ಡಿಕೆಶಿಗೆ ಅಷ್ಟೊಂದು ಬಿಲ್ಡಪ್ ಕೊಡೋದ್ಯಾಕೆ?; ಅಶ್ವತ್ಥ ನಾರಾಯಣ್
ರಾಮನಗರ, ಅಕ್ಟೋಬರ್ 21: ಡಿ.ಕೆ.ಶಿವಕುಮಾರ್ ದೆಹಲಿ ಮನೆ ಮೇಲೆ ಸಿಬಿಐ ದಾಳಿ ವಿಚಾರವಾಗಿ ರಾಮನಗರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಡಿಕೆಶಿಗೆ ಟಾಂಗ್ ನೀಡಿದ್ದಾರೆ.
ರಾಮನಗರದಲ್ಲಿ ಅಧಿಕಾರಿಗಳ ಸಭೆಯ ನಂತರ ಮಾತನಾಡಿದ ಅವರು, "ಡಿಕೆ ಶಿವಕುಮಾರ್ ಬಂಧನದ ಹಿಂದೆ ಬೇರೆ ಏನೂ ಇಲ್ಲ. ಕಾನೂನು ವ್ಯವಸ್ಥೆ ಪಾಲನೆಯಾಗುತ್ತಿದೆ ಅಷ್ಟೇ. ಇದು ಯಾರ ವಿರುದ್ಧವೂ ನಡೆಯುತ್ತಿರುವ ಕ್ರಮ ಅಲ್ಲ, ಸಮಾಜದಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ನಾವು ಚಿಂತಿಸಬಾರದು. ಉತ್ತಮ ಸಮಾಜ ಕಟ್ಟುವುದಕ್ಕೆ ಮುಂದಾಗಬೇಕು" ಎಂದಿದ್ದಾರೆ.
ರಾಮನಗರ; ಅತ್ತ ಡಿಸಿಎಂ ಸಭೆ, ಇತ್ತ ಅಧಿಕಾರಿಗಳ ಮೊಬೈಲ್ ಆಟ
"ನನ್ನಂತಹವರು ನೂರು ಜನ ಬರ್ತಾರೆ, ಹೋಗ್ತಾರೆ, ಆದರೆ ಉತ್ತಮ ಸಮಾಜ ಕಟ್ಟಿದರೆ ನ್ಯಾಯ ಉಳಿಯುತ್ತದೆ. ಯಾರ್ಯಾರ ಶಕ್ತಿ ಏನೆಂದು ಜನರಿಗೆ ಗೊತ್ತಿದೆ. ನಾವು ಒಬ್ಬರಿಗೆ ಅಷ್ಟೋಂದು ಬಿಲ್ಡಪ್ ಕೊಡೋದು ಬೇಕಿಲ್ಲ. ನನ್ನ ತಮ್ಮನ ಮೇಲೂ 10 ಬಾರಿ ಐಟಿ ದಾಳಿ ನಡೆದಿತ್ತು. ಅದನ್ನು ಕಾನೂನು ದುರ್ಬಳಕೆ ಅನ್ನೋಕಾಗುತ್ತ?" ಎಂದು ಪ್ರಶ್ನಿಸಿದರು.
"ಮುಂದಿನ ದಿನಗಳಲ್ಲಿ ಎಲ್ಲಾ ಚುನಾವಣೆಯಲ್ಲೂ ಬಿಜೆಪಿಯೇ ಗೆಲ್ಲಲಿದೆ. ಎಲ್ಲದರಲ್ಲೂ ಬಿಜೆಪಿಯೇ ಅಧಿಕಾರ ನಡೆಸಲಿದೆ. ಬಿಜೆಪಿ ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು" ಎಂದು ಆಹ್ವಾನ ನೀಡಿದರು.