ಶವಸಂಸ್ಕಾರಕ್ಕೆ ಅಡ್ಡಿಮಾಡಿದರೆ ಕಾನೂನು ಕ್ರಮ: ರಾಮನಗರ ಜಿಲ್ಲಾಧಿಕಾರಿ
ರಾಮನಗರ, ಜುಲೈ 21: ಕೋವಿಡ್-19 ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಅಡ್ಡಿಮಾಡದೆ ಮಾನವೀಯತೆಯಿಂದ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲು ಸಹಕರಿಸುವಂತೆ ರಾಮನಗರ ಜಿಲ್ಲೆಯ ಜನರಲ್ಲಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಮನವಿ ಮಾಡಿದ್ದಾರೆ.
Recommended Video
ಕೊರೊನಾ ವೈರಸ್ ರೋಗದಿಂದ ಮೃತಪಟ್ಟ ಯಾವುದೇ ಸಮುದಾಯದವರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು. ಅಂತಿಮ ವಿಧಿವಿಧಾನಗಳನ್ನು ಕುಟುಂಬಸ್ಥರ ಸಮ್ಮುಖದಲ್ಲೆ ಮತ್ತು ಇದಕ್ಕಾಗಿ ಜಿಲ್ಲಾಡಳಿತದ ವತಿಯಿಂದ ನೇಮಿಸಲಾಗಿರುವ ಅಧಿಕಾರಿಗಳ ಸಹಯೋಗದೊಂದಿಗೆ ನೆರವೇರಿಸಬೇಕು. ಮೃತ ವ್ಯಕ್ತಿಯ ಶವ ಸಂಸ್ಕಾರಕ್ಕೆ ಜಿಲ್ಲೆಯ ಜನತೆ ನೆರವಾಗುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ಚನ್ನಪಟ್ಟಣದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮಗು ಸಾವು
ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ನಡೆಸಲು ಸರ್ಕಾರ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ಸೋಂಕಿತ ಶವವನ್ನು ಸಂಪೂರ್ಣವಾಗಿ ಪ್ಯಾಕ್ ಮಾಡಿ ವೈರಸ್ ನಿವಾರಕ ದ್ರಾವಣದಲ್ಲಿ ಅದ್ದಿ ಸ್ಯಾನಿಟೈಸ್ ಮಾಡಿರುತ್ತಾರೆ. ಪ್ಯಾಕ್ ಮಾಡಿರುವ ಮೃತ ದೇಹವನ್ನು ಮತ್ತೆ ತೆರೆಯಲು ಸಾಧ್ಯವೇ ಇರುವುದಿಲ್ಲ. ಹೀಗಾಗಿ ಮೃತ ದೇಹದಿಂದ ಸೋಂಕು ಹರಡುವ ಸಾಧ್ಯತೆ ಇರುವುದಿಲ್ಲ ಎಂದರು.
ಮೃತ ದೇಹದ ಅಂತಿಮ ಶವಸಂಸ್ಕಾರವನ್ನು ವೈದ್ಯಕೀಯ ಶಿಷ್ಟಾಚಾರದಂತೆ ನೆರವೇರಿಸಬೇಕಾಗಿರುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕುಟುಂಬಸ್ಥರು ಶವಸಂಸ್ಕಾರದಲ್ಲಿ ಭಾಗವಹಿಸಬಹುದು. ಇದಕ್ಕಾಗಿ ಆರೋಗ್ಯ ಇಲಾಖೆ ನಿಗದಿಪಡಿಸಿರುವ ಮಾನದಂಡಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ರಾಮನಗರ: ಜುಲೈ 20 ರಿಂದ ಟೊಯೊಟಾ ಕಾರು ತಯಾರಿಕಾ ಕಂಪನಿ ಪುನರಾರಂಭ
ಸೋಂಕಿತ ಮೃತರ ಅಂತ್ಯ ಸಂಸ್ಕಾರ ನಡೆಸಿದರೆ ಇಲ್ಲವೆ ಶವವನ್ನು ಹೂಳಿದರೆ ಅದರಿಂದ ಸೋಂಕು ಹರಡುತ್ತದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಆರೋಗ್ಯ ಇಲಾಖೆಯು ಸೋಂಕಿತ ಶವವನ್ನು ಎಲ್ಲಾ ರೀತಿಯಿಂದಲೂ ಸೋಂಕು ಹರಡದಂತೆ ಸಂರಕ್ಷಿಸಿರುತ್ತಾರೆ.
ಹೀಗಾಗಿ ಜನರು ಭಯಪಡುವ ಅಗತ್ಯವಿಲ್ಲ. ಶವವನ್ನು ಸುಟ್ಟರೆ ಇಲ್ಲವೆ ಹೂತರೆ ಅದರಿಂದ ಸೋಂಕು ಹರಡುವುದಿಲ್ಲ, ಜನತೆಯು ಇದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ಜನರು ಶವಸಂಸ್ಕಾರಕ್ಕೆ ಅಡ್ಡಿಪಡಿಸದೆ ಸಹಕಾರ ನೀಡುವ ಮೂಲಕ ಅವರ ನೋವಿನ ಕ್ಷಣದಲ್ಲಿ ಭಾಗಿಯಾಗಬೇಕು. ಸಭ್ಯ ಶವಸಂಸ್ಕಾರಕ್ಕೆ ಅಡ್ಡಿ ಮಾಡುವ ಇಲ್ಲವೆ ಪ್ರತಿರೋಧ ತೋರುವವರ ಮೇಲೆ ಭಾರತೀಯ ದಂಡ ಸಂಹಿತೆಯ ನಿಬಂಧನೆಗಳಡಿ ದಂಡನಾತ್ಮಕವಾಗಿರುತ್ತದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಎಚ್ಚರಿಸಿದ್ದಾರೆ.