ಕನಕಪುರದ ಈ ಮನೆಯ ಆವರಣವೇ ಪಕ್ಷಿಗಳ ಆಶ್ರಯ ಕೇಂದ್ರ!
ರಾಮನಗರ, ನವೆಂಬರ್ 16; ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಸುತ್ತಮುತ್ತ ಬದುಕು ಕಟ್ಟಿಕೊಂಡಿದ್ದ ಪಕ್ಷಿ ಸಂಕುಲ ನಶಿಸುತ್ತಿದೆ. ಹಲವು ಅಪರೂಪದ ಪಕ್ಷಿಗಳು ನಾಪತ್ತೆಯಾಗುತ್ತಿವೆ. ಇದಕ್ಕೆ ಅವುಗಳ ಬಗ್ಗೆ ನಮ್ಮಲ್ಲಿರುವ ನಿರ್ಲಕ್ಷ್ಯವೂ ಕಾರಣ ಎಂದರೆ ತಪ್ಪಾಗಲಾರದು.
ಆದರೆ ನಮ್ಮ ನಡುವೆ ಹಲವು ಮಂದಿ ಪಕ್ಷಿ ಪ್ರೇಮಿಗಳಿದ್ದಾರೆ ಎನ್ನುವುದು ಅಷ್ಟೇ ಖುಷಿಯ ವಿಚಾರವಾಗಿದೆ. ಪಕ್ಷಿಗಳಿಗಾಗಿ ಕಾಳು, ನೀರು ನೀಡುವವರು ಒಂದೆಡೆಯಾದರೆ, ಮತ್ತೊಂದೆಡೆ ಪಕ್ಷಿಗಳನ್ನು ಹುಡುಕಿಕೊಂಡು ಕಾಡು ಮೇಡು ಅಲೆಯುವವರೂ ಇದ್ದಾರೆ.
ಪಕ್ಷಿ ಸಂಕುಲ ಉಳಿವಿಗಾಗಿ ಎರಡು ಎಕರೆ ಭೂಮಿ ತ್ಯಾಗ ಮಾಡಿದ ಬಂಟ್ವಾಳದ ಪಕ್ಷಿಪ್ರೇಮಿ ದಂಪತಿ
ಬಣ್ಣಬಣ್ಣದ ,ವಿವಿಧ ಆಕಾರ, ಚೆಲುವು, ಕೂಗುವ ಧ್ವನಿ ಹೀಗೆ ಎಲ್ಲದರಲ್ಲಿಯೂ ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿರುವ ಪಕ್ಷಿಗಳು ಕಣ್ಮನ ಸೆಳೆಯುತ್ತವೆ. ಮಲೆನಾಡಿನಲ್ಲಿ ಇರುವವರು ಹಲವು ರೀತಿಯ ಪಕ್ಷಿಗಳನ್ನು ಕಾಡು, ತೋಟಗಳಲ್ಲಿ ನೋಡಿರುತ್ತಾರೆ.
ರೈತ ಸ್ನೇಹಿ ಟಿಟ್ಟಿಬ ಪಕ್ಷಿ ಬಗ್ಗೆ ನಿಮಗೆಷ್ಟು ಗೊತ್ತು?
ಆದರೆ ಪಟ್ಟಣ ಪ್ರದೇಶದಲ್ಲಿ ಕೆಲವೇ ಕೆಲವು ಪಕ್ಷಿಗಳು ಮಾತ್ರ ಕಾಣಸಿಗುತ್ತವೆ. ಮನೆಯ ಮುಂದೆ ಹಣ್ಣಿನ ಮರಗಳಿದ್ದರೆ ಮಾತ್ರ ಕೆಲವೊಮ್ಮೆ ಅಪರೂಪದ ಪಕ್ಷಿಗಳು ಬರುತ್ತವೆ. ಹೀಗಾಗಿ ಕೆಲವು ಪಕ್ಷಿ ಪ್ರಿಯರು ಪಕ್ಷಿಗಳಿಗಾಗಿಯೇ ಪುಟ್ಟದಾದ ಕೈತೋಟವನ್ನು ಮನೆ ಮುಂದೆ ನಿರ್ಮಿಸಿ ಅಲ್ಲಿಗೆ ಬರುವ ಪಕ್ಷಿಗಳನ್ನು ನೋಡಿ ಖುಷಿ ಪಡುತ್ತಾರೆ.
ಬಂಡೀಪುರ; ಹುಲಿ ಜೊತೆ ಸಸ್ಯಾಹಾರಿ ಪ್ರಾಣಿಗಳ ಗಣತಿ
ಮನೆಯ ಅಂಗಳದಲ್ಲಿ ಪಕ್ಷಿಗಳಿಗೆ ಆಶ್ರಯ
ತಮ್ಮ ಒತ್ತಡದ ಬದುಕಿನಲ್ಲಿಯೂ ಒಂದಷ್ಟು ಸಮಯವನ್ನು ಪಕ್ಷಿಗಳಿಗೆ ಮೀಸಲಿಟ್ಟು ಅವುಗಳ ಸಂರಕ್ಷಣೆಯತ್ತ ಪಣತೊಟ್ಟವರು ನಮ್ಮ ನಿಮ್ಮ ನಡುವೆ ಹಲವರು ಇದ್ದಾರೆ. ಅಂತಹವರ ಪೈಕಿ ಕನಕಪುರದ ಮಳಗಾಳಿನ ಮರಸಪ್ಪ ರವಿ ಒಬ್ಬರಾಗಿದ್ದಾರೆ. ರಾಜಕೀಯ, ಸಾಮಾಜಿಕ ಚಟುವಟಿಕೆ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆಯೂ ಪಕ್ಷಿಗಳಿಗೆ ಮನೆಯ ಅಂಗಳದಲ್ಲಿಯೇ ಆಶ್ರಯ ನೀಡಿರುವುದು ವಿಶೇಷವಾಗಿದೆ.
ಪಕ್ಷಿಗಳಿಗಾಗಿಯೇ ಕೈ ತೋಟ ನಿರ್ಮಾಣ
ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಮೇಳೆಕೋಟೆ ನಿವಾಸಿಯಾಗಿರುವ ಮರಸಪ್ಪ ರವಿ ಅವರು ಸದ್ಯ ಕನಕಪುರದ ಮಳಗಾಳುವಿನಲ್ಲಿ ವಾಸವಿದ್ದಾರೆ. ಇವರು ತಮ್ಮೆಲ್ಲ ಕೆಲಸಗಳ ನಡುವೆ ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗಾಗಿ ಶ್ರಮಿಸುತ್ತಿರುವುದು ಮತ್ತೊಂದು ವಿಶೇಷ. ಹೀಗಾಗಿ ಪಕ್ಷಿಗಳಿಗಾಗಿಯೇ ಮನೆಯ ಎದುರು ನೂರಾರು ಗೂಡು ನಿರ್ಮಿಸಿಕೊಟ್ಟಿದ್ದಾರೆ. ಅವುಗಳಿಗೆ ಅಗತ್ಯವಿರುವ ಸಿರಿಧಾನ್ಯಗಳನ್ನು ಹಾಕಿ ಪೋಷಣೆ ಮಾಡುತ್ತಿದ್ದಾರೆ. ಪಕ್ಷಿಗಳಿಗೆ ಅನುಕೂಲವಾಗಲೆಂದೇ ಮಾವು, ಸೀಬೆ, ದಾಳಿಂಬೆ, ಅಂಜೂರ, ಸಪೋಟಾ, ಬೆಣ್ಣೆ ಹಣ್ಣು ಮೊದಲಾದ ಗಿಡಗಳನ್ನು ಬೆಳೆಸಿರುವುದನ್ನು ಕಾಣಬಹುದಾಗಿದೆ.
ಪಕ್ಷಿಗಳ ಚಿತ್ರ ಸೆರೆಹಿಡಿಯುವ ಹವ್ಯಾಸ
ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಸರ, ಪ್ರಾಣಿ-ಪಕ್ಷಿಗಳ ರಕ್ಷಣೆ ಉಪನ್ಯಾಸ ನೀಡಿ ಜನರಲ್ಲಿ ಪಕ್ಷಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ಪರಿಸರ ಕಾಳಜಿ ವಹಿಸಿ ಉಚಿತ ಗಿಡಗಳನ್ನು ವಿತರಿಸಿ ನೆಡುವಂತೆ ಮನವೊಲಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇನ್ನು ಕಾಡು ಮೇಡು ಅಲೆದು ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ತೆಗೆಯುವುದು ಇವರ ಮತ್ತೊಂದು ಹವ್ಯಾಸವಾಗಿದೆ.
ಪಕ್ಷಿಗಳ ಸಂತತಿ ಉಳಿಯುತ್ತದೆ
ಮರಸಪ್ಪ ರವಿ ಮನೆಗೆ ಹೋದರೆ ಪಕ್ಷಿಗಳ ಚಿಲಿಪಿಲಿ ಕಿವಿಗೆ ಇಂಪು ತರುವುದಲ್ಲದೆ ಇವರೊಬ್ಬ ಪಕ್ಷಿ ಪ್ರೇಮಿ ಎನ್ನುವುದನ್ನು ಸಾರಿ ಹೇಳುತ್ತದೆ. ಎಲ್ಲರೂ ಇದೇ ರೀತಿ ಪಕ್ಷಿಗಳ ಬಗ್ಗೆ ಆಸಕ್ತಿ ಹೊಂದಿ ಅವುಗಳತ್ತ ಗಮನಹರಿಸಿದ್ದೇ ಆದರೆ ಪಕ್ಷಿಗಳ ಸಂತತಿ ಉಳಿವಿಗೆ ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
Recommended Video
ಪಕ್ಷಿಗಳ ಬಗ್ಗೆ ಗಮನ ಅಗತ್ಯ
ಇತ್ತೀಚೆಗಿನ ದಿನಗಳಲ್ಲಿ ಯುವ ತಲೆ ಮಾರು ಪಕ್ಷಿಗಳತ್ತ ಆಸಕ್ತಿ ವಹಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಹೀಗಾಗಿ ಯಾವುದೇ ಪಕ್ಷಿಗಳನ್ನು ಕಂಡರೂ ಅವುಗಳ ರಕ್ಷಣೆಯತ್ತ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಮೊಬೈಲ್ ಟವರ್, ಅಪಾರ್ಟ್ ಮೆಂಟ್ ಗಳು ಮೊದಲಾದ ಬೃಹತ್ ಕಟ್ಟಡಗಳಿಗೆ ಹಾರುವಾಗ ಡಿಕ್ಕಿ ಹೊಡೆದು ಹಾಗೂ ಗಾಳಿ ಪಟಗಳ ದಾರಕ್ಕೆ ಸಿಕ್ಕಿಯೂ ಸಾಯುತ್ತಿವೆ. ಈ ಬಗ್ಗೆಯೂ ನಾವು ಗಮನಿಸಬೇಕಾದ ಅಗತ್ಯವಿದೆ.