ರಾಮನಗರದಲ್ಲಿ ಮಗು ತಿಂದಿದ್ದ ನರಭಕ್ಷಕ ಚಿರತೆ ಸೆರೆ
ರಾಮನಗರ, ಮೇ 13: ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕದರಯ್ಯನಪಾಳ್ಯದ ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಮಗುವನ್ನು ಹೊತ್ತೊಯ್ದು ಕೊಂದಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಮೇ.8 ರ ಮಧ್ಯರಾತ್ರಿ ತಾಯಿಯೊಂದಿಗೆ ಮಲಗಿದ್ದ ಮೂರು ವರ್ಷದ ಹೇಮಂತ್ ನನ್ನು ಚಿರತೆ ಹೊತ್ತೊಯ್ದು ಮನೆಯ ಸಮೀಪದ ಪೊದೆಯಲ್ಲಿ ಅರೆಬರೆ ತಿಂದು ಹಾಕಿದ ಚಿರತೆಯನ್ನು ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ಚಿರತೆ ಮನೆಗೆ ನುಗ್ಗಿ ಮಗುವಿನ ಮೇಲೆ ದಾಳಿ ಮಾಡಿದ ಘಟನೆಯಿಂದ ದಿಗಿಲುಗೊಂಡಿದ್ದ ಗ್ರಾಮಸ್ಥರು, ಚಿರತೆ ಸೆರೆಯಿಂದ ನಿರಾಳರಾಗಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಿದ್ದು, ಮತ್ತಷ್ಟು ಚಿರತೆಗಳನ್ನು ಸೆರೆ ಹಿಡಿದು ಅವುಗಳ ಹಾವಳಿ ತಪ್ಪಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಘಟನೆ ನಡೆದ ದಿನ ಸ್ಥಳಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿ ಮೃತ ಮಗು ಹೇಮಂತ್ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದಿಂದ 7.5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ, ಅರಣ್ಯ ಅಧಿಕಾರಿಗಳಿಗೆ ಚಿರತೆ ಹಾವಳಿ ತಪ್ಪಿಸುವಂತೆ ತಾಕೀತು ಮಾಡಿದ್ದರು.
ಮಾಗಡಿ ತಾಲ್ಲೂಕಿನ ಕದರಯ್ಯನಪಾಳ್ಯದ ಗ್ರಾಮಸ್ಥರ ಒತ್ತಾಯ ಹಾಗೂ ಅರಣ್ಯ ಸಚಿವರ ಅದೇಶದಂತೆ ಗ್ರಾಮದ ಸುತ್ತಲೂ 10 ಕ್ಕೂ ಹೆಚ್ಚು ಬೋನ್ ಗಳನ್ನು ಅಳವಡಿಸಿದ್ದರು. ಕೊನೆಗೂ ನರಭಕ್ಷಕ ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.