹೋದರರ ತೋಳ್ಬಲ ಹಾಗೂ ದೌರ್ಜನ್ಯ ನಡೆಯದು. ರಾಮನಗರ ಜಿಲ್ಲೆಯಲ್ಲಿ ರಾವಣನಂತಹವರು ಆಡಳಿತ ನಡೆಸುತ್ತಿರುವುದರಿಂದ ಸರಕಾರಿ ಕಚೇರಿಗಳು ಭ್ರಷ್ಟಾಚಾರದ ಕೂಪಗಳಾಗಿವೆ. ಅಧಿಕಾರ ಯಂತ್ರ ಸಂಪೂರ್ಣ ಹದಗೆಟ್ಟಿದೆ. ಮಿತಿ ಮೀರಿದ ದುರಾಡಳಿತದಿಂದ ಜನರು ಶೋಷಣೆಗೆ ಒಳಗಾಗಿದ್ದಾರೆ ಎಂದು ಆರೋಪಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅವರ ಪತ್ನಿ ಅನಿತಾಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ತಮ್ಮ ಸ್ವಾರ್ಥಕ್ಕಾಗಿ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದ್ದಾರೆ. ರಾತ್ರೋ ರಾತ್ರಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಜನರ ವಿಶ್ವಾಸವನ್ನು ಕಡೆಗಣಿಸಿದ್ದಾರೆ. ಇಂತಹವರಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಬುದ್ಧಿ ಕಲಿಸಬೇಕು. ಜೆಡಿಎಸ್ ಮತ್ತು ಕಾಂಗ್ರೆಸ್ ಅಪವಿತ್ರ ಮೈತ್ರಿಯನ್ನು ಜನತೆ ಒಪ್ಪುತ್ತಿಲ್ಲ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ ಎಂದಿದ್ದಾರೆ ಯೋಗೇಶ್ವರ್.
ಬೆಂಗಳೂರು ಗ್ರಾಮಾಂತರದಲ್ಲಿ ಪ್ರಬಲ ಪೈಪೋಟಿ
ಈ ಮಧ್ಯೆ ಮತದಾರರು ಇವರೆಲ್ಲರನ್ನೂ ಹಗುರವಾಗಿ ಕಾಣುತ್ತಿದ್ದಾರೆ. ಮಾಧ್ಯಮಗಳ ಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ತಮ್ಮ ಸ್ವಾರ್ಥಕ್ಕೆ ಬೇಕಾದುದೆಲ್ಲವನ್ನೂ ಮಾಡುತ್ತಿದ್ದಾರೆ ಎಂಬುದು ಜನರ ಆಕ್ರೋಶಕ್ಕೆ ಕಾರಣ ಆಗಿದೆ. "ನಾನು ಕಳೆದ ಎಂಟು ತಿಂಗಳಿನಿಂದ ರಾಜಕೀಯ ಚಟುವಟಿಕೆಯಿಂದ ದೂರ ಉಳಿದಿದ್ದೆ. ಇದೀಗ ಸಕ್ರಿಯ ರಾಜಕಾರಣಕ್ಕೆ ಮರಳಿದ್ದೇನೆ" ಎನ್ನುವ ಮೂಲಕ ಸಿ.ಪಿ.ಯೋಗೇಶ್ವರ್ ಅವರು ಡಿಕೆಶಿ ಬ್ರದರ್ಸ್ ಗೆ ತೊಡೆ ತಟ್ಟಿದ್ದಾರೆ. ಇದು ಮುಂದಿನ ದಿನಗಳಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಎದುರಾಗಲಿದೆ ಎಂಬುದನ್ನು ಸಾರಿ ಹೇಳಿದಂತಿದೆ.
ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಸೋಲು
ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಕಾಂಗ್ರೆಸ್ ಇಪ್ಪತ್ತು ಕ್ಷೇತ್ರಗಳು ಹಾಗೂ ಜೆಡಿಎಸ್ ಎಂಟು ಕ್ಷೇತ್ರಗಳು ಹಂಚಿಕೊಂಡಿವೆ. ಮೈತ್ರಿ ಸರಕಾರದಲ್ಲಿ ಪ್ರಬಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರಕ್ಕೆ ಹಾಲಿ ಸಂಸದರು ಕೂಡ ಅವರೇ. ಈ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸುರೇಶ್ ಕಣಕ್ಕಿಳಿದರೆ, ಅವರ ವಿರುದ್ಧ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ರನ್ನು ಅಖಾಡಕ್ಕೆ ಇಳಿಸಲು ಸಿದ್ಧತೆ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸಿದ್ದ ಯೋಗೇಶ್ವರ್, ಕುಮಾರಸ್ವಾಮಿ ಅವರ ವಿರುದ್ಧ ಸೋಲನುಭವಿಸಿದರು.