ಡಿಕೆಶಿ, ಎಚ್ಡಿಕೆ ರಾಜಕೀಯವಾಗಿ ಸಮಾನ ಶತ್ರುಗಳು; ಯೋಗೇಶ್ವರ್
ರಾಮನಗರ, ಫೆಬ್ರವರಿ 23; "ರಾಮನಗರ ಜಿಲ್ಲೆಯಲ್ಲಿ ಡಿ. ಕೆ. ಶಿವಕುಮಾರ್ ಮತ್ತು ಎಚ್. ಡಿ. ಕುಮಾರಸ್ವಾಮಿ ರಾಜಕೀಯವಾಗಿ ನನಗೆ ಸಮಾನ ಶತ್ರುಗಳು. ಯಾರೊಂದಿಗೂ ನಾನು ಯಾವುದೇ ಮಾತುಕತೆ ನಡೆಸಿಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಸ್ಪಷ್ಟಪಡಿಸಿದರು.
ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ರಾಮನಗರದಲ್ಲಿ ಬುಧವಾರ ಹಿಂದೂ ಜಾಗರಣಾ ವೇದಿಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. "ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ನಿರಂತರವಾಗಿ ರಾಜಕೀಯವಾಗಿ ಇಬ್ಬರು ಪ್ರಭಾವಿಗಳೊಂದಿಗೆ ಹೋರಾಟ ನಡೆಸಿದ್ದೇನೆ" ಎಂದರು.
"ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಇಬ್ಬರು ನಾಯಕರ ವಿರುದ್ಧ ಹೋರಾಟ ನಡೆಸಿದ್ದೇನೆ. ಇಬ್ಬರು ನನಗೆ ಸಮಾನ ಶತ್ರುಗಳು ಹಾಗಾಗಿ ಕುಮಾರಸ್ವಾಮಿಯವರಿಗೂ ನನಗೂ ಯಾವುದೇ ಮಾತುಕತೆ ನಡೆದಿಲ್ಲ, ಮುಂದೆಯೂ ನಡೆಯುವುದಿಲ್ಲ" ಎಂದು ತಿಳಿಸಿದರು.
ಡಿಕೆಶಿ, ಎಚ್ಡಿಕೆಗೆ ಟಾಂಗ್ ನೀಡುವ ಸುಳಿವು ನೀಡಿದ ಸಚಿವ ಸಿಪಿ ಯೋಗೇಶ್ವರ್
ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರು ಬಿಜೆಪಿ ಸೇರುತ್ತಿರುವ ಬಗ್ಗೆ ಮಾತನಾಡಿದ ಯೋಗೇಶ್ವರ್, "ಚನ್ನಪಟ್ಟಣದಲ್ಲಿ ನಾನು ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ಪಕ್ಷಾಂತರದ ವಿಚಾರದಲ್ಲಿ ಆಪರೇಷನ್ ಕಮಲವೆಂದು ಬಿಂಬಿಸಬೇಡಿ" ಎಂದು ಮನವಿ ಮಾಡಿದರು.
ಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಗೆ; ಫಲಿಸಲಿಲ್ಲ ಸಿಪಿವೈ ಯೋಜನೆ
"ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕ್ಷೇತ್ರದ ಮೇಲಿನ ಉದಾಸೀನತೆ ಅವರ ಆಡಳಿತ ವೈಫಲ್ಯದಿಂದ ಬೇಸತ್ತು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಅಲ್ಲದೇ ಕ್ಷೇತ್ರದ ಜನರಲ್ಲಿ ಕುಮಾರಸ್ವಾಮಿ ಮೇಲೆ ಹತಾಶ ಮನೋಭಾವ ಬೆಳೆದಿದೆ" ಎಂದರು.
ಕುಮಾರಸ್ವಾಮಿ ಆ ಹೇಳಿಕೆ ಸಿ. ಪಿ. ಯೋಗೇಶ್ವರ್ಗೆ ಲಾಭವಾಗುತ್ತಾ?
"ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 14 ತಿಂಗಳು ಕ್ಷೇತ್ರಕ್ಕೆ ರಾಜಕೀಯ ಸ್ಥಾನ ಮಾನ ನೀಡಿಲ್ಲ. ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರು ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆ ಮೂಲಕ ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ" ಎಂದು ಸಿ. ಪಿ. ಯೋಗೇಶ್ವರ್ ಆರೋಪಿಸಿದರು.
"ಬಹುಶಃ ನನ್ನ ಆರೋಪವನ್ನು ಅವರು ಒಪ್ಪಿಕೊಳ್ಳುತ್ತಾರೆ. ಅವರ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಿಂದ ಜನರು ಬೇಸತ್ತು ಹೋಗಿದ್ದಾರೆ. 3-4 ಮಂದಿ ಕಂಟ್ರಾಕ್ಟರ್ ಮೂಲಕ ತಾಲ್ಲೂಕಿನ ಆಡಳಿತ ನಡೆಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದು ಚುನಾವಣಾ ಸಂದರ್ಭ ಅಲ್ಲ ಹಾಗಾಗಿ ಹಣ ಕೊಟ್ಟು ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುತ್ತಿಲ್ಲ. ಅವರ ಪಕ್ಷದಲ್ಲೇ ಬೇಸತ್ತು ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಬರುತ್ತಿದ್ದಾರೆ" ಎಂದು ಸ್ಪಷ್ಟಪಡಿಸಿದರು.
"ಇತ್ತೀಚಿಗೆ ಕುಮಾರಸ್ವಾಮಿ ಮುಂಜಾನೆ ಎದ್ದು ತಾಲ್ಲೂಕಿನ ತಿಥಿ, ಮದುವೆಗಳಿಗೆ ಬರುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಕುಮಾರಸ್ವಾಮಿ ಎಲ್ಲಿ ಹೋಗಿದ್ದರು?. ನಾನು ಕ್ಷೇತ್ರ ಪ್ರವಾಸ ಕೈಗೊಂಡ ಮೇಲೆ ಕುಮಾರಸ್ವಾಮಿ ಸಕ್ರಿಯರಾಗಿದ್ದಾರೆ. ನಾನು ಕುಮಾರಸ್ವಾಮಿಯನ್ನು ವೈಯಕ್ತಿವಾಗಿ ಟೀಕೆ ಮಾಡುವುದಿಲ್ಲ, ಅವರೇ ಆತ್ಮ ವಿಮರ್ಶೆ ಮಾಡಿಕೊಳ್ಳಲಿ" ಎಂದರು.
"ನನ್ನನ್ನ ರಾಜಕೀಯವಾಗಿ ಬೆಳೆಸಿದ ಕ್ಷೇತ್ರದಲ್ಲಿ, ಪಕ್ಷ ಸಂಘಟನೆಗೆ ಯಾವ ಸಚಿವ ಸ್ಥಾನವು ಬೇಡ. ಕೇವಲ ಪಕ್ಷ ಸಂಘಟನೆ ಮಾಡುವತ್ತ ಗಮನ ಹರಿಸುತ್ತೇನೆ. ನನ್ನ ಇತಿಮಿತಿಯಲ್ಲಿ ಎಲ್ಲೆಲ್ಲಿ ಪಕ್ಷ ಸಂಘಟನೆ ಮಾಡಬಹುದು ಅಂತಹ ಕಡೆ ಸಂಘಟನೆ ಮಾಡುತ್ತೇನೆ" ಎಂದು ಸಿ. ಪಿ. ಯೋಗೇಶ್ವರ್ ಹೇಳಿದರು.