ರಾಮನಗರ : ಕಿರಣ್ ಮಜುಂದಾರ್ ವಿರುದ್ಧ ಪ್ರತಿಭಟನೆ
ರಾಮನಗರ, ಜುಲೈ 10 : ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ವಿರುದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತತರು ರಾಮನಗರದಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಚನ್ನಪಟ್ಟಣದ ಗುರುವಪ್ಪ ವೃತ್ತದಲ್ಲಿ ನೂರಾರು ಕಾರ್ಯಕರ್ತರು ಪೊರಕೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ಕಿರಣ್ ಮಜುಂದಾರ್ ಟ್ವೀಟ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಕ್ರೋಶ
ಕಿರಣ್ ಮಜುಂದಾರ್ ಷಾ ಭಾವಚಿತ್ರಕ್ಕೆ ಪೊರಕೆ ಸೇವೆ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಪರ ಹೋರಾಟಗಾರರನ್ನು ಕಿಡಿಗೇಡಿಗಳು ಎಂದು ಟ್ವಿಟ್ ಮಾಡಿದ ಕಿರಣ್ ಮಜುಂದಾರ್ ಷಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಶಾಲೆಗಳನ್ನು ತೆರೆಯುವ ಕರ್ನಾಟಕ ಸರ್ಕಾರದ ಪ್ರಸ್ತಾವನೆ ಬಗ್ಗೆ ವಿರೋಧ ವ್ಯಕ್ತಪಡಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡಪರ ಹೋರಾಟಗಾರನ್ನು ಕಿಡಿಗೇಡಿಗಳು ಎಂದು ಕಿರಣ್ ಮಜುಂದಾರ್ ಟ್ವೀಟ್ ಮಾಡಿದ್ದರು.
ಕಿರಣ್ ಮಜುಂದಾರ್ ಷಾ ಅವರು ಕನ್ನಡ ಪರ ಹೋರಟಗಾರರು ಮತ್ತು ರಾಜ್ಯದ ಜನತೆಯಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ವೇದಿಕೆಯ ಕಾರ್ಯಕರ್ತರು ಒತ್ತಾಯಿಸಿದರು. ಒಂದು ವೇಳೆ ಕ್ಷಮೆ ಕೇಳದಿದ್ದರೆ ಮುಂದೆ ಉಗ್ರ ಪ್ರತಿಭಟನೆ ಮಡುವುದಾಗಿ ಎಚ್ಚರಿಕೆ ನೀಡಿದರು.