ಪಿಎಸ್ಐ ಅಕ್ರಮ ಪ್ರಕರಣಕ್ಕೆ ಲಾಜಿಕಲ್ ಅಂತ್ಯ; ಗೃಹ ಸಚಿವರ ಭರವಸೆ
ರಾಮನಗರ, ಮೇ 19: "ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಸಂಬಂಧ ತನಿಖೆ ನಡೆಯುತ್ತಿದೆ. ಅನೇಕರು ವಂಚಿಸಿದ್ದಾರೆ, ಇದಕ್ಕೆ ಲಾಜಿಕಲ್ ಅಂತ್ಯ ಹಾಡಲಿದ್ದೇವೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಗುರುವಾರ ರಾಮನಗರದಲ್ಲಿ ಮಾತನಾಡಿದ ಸಚಿವರು, "ಕಷ್ಟಪಟ್ಟು ಓದಿದವರ ಬಾಯಿಗೆ ಮಣ್ಣು ಹಾಕಿದ್ದಾರೆ. ಅವರನ್ನು ಸುಮ್ಮನೆ ಬಿಡುವುದಿಲ್ಲ. ನಾವು ತಪ್ಪು ಮಾಡಿದ ಪೊಲೀಸರನ್ನೇ ಬಿಡುತ್ತಿಲ್ಲ" ಎಂದರು.
"ರಾಜ್ಯದ 92 ಕೇಂದ್ರಗಳಿಲ್ಲಿ ಪರೀಕ್ಷೆ ನಡೆದಿದೆ. ಅಲ್ಲಿ ನಾನು ಹೋಗಿ ಪರಿಶೀಲನೆ ನಡೆಸಲು ಸಾಧ್ಯವೆ?. ಯಾವುದೇ ಮುಲಾಜು, ಪ್ರಭಾವ ಇಲ್ಲದೇ, ಸಿಐಡಿಗೆ ಸಂಪೂರ್ಣ ಅಧಿಕಾರ ನೀಡಿದ್ದೇವೆ" ಎಂದು ಸಚಿವರು ತಿಳಿಸಿದರು.
"ಮುಂದಿನ ಪರೀಕ್ಷೆಯಲ್ಲಿ ಅಕ್ರಮ ತಡೆಯುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. 2016 ರಲ್ಲಿ ಪಿಯುಸಿಯಲ್ಲಿ ನಾಲ್ಕು ಭಾರಿ ಪರೀಕ್ಷೆ ನಡೆದಿದೆ. 2014 -15 ರಲ್ಲಿ ಎಪಿಪಿಗಳ ಆಯ್ಕೆಯಲ್ಲಿಯೂ ಅಂಕಗಳನ್ನು ತಿದ್ದಿದ್ದಾರೆ. ಅಂತಹ ನೇಮಕಗಳನ್ನು ತಡೆಹಿಡಿಯಲಾಗಿದೆ" ಎಂದರು.
"ಅಮಾಯಕರಿಗೆ ಅನ್ಯಾಯವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಒಂದು ಸೆಂಟರ್ನಲ್ಲಿ ಅಕ್ರಮ ನಡೆದಿಲ್ಲ. ಮುಖ್ಯ ಕಚೇರಿಯ ಲಾಕರ್ನಲ್ಲಿದ್ದ ಒಎಂಆರ್ ಶೀಟ್ಗಳನ್ನು ತಿದ್ದಿದ್ದಾರೆ. ಅಲ್ಲದೇ ಬ್ಲೂಟೂತ್ ಬಳಕೆ ಮಾಡಿಕೊಂಡು ಅಕ್ರಮ ನಡೆಸಿದ್ದಾರೆ" ಎಂದು ಗೃಹ ಸಚಿವರು ವಿವರಿಸಿದರು.
"ಈಗ ಮರು ಪರೀಕ್ಷೆ ಅನಿವಾರ್ಯ. ಆದರೆ ನೋಟಿಪಿಕೆಷನ್ ರದ್ದುಪಡಿಸಿಲ್ಲ. ಈಗ ಪರೀಕ್ಷೆಯನ್ನೇ ರದ್ದು ಮಾಡಿದ್ದೇವೆ. ಯಾರು ಅಕ್ರಮ ನಡೆಸಿದ್ದಾರೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಇದು ನಮ್ಮ ಅಸಹಾಯಕತೆಯಾಗಿದೆ" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
Recommended Video