ಮತ್ತೊಂದು "ಕನಗನಮರಡಿ ದುರಂತ" ನಡೆಯದೇ ಇರಲಿ; ಬೇಗ ತಡೆಗೋಡೆ ಬರಲಿ
ಚನ್ನಪಟ್ಟಣ, ಡಿಸೆಂಬರ್ 27: ಮಂಡ್ಯದ ಕನಗನಮರಡಿ ಬಳಿ ನಾಲೆಗೆ ಬಸ್ ಉರುಳಿ ಬಿದ್ದು ಸುಮಾರು 30 ಜನರು ಮೃತಪಟ್ಟ ಘಟನೆ ನಡೆದು ಹತ್ತಿರತ್ತಿರ ಒಂದು ವರ್ಷ ಸರಿದಿದೆ. ಇದಕ್ಕೂ ಮುನ್ನ ಹಲವು ಕಡೆಗಳಲ್ಲಿ ತಡೆ ಗೋಡೆಯಿಲ್ಲದ ಕೆರೆಗಳಿಗೆ ವಾಹನಗಳು ಬಿದ್ದು ಸಾವು ನೋವಿನ ದುರಂತಗಳು ಸಂಭವಿಸಿದ ಹಲವು ಉದಾಹರಣೆಗಳೂ ಇವೆ. ಆದರೂ ನಮ್ಮನ್ನು ಆಳುವವರೇನೂ ಇದರಿಂದ ಎಚ್ಚೆತ್ತಿರುವಂತೆ ಕಾಣುತ್ತಿಲ್ಲ.
ಇದಕ್ಕೆ ಉದಾಹರಣೆ ಚನ್ನಪಟ್ಟಣದ ರಸ್ತೆ. ತಡೆಗೋಡೆಯಿಲ್ಲದ ಇಲ್ಲಿನ ಕೆರೆಗಳು ವಾಹನ ಸವಾರರ ಬಲಿಗಾಗಿ ಕಾಯುತ್ತಿರುವಂತೆ ಕಾಣುತ್ತಿವೆ. ತಾಲ್ಲೂಕಿನ ಪ್ರಮುಖವಾದ ಮೂರು ದೊಡ್ಡ ಕೆರೆಗಳಾದ ತಿಟ್ಟಮಾರನಹಳ್ಳಿಯ ರಾಮಮ್ಮನಕೆರೆ, ಹೊಂಗನೂರು ಕೆರೆ, ಕೋಡಂಬಳ್ಳಿ ಕೆರೆ ನೀರಿನಿಂದ ತುಂಬಿಕೊಂಡಿವೆ.
30 ಮಂದಿ ಪ್ರಾಣ ಹೋಗಿದ್ದ ಕನಗನಮರಡಿ ನಾಲೆಯ ಕಂಡರೆ ಭಯವೋ ಭಯ
ಆದರೆ ಈ ಮೂರು ಕೆರೆಗಳಿಗೆ ತಡೆಗೋಡೆ ನಿರ್ಮಾಣ ಮಾಡದೆ ಗುತ್ತಿಗೆದಾರರು ರಸ್ತೆಗೆ ಡಾಂಬರು ಹಾಕಿ ಕೈ ತೊಳೆದುಕೊಂಡಿದ್ದಾರೆ. ಸರ್ಕಾರದ ಆದೇಶಕ್ಕೆ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಮತ್ತು ಗುತ್ತಿಗೆದಾರರು ಕವಡೆಕಾಸಿನ ಬೆಲೆ ನೀಡುತ್ತಿಲ್ಲ. ಸರ್ಕಾರ ದುರಂತ ನಡೆದಾಗ ಮಾತ್ರ ಎಚ್ಚೆತ್ತು ಎಲ್ಲಾ ಅಪಾಯಕಾರಿ ಕೆರೆಗಳಿಗೆ ತಡೆಗೋಡೆ ನಿರ್ಮಿಸುವಂತೆ ಕಟ್ಟುನಿಟ್ಟಿನ ಆದೇಶ ಮಾಡುತ್ತದೆ. ನಂತರ ಆ ಆದೇಶ ನಿದ್ರೆಗೆ ಜಾರುತ್ತದೆ. ಮತ್ತೆ ಯಾವುದಾದರು ದುರಂತ ನಡೆದಾಗಷ್ಟೇ ಸರ್ಕಾರ ಮತ್ತು ಅದರ ಆದೇಶ ಎಚ್ಚರಗೊಳ್ಳುವುದು ಎಂದು ದೂರುತ್ತಿದ್ದಾರೆ ಜನರು.
ಇನ್ನು ಕುಣಿಗಲ್ ತಾಲ್ಲೂಕು ಸಂಪರ್ಕಿಸುವ ರಾಮಮ್ಮನ ಕೆರೆಯಲ್ಲಿ ಹತ್ತು ವರ್ಷಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕನಕಪುರ ಹಾಗೂ ಮಳವಳ್ಳಿ ತಾಲ್ಲೂಕು ಸಂಪರ್ಕಿಸುವ ರಾಜ್ಯ ಹೆದ್ದಾರಿ ಇರುವ ಹೊಂಗನೂರು ಕೆರೆ ಏರಿ ರಸ್ತೆ ಮತ್ತೂ ಅಪಾಯ ಒಡ್ಡುವಂತಿದೆ. ಈ ಕೆರೆ ಏರಿಯ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಒಂದು ಕಡೆ ಕೆರೆಯಲ್ಲಿ ತುಂಬಿರುವ ನೀರು, ಮತ್ತೊಂದು ಕಡೆ 30 ಅಡಿಗೂ ಹೆಚ್ಚು ಆಳದಲ್ಲಿರುವ ಕೃಷಿಭೂಮಿ. ಎರಡರ ನಡುವೆ ರಸ್ತೆಯಿರುವುದು ಅಪಾಯವನ್ನು ಆಹ್ವಾನಿಸುವಂತಿದೆ.
ಹಾಗಾಗಿ ಈ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಮತ್ತೊಂದು ದುರಂತ ನಡೆಯುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ.