ಜನತಾ ಜಲಧಾರೆ ಕಾರ್ಯಕ್ರಮದ ಪರಿಣಾಮ ರಾಜ್ಯದಲ್ಲಿ ಉತ್ತಮ ಮಳೆ: ಎಚ್.ಡಿ.ಕುಮಾರಸ್ವಾಮಿ
ರಾಮನಗರ, ಆಗಸ್ಟ್ 5: ಜೆಡಿಎಸ್ನ ಪಂಚರತ್ನ ಯೋಜನೆಗಳಲ್ಲಿ ಒಂದಾದ ಜನತಾ ಜಲಧಾರೆ ಕಾರ್ಯಕ್ರಮದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ, ಎಲ್ಲಾ ಜಲಾಶಯಗಳು ತುಂಬಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನಪ್ಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಾಲ್ಲೂಕಿನ ಜೀವನಾಡಿಯಾಗಿರುವ ಕಣ್ವ ಜಲಾಶಯ 20 ವರ್ಷಗಳ ನಂತರ ತುಂಬಿರುವುದು ಸಂತಸ ತಂದಿದೆ. ಇದರೊಂದಿಗೆ ರಾಜ್ಯದ ಹಲವು ಜಲಾಶಯಗಳು ಕಳೆದ 25 ವರ್ಷಗಳಿಂದ ತುಂಬಿರದ ಹಲವು ಜಲಾಶಯ ಹಾಗೂ ಕೆರೆಗಳು ಇದೀಗ ತುಂಬಿ ಹರಿಯುತ್ತಿವೆ.
ಮೈತ್ರಿ ಸರಕಾರದ ವೇಳೆ ನನ್ನ ಕೈ ಎತ್ತಿ ಹಿಡಿದಿರಲಿಲ್ವಾ? ಕಾಂಗ್ರೆಸ್ ಒಗ್ಗಟ್ಟಿನ ಬಗ್ಗೆ ಎಚ್ಡಿಕೆ ವ್ಯಂಗ್ಯ
ಈ ನಾಡಿನ ನದಿಗಳು ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರಬಾರದು. ನದಿಗಳು ನೀರು ಕುಡಿಯುವ, ಹಾಗೂ ಕೃಷಿ ಚಟುವಟಿಕೆಗೆ ದೊರಕಬೇಕು ಎಂಬ ನಮ್ಮ ಬದ್ಧತೆ ಜನರಿಗೆ ಮುಟ್ಟಿಸಲು ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಪಕ್ಷದ ಮೂಲಕ ಚಾಲನೆ ನೀಡಿದ್ದವು. ಜಲಧಾರೆ ಕಾರ್ಯಕ್ರಮದ ಬಳಿಕ ನಾಡಿನ ಕೆರೆ ಕಟ್ಟೆ, ಜಲಾಶಯ ಭರ್ತಿಯಾಗಿವೆ ಎಂದು ರಸ್ತೆಯೂದ್ದಕ್ಕೂ ಜನರು ಹೇಳುತ್ತಿದ್ದಾರೆ. ಜನತಾ ಜಲಧಾರೆ ಒಂದು ಪರಿಶುದ್ಧ ಕಾರ್ಯಕ್ರಮ. ಎಲ್ಲೋ ಒಂದು ಕಡೆ ಈ ನಮ್ಮ ಪ್ರಾರ್ಥನೆ ಫಲಿಸಿದೆ ಎಂಬ ಸಾರ್ಥಕ ಭಾವ ಮೂಡಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರತಿ ಹನಿ ನೀರು ರೈತರಿಗೆ ಸಿಗಬೇಕು, ರಾಜ್ಯದ ಇಂದು ಹನಿ ನೀರು ವ್ಯರ್ಥವಾಗಲು ಬಿಡುವುದಿಲ್ಲ ಈ ನಿಟ್ಟಿನಲ್ಲಿ ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ ನೀರಾವರಿ ವಿಷಯದಲ್ಲಿ ಜೆಡಿಎಸ್ ಪಕ್ಷದ ಬದ್ಧತೆಯನ್ನು ಜನರ ಮುಂದೆಯಿಟ್ಟಿದ್ದೇನೆ. ಜನ ಬೆಂಬಲಿಸುತ್ತಾರೆ ಹಾಗೂ ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.
85 ಲಕ್ಷ ರೂಪಾಯಿ ಬಿಡುಗಡೆ
ಇವತ್ತು ಬಹುತೇಕ ಎಲ್ಲ ಕೆರೆಗಳು ತುಂಬಿದ್ದು, ಹಲವು ಕಡೆ ಕೆರೆಗಳು ಕೋಡಿ ಒಡೆದಿವೆ. ಕೆರೆ ತುಂಬಿರುವುದು ಒಂದು ಕಡೆ ಸಂತಸ ಮೂಡಿಸಿದ್ದರೆ, ಇನ್ನೊಂದೆಡೆ ಕೆಲವು ಕಡೆ ಸಾಕಷ್ಟು ಹಾನಿಯಾಗಿರುವುದು ಬೇಸರ ಮೂಡಿಸಿದೆ. ಇನ್ನು ತಾಲೂಕಿನಲ್ಲಿ ಇದುವರೆಗೆ ಸಂಭವಿಸಿರುವ ಬೆಳೆಹಾನಿಗೆ ಪರಿಹಾರವಾಗಿ ಸುಮಾರು 85 ಲಕ್ಷ ರೂಪಾಯಿ ಹಣವನ್ನು ಸರಕಾರದಿಂದ ಬಿಡುಗಡೆ ಮಾಡಿಸಿರುವುದಾಗಿ ಮಾಜಿ ಸಿಎಂ ಹೇಳಿದರು.
ಸಿಪಿ ಯೋಗೀಶ್ವರ್ಗೆ ತಿರಿಗೇಟು
ಕುಮಾರಸ್ವಾಮಿ ಯವರಿಗೆ ನೀರಾವರಿ ಕಲ್ಪನೆಯಿಲ್ಲ ಎಂದು ಮಾಜಿ ಶಾಸಕ, ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೀಶ್ವರ್ ಹೇಳಿಕೆ ಪ್ರತಿಕ್ರಿಯೆ ನೀಡಿ, ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದವರು ನೀಡಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ. ತಾಲೂಕಿನ ಅಭಿವೃದ್ಧಿಗೆ ಯಾರ ಕಾಲದಲ್ಲಿ ಎಷ್ಟೆಷ್ಟು ಹಣ ಬಿಡುಗಡೆಯಾಗಿದೆ ಎಂಬ ದಾಖಲೆ ತೆಗೆದು ನೋಡಿದರೆ ಅವರಿಗೆ ಸತ್ಯದ ಅರಿವಾಗುತ್ತದೆ ಎಂದು ಯೋಗೀಶ್ವರ್ಗೆ ಟಾಂಗ್ ನೀಡಿದರು.
ಬ್ಯಾರೇಜ್ಗೆ ದೇವೇಗೌಡರ ಹೆಸರು
ರಸ್ತೆಯಲ್ಲಿ ನಾಲ್ಕು ಜನರನ್ನು ನಿಲ್ಲಿಸಿಕೊಂಡು ಈ ಕೆಲಸ ನಾನು ಮಾಡಿದೆ. ಆ ಕೆಲಸ ನಾನೇ ಮಾಡಿಸಿದೆ ಎಂದು ಹೇಳಿಕೊಳ್ಳುವ ಅವಶ್ಯಕತೆ ನನಗಿಲ್ಲ. ಅಭಿವೃದ್ದಿ ವಿಚಾರದಲ್ಲಿ ಯಾರ ಸರ್ಟಿಫಿಕೆಟ್ ಸಹ ನನಗೆ ಬೇಕಿಲ್ಲ. ತಾಲೂಕಿನಲ್ಲಿ ಆಗಿರುವ ನೀರಾವರಿ ಕ್ರಾಂತಿಗೆ ನಮ್ಮ ತಂದೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಕಾರಣ ಎಂದು ಸಿಪಿವೈ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಹರಿಹಾಯ್ದರು. ತಾಲೂಕಿನ ಜನ ಹೆಚ್.ಡಿ.ದೇವೇಗೌಡರನ್ನು ಸ್ಮರಿಸಿಕೊಂಡೆ ಬ್ಯಾರೇಜ್ಗೆ ಅವರ ಹೆಸರನ್ನು ಇಟ್ಟಿದ್ದಾರೆ. ಅಂದು ದೇವೇಗೌಡರು ದೂರದೃಷ್ಟಿ ಇಟ್ಟುಕೊಂಡು ಇಗ್ಗಲೂರು ಬ್ಯಾರೇಜ್ ನಿರ್ಮಿಸದಿದ್ದರೆ ಇಂದು ತಾಲೂಕಿನ ರೈತರ ಬದುಕು ಏನಾಗುತ್ತಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಇದನ್ನು ಅರಿತಿರುವ ತಾಲೂಕಿನ ಜನತೆಯೇ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.
ಕಣ್ವ ಜಲಾಶಯವನ್ನು ಪ್ರವಾಸಿ ತಾಣವಾಗಿಸಲು ಕ್ರಮ
ಇನ್ನೂ ಕಣ್ವ ಜಲಾಶಯವನ್ನು ಪ್ರವಾಸಿ ತಾಣವಾಗಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ 10 ಕೋಟಿ ರೂಪಾಯಿ ಅನುದಾನ ನಿಗಧಿಪಡಿಸಲಾಗಿದೆ. ಕಣ್ವ ಜಲಾಶಯವನ್ನು ಅಭಿವೃದ್ಧಿ ಪಡಿಸಲು ನೀಲನಕ್ಷೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ. ಜಲಾಶಯವನ್ನು ಪ್ರವಾಸಿ ತಾಣವಾಗಿಸುವ ಜೊತೆಗೆ ಇಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಠಿಸುವ ಯೋಜನೆ ಇದೆ ಎಂದು ತಮ್ಮ ಕಲ್ಪನೆಯನ್ನು ಮಾಜಿ ಸಿಎಂ ಎಚ್ಡಿಕೆ ತೆರೆದಿಟ್ಟರು.
Recommended Video