ಲಾಕ್ ಡೌನ್: ಜನರ ನೆರವಿಗೆ ಹಾರೋಹಳ್ಳಿ ಕೈಗಾರಿಕಾ ಸಂಘ
ರಾಮನಗರ, ಏಪ್ರಿಲ್ 03: ಕೋವಿಡ್-19 ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ 21 ದಿನಕ್ಕೆ ಬೇಕಾದ ದಿನಸಿ ಪದಾರ್ಥಗಳನ್ನು ಪೂರೈಕೆ ಮಾಡಲು ಹಾರೋಹಳ್ಳಿ ಕೈಗಾರಿಕಾ ವಲಯದ ಕೈಗಾರಿಕಾ ಸಂಘ ಮುಂದಾಗಿದೆ.
ಕೋವಿಡ್-19 ಹರಡದಂತೆ 21 ದಿನಗಳ ಕಾಲ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಹಾಗೂ ಹೊರ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಬಂದಿರುವ ಕಾರ್ಮಿಕರು ಜೀವನ ನಡೆಸುಲು ಕಷ್ಟಪಡುತ್ತಿರುವ ಕುಟುಂಬಗಳನ್ನು ಗುರುತಿಸಿ, ಅವರಿಗೆ ಆಹಾರ ಪದಾರ್ಥಗಳನ್ನು ತಾಲ್ಲೂಕು ಕಾರ್ಯನಿರ್ವಹಣಾ ಅಧಿಕಾರಿಗಳ ನೇತೃತ್ವದಲ್ಲಿ ವಿತರಿಸಿದರು.
ಪ್ರಮುಖವಾಗಿ ರಾಮನಗರ ತಾಲ್ಲೂಕಿನ ಮಂಚನಾಯಕನಹಳ್ಳಿ, ಬಿಳುಗುಂಬ, ವಿಭೂತಿಕೆರೆ ಗ್ರಾಮ ಪಂಚಾಯಿತಿ ಹಾಗೂ ಬಿಡದಿ ಪುರಸಭೆಯ ಕೆಲವು ಭಾಗದಲ್ಲಿ ಸುಮಾರು 270 ಅರ್ಹ ಕುಟುಂಬಗಳನ್ನು ಗುರುತಿಸಿ ಅವರಿಗೆ ಖುದ್ದು ಆಹಾರ ಸಾಮಗ್ರಿಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ಖುದ್ದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ರಂ ವಿತರಿಸಿದರು.
ಪ್ರತಿ ಒಂದು ಕುಟುಂಬಕ್ಕೆ ನೀಡುವ ಆಹಾರದ ಪಾಕೆಟ್ ನಲ್ಲಿ ಅಕ್ಕಿ, ರಾಗಿ ಹಿಟ್ಟು, ಗೋಧಿ ಹಿಟ್ಟು, ಸಕ್ಕರೆ, ಬೇಳೆ, ಟೂತ್ ಬ್ರಷ್, ಟೂತ್ ಪೇಸ್ಟ್, ಸೋಪ್, ಸೇರಿದಂತೆ ಸುಮಾರು 1,070 ರೂ. ಮೌಲ್ಯದ 270 ಆಹಾರ ಪದಾರ್ಥದ ಪ್ಯಾಕೆಟ್ ಗಳನ್ನು ವಿತರಿಸಿದರರು.