KSRTC ಚಾಲಕನಿಗೆ ಕೊರೊನಾ: ಡಿಪೋ, ಕುಟುಂಬಕ್ಕೆ ಹೆಚ್ಚಿದ ಆತಂಕ
ರಾಮನಗರ, ಮೇ 26: ಮಾಗಡಿ ಕೆಎಸ್ ಆರ್ ಟಿಸಿ ಡಿಪೋ ಚಾಲಕನಿಗೆ ಕೊರೊನಾ ವೈರಸ್ ದೃಢಪಟ್ಟಿದ್ದು, ಡಿಪೋ ಹಾಗೂ ಕುಟುಂಬ ಸದಸ್ಯರಲ್ಲಿ ಆತಂಕ ಹೆಚ್ಚಿದೆ.
ಚಾಲಕನ ಜೊತೆ ಸಂಪರ್ಕದಲ್ಲಿದ್ದ ಡಿಪೋ ಸದಸ್ಯರಿಗೆ, ಕುಟುಂಬದ ಸದಸ್ಯರಿಗೆ ಕೊರೊನಾ ತಗುಲಿರಬಹುದಾ ಎಂಬ ಅನುಮಾನ ಕಾಡ್ತಿದೆ. ಹಾಗಾಗಿ, ಕೆಎಸ್ ಆರ್ ಟಿಸಿ ನಿಗಮದಿಂದ ಟೆಸ್ಟ್ ಮಾಡುವಂತೆ ಒತ್ತಾಯ ಮಾಡಲಾಗಿದೆ.
ಕರ್ಫ್ಯೂ ಬಳಿಕ ಬಸ್ ಸಂಚಾರ ಆರಂಭ; 82,127 ಜನರ ಪ್ರಯಾಣ
ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಡ್ರೈವರ್ ಜತೆ ಪ್ರಯಾಣಿಸಿದವರನ್ನು, ಡಿಪೋ ಸದಸ್ಯರನ್ನು ಹಾಗೂ ಕುಟುಂಬದವರನ್ನು ಟೆಸ್ಟ್ ಮಾಡಲು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ರೆಡ್ ಮತ್ತು ಕಂಟೋನ್ಮೆಂಟ್ ಝೋನ್ ಇಂದ ಬಂದು ಕೆಲಸ ಮಾಡುತ್ತಿರುವವರಿಗೂ ಹಾಗೂ ಅವರ ಸಂಪರ್ಕದಲ್ಲಿ ಇರೋರಿಗೆ ಟೆಸ್ಟ್ ಮಾಡಿಸುತ್ತೇವೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣ ಮಾಡಲು ಅಗತ್ಯ ಕ್ರಮ ಕೈಗೊಂಡಿದ್ದೇವೆ. ಟೆಸ್ಟ್ ಮಾಡಿಸಲು ಇಲಾಖೆ ಎಲ್ಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ. ಕೆಎಸ್ ಆರ್ ಟಿಸಿ ಸಿಬ್ಬಂದಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸೂಚಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗುವುದಕ್ಕೂ ಮೊದಲೇ ಚಾಲಕನಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಆದರೆ, ವರದಿ ಬರುವ ಮುಂಚೆಯೇ ಆತನಿಗೆ ಡ್ಯೂಟಿ ನೀಡಲಾಗಿದೆ. ಈ ಎಡವಟ್ಟಿನಿಂದ ಈಗ ಕಂಟಕ ಎದುರಾಗಿದೆ. ತುಮಕೂರು, ಮಾಗಡಿ ಮಾರ್ಗವಾಗಿ ಬೆಂಗಳೂರಿಗೆ ಮೂರು ದಿನ ಕರ್ತವ್ಯ ನಿರ್ವಹಿಸಿದ್ದರು. ಡಿಪೋ ಸಿಬ್ಬಂದಿ ಜೊತೆ ಊಟ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ, ಚಾಲಕ ಸುತ್ತಾಡಿದ್ದ ಎಲ್ಲವೂ ಸ್ಥಳ ಹಾಗೂ ಆತನ ಸಂಪರ್ಕದಲ್ಲಿದ್ದ ಎಲ್ಲರ ಮೇಲೂ ನಿಗಾ ಇಡಲಾಗಿದೆ.