ಈ ಊರಿನಲ್ಲಿ ಕುರಿ, ಮೇಕೆ, ನಾಯಿಗಳೆಲ್ಲ ದಿಢೀರ್ ಮಾಯ!
ರಾಮನಗರ, ನವೆಂಬರ್ 11: ಈ ಊರಿನಲ್ಲಿ ಕುರಿ, ಮೇಕೆ, ನಾಯಿಗಳಲ್ಲೆ ಕಣ್ಣು ಮುಚ್ಚಿ ಕಣ್ಣು ಬಿಡುವುದರಲ್ಲೇ ಮಂಗಮಾಯವಾಗುತ್ತಿದ್ದವು. ಇದು ಅಚ್ಚರಿ ಪಡುವ ವಿಚಾರ ಅನಿಸಿದರೂ ಅಸಲಿ ಕಥೆ ಬೇರೆಯೇ ಇದೆ. ಈ ಸುದ್ದಿಯನ್ನು ನೋಡಿದ್ರೆ ನಿಮಗೆ ಅಚ್ಚರಿ ಅನ್ನಿಸಲ್ಲ. ಬದಲಿಗೆ ಭಯ ಆಗುತ್ತದೆ.
ಪ್ರಾಣಿಗಳೆಲ್ಲ ಮಾಯವಾಗುತ್ತವೆ ಅಂದರೆ ಎಂಥವರಿಗೂ ಒಂದು ಕ್ಷಣ ಅಚ್ಚರಿ ಹುಟ್ಟುತ್ತದೆ. ಆದರೆ, ಇಲ್ಲಿ ಪ್ರಾಣಿಗಳು ತನ್ನಂತಾನೆ ಮಾಯವಾಗುತ್ತಿರಲಿಲಲ್ಲ. ಇದರ ಹಿಂದೆ ಬೇರೆ ಎಲ್ಲಿಂದಲೋ ಬಂದ ಒಬ್ಬರ ಕೈವಾಡವಿದೆ. ಅದು ವ್ಯಕ್ತಿಯಲ್ಲ, ವ್ಯಾಘ್ರ.
ತುಮಕೂರಿನ ಬನ್ನಿಕುಪ್ಪೆ ಅರಣ್ಯದಲ್ಲಿ ಮಹಿಳೆಯನ್ನು ಕೊಂದು ತಿಂದಿರುವ ಚಿರತೆ
ಹೌದು, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಕಂಚುಕಲ್ ಗ್ರಾಮದಲ್ಲಿ ಈ ವ್ಯಾಘ್ರ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು. ಗ್ರಾಮಸ್ಥರಿಗೆ ನಿತ್ಯ ಆತಂಕ ಕಾಡುತ್ತಲೇ ಇತ್ತು. .ಯಾವಾಗ ಏನಾಗುತ್ತೋ ಏನೋ ಎಂಬ ಭಯದಲ್ಲಿಯೇ ಜನರು ಕಾಲ ಕಳೆಯುವಂತೆ ಆಗಿತ್ತು. ಆದರೆ, ಈಗ ಅರಣ್ಯ ಅಧಿಕಾರಿಗಳು ಅದಕ್ಕೊಂದು ಮುಕ್ತಿ ನೀಡಿದ್ದಾರೆ.
ವಾರದ ಬಳಿಕ ಬಲೆಗೆ ಬಿದ್ದ ಕಾಡಿನ ಅತಿಥಿ:
ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದ ಚಿರತೆ ಕಂಚುಕಲ್ ಗ್ರಾಮಸ್ಥರಲ್ಲಿ ಭಯವನ್ನು ಹುಟ್ಟು ಹಾಕಿತ್ತು. ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಮೇಕೆ, ಕುರಿ, ನಾಯಿಗಳನ್ನು ಹೊತ್ತೊಯ್ದ ಘಟನೆಗಳು ನಡೆದಿದ್ದವು. ಇದರಿಂದ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಕಳೆದ ಒಂದು ವಾರದ ಹಿಂದೆ ಬೋನ್ ಇರಿಸಿದ್ದರು. ಅಧಿಕಾರಿಗಳು ಇರಿಸಿದ ಬೋನ್ ಗೆ ಇಂದು ಕಾಡಿನ ಅತಿಥಿ ಬಂದು ಸೆರೆ ಸಿಕ್ಕಿದೆ.
ಎಚ್ಚರ ತಪ್ಪಿದ್ದರೆ ಮಕ್ಕಳ ಪ್ರಾಣಕ್ಕೇ ಕುತ್ತು:
ಕಂಚುಕಲ್ ಬಂಡೆ ಮಠದ ಅವರಣದಲ್ಲಿಯೇ ಚಿರತೆ ಇಂದು ಸೆರೆಯಾಗಿದೆ. ನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇದೇ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಿತ್ತು. ಇಂದು ಚಿರತೆ ಸೆರೆಯಿಂದ ವಿಧ್ಯಾರ್ಥಿಗಳು ನಿರಾಳರಾಗಿದ್ದಾರೆ.