ಕಾಂಗ್ರೆಸ್ ಹಾಗೂ ಸರ್ಕಾರದ ಜಟಾಪಟಿ ಪಾದಯಾತ್ರೆ 2ನೇ ದಿನಕ್ಕೆ
ರಾಮನಗರ, ಜನವರಿ 10; ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ 'ನಮ್ಮ ನೀರು ನಮ್ಮ ಹಕ್ಕು' ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನದ ರೀತಿಯಲ್ಲೇ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ಎರಡನೇ ದಿನ ಪಾದಯಾತ್ರೆ ಡಿ. ಕೆ. ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿ ಪ್ರಾರಂಭವಾಯಿತು.
ಸರ್ಕಾರಕ್ಕೆ ಸವಾಲು ಎಸೆದು ಪ್ರಾರಂಭವಾದ ಮೇಕೆದಾಟು ಪಾದಯಾತ್ರೆ ಸಂಗಮದಿಂದ ಪ್ರಾರಂಭವಾಗಿ 15 ಕಿ. ಮೀ. ಕ್ರಮಿಸಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿಗೆ ಸೋಮವಾರ ತಲುಪಿತ್ತು, ನಾಯಕರು ಅಲ್ಲಿಯೇ ವಾಸ್ತವ್ಯಹೂಡಿದ್ದರು.
ಮೇಕೆದಾಟು ಪಾದಯಾತ್ರೆ: ಡಿಕೆಶಿ ಸೇರಿ 30 ಮಂದಿ ವಿರುದ್ಧ ಸಾತನೂರು ಠಾಣೆಯಲ್ಲಿ ಎಫ್ಐಆರ್
ಪಾದಯಾತ್ರೆ ದೊಡ್ಡಾಲಹಳ್ಳಿ ತಲುಪುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದರು. ಊರಿನ ತುಂಬಾ ಮೆರವಣಿಗೆ ಮಾಡಿದರು. ದೊಡ್ಡಾಲಹಳ್ಳಿ ಗ್ರಾಮದ ತಮ್ಮ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಡಿ. ಕೆ. ಶಿವಕುಮಾರ್ ಎರಡನೇ ದಿನದ ಪಾದಯಾತ್ರೆ ಪ್ರಾರಂಭಿಸಿದರು. ಪಾದಯಾತ್ರೆಗೆ ಬೆಂಬಲ ನೀಡಲು ಚಾಮರಾಜನಗರ ಹಾಗೂ ಕೊಡಗು ಕಾಂಗ್ರೆಸ್ ಕಾರ್ಯಕರ್ತರು ಡಿ. ಕೆ. ಶಿವಕುಮಾರ್ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ.
ಮೇಕೆದಾಟು ಪಾದಯಾತ್ರೆ ಆರಂಭ; ಕೋವಿಡ್ ನಿಯಮಗಳು ಗಾಳಿಗೆ
ಖಾಸಗಿ ಬಸ್ಗಳ ಮುಖಾಂತರ ಡಿ. ಕೆ. ಶಿವಕುಮಾರ್ ಸ್ವಗ್ರಾಮ ದೊಡ್ಡಾಲಹಳ್ಳಿ ಗ್ರಾಮಕ್ಕೆ ಬಂದಿರುವ ಚಾಮರಾಜನಗರ ಮತ್ತು ಕೊಡಗು ಎರಡು ಜಿಲ್ಲೆಯ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ.
Breaking; ಡಿಕೆಶಿ ಅವಾಜ್ ಹಾಕಿದ್ದ ಅಧಿಕಾರಿಗೆ ಕೋವಿಡ್ ಸೋಂಕು!
ಡಿ. ಕೆ. ಶಿವಕುಮಾರ್ ಹೇಳಿಕೆ; ಪಾದಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಪಾದಯಾತ್ರೆ ಮಾಡಬಾರದು ಎಂದು ನೋಟೀಸ್ ನೀಡಿದ್ದು ನಿಜ. ಅದು ಕಾನೂನು ಬದ್ಧ ನೋಟಿಸ್ ಅಲ್ಲ. ಸೆಕ್ಷನ್ 144 ಅನ್ನು ಯಾವ ರೀತಿ ಜಾರಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಮ್ಮ ಪಾದಯಾತ್ರೆ ನಿಲ್ಲಿಸಲು ಸರ್ಕಾರ ಷಡ್ಯಂತ್ರ ಮಾಡಿದೆ" ಎಂದು ದೂರಿದರು.
Koo Appಇಂದು ದೊಡ್ಡಾಲಹಳ್ಳಿಯಿಂದ ಆರಂಭವಾದ 2ನೇ ದಿನದ ಐತಿಹಾಸಿಕ ”ಮೇಕೆದಾಟು ಪಾದಯಾತ್ರೆ”ಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ @dkshivakumar_official ಅವರೊಂದಿಗೆ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಹೆಜ್ಜೆ ಹಾಕಿದರು. ಅಪಾರ ಜನಸಮೂಹ ಉತ್ಸಾದಿಂದ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು. #NammaNeeruNammaHakku - ಕರ್ನಾಟಕ ಕಾಂಗ್ರೆಸ್ (@inckarnataka) 10 Jan 2022
"ಪಾದಯಾತ್ರೆಗೆ ಯಾರೆಲ್ಲ ಬಂದಿದ್ದಾರೋ ಅವರ ವೋಟರ್ ಐಡಿ ನೀಡುತ್ತೇನೆ. ವಿಡಿಯೋ ಕಳುಹಿಸಿಕೊಡುತ್ತೇನೆ. ಕೇವಲ ರಾಮನಗರ ಮಾತ್ರವಲ್ಲ, ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಓಡಾಡಿರುವ ವಿಡಿಯೋ ಕೂಡ ಕೊಡುತ್ತೇನೆ. ಅವರ ಮೇಲೂ ಪ್ರಕರಣ ದಾಖಲಿಸಲಿ" ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಪಾದಯಾತ್ರೆಗೆ ಮೂದಲು ಕಾವೇರಿಗೆ ಪೂಜೆ ಮಾಡುವ ಸಮಯದಲ್ಲಿ ಕಾಲು ಜಾರಿದ ಬಗ್ಗೆ ಬಿಜೆಪಿಗರ ಲೇವಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, "ನಾನು ಕೂತರು, ನಿಂತರು, ಮಲಗಿದರೂ ಬಿಜೆಪಿಯವರಿಗೆ ಖುಷಿ. ನನ್ನ ಬಗ್ಗೆ ಮಾತನಾಡದಿದ್ದರೆ ಅಶ್ವಥ್ ನಾರಾಯಣ್ ಹೇಳಿರುವಂತೆ ಶಕ್ತಿ ಬರುವುದಿಲ್ಲವಂತೆ. ಹೀಗಾಗಿ ಅವರು ನನ್ನ ವಿಚಾರದ ಬಗ್ಗೆ ಮಾತನಾಡುತ್ತಾರೆ" ಎಂದು ಲೇವಡಿ ಮಾಡಿದರು.
"ಭಾನುವಾರ ಮಧ್ಯಾಹ್ನ ಡಿಎಚ್ಓ ಹಾಗೂ ಎಸಿ ನೇತೃತ್ವದಲ್ಲಿ ವೈದ್ಯರ ತಂಡ ನನ್ನ ಪರೀಕ್ಷೆ ಮಾಡಬೇಕು ಎಂದು ಬಂದಿದ್ದರು. ಪರೀಕ್ಷೆ ಮಾಡಿ ಪಾಸಿಟಿವ್ ಇದೆ ಅಂತಾ ಹೇಳಲು ಬಂದಿದ್ದಾರೆ. ಕೋವಿಡ್ ಬಂದಿದೆ ಎಂದು ಪಾದಯಾತ್ರೆ ತಡೆಯಲು ಸರ್ಕಾರ ಹುನ್ನಾರ ನಡೆಸಿದೆ. ಈ ಬಗ್ಗೆ ಆರೋಗ್ಯ ಇಲಾಖೆಯವರು, ಪೋಲಿಸ್ ಇಲಾಖೆಯವರು ನನಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಮಂತ್ರಿಗಳು ನನಗೆ ಮಾಹಿತಿ ನೀಡಿದ್ದಾರೆ ಸರ್ಕಾರ ನನ್ನನೂ ಕಟ್ಟಿ ಹಾಕಲು ವೈದ್ಯರಿಂದ ಕೋವಿಡ್ ಇದೆ ಎಂದು ಹೇಳಿಸಲು ಮುಂದಾಗಿದೆ" ಎಂದು ಡಿ. ಡಿ. ಕೆ. ಶಿವಕುಮಾರ್ ಆರೋಪಿಸಿದರು.
"ರಾಮನಗರ ಡಿಸಿ, ಸಿಇಒಗೆ ಕೋವಿಡ್ ಸೋಂಕು ಬಂದಿದೆ. ಅವರ ಪಕ್ಕದಲ್ಲಿದ್ದ ಸಿಎಂಗೂ ಏನಾದರೂ ಕೋವಿಡ್ ಬಂದಿದೆಯೇ?. ನನಗೆ ಸೋಂಕಿನ ಲಕ್ಷಣಗಳಿವೆಯೇ? ನಾನು ಫಿಟ್ ಆಗಿದ್ದು, 15 ದಿನದಿಂದ ನಡೆಯುತ್ತಿದ್ದೇನೆ. ಬನ್ನಿ ನನ್ನ ಜತೆ ನೋಡಿ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.
Recommended Video
"ಇಲ್ಲಿ ನೂರಾರು ವೈದ್ಯರು ಇದ್ದಾರೆ. ನಮಗೆ ತೊಂದರೆ ಕೊಡುವ ಆಸೆ ನಿಮಗಿದ್ದರೆ ಕೊಡಿ. ಆದರೆ ಜನರಿಗೆ ಯಾಕೆ ತೊಂದರೆ ಏಕೆ ನೀಡುತ್ತೀರಿ?. ಕೋವಿಡ್ ನಿಯಮ ಹಾಕಿ, ಆದರೆ ಕರ್ಫ್ಯೂ ತೆಗೆಯಿರಿ, ಜನರ ವ್ಯಾಪಾರ ಏನಾಗಬೇಕು? ಕೆಎಸ್ಆರ್ಟಿಸಿ ಪರಿಸ್ಥಿತಿ ಏನಾಗಬೇಕು?. ನಿನ್ನೆ ರಾತ್ರಿ ಕರ್ಫ್ಯೂ ಎಲ್ಲಿತ್ತು?, ಜನ ಓಡಾಡುತ್ತಿದ್ದರಲ್ಲ. ನಿಮ್ಮ ಪಕ್ಷದವರು ಕಾನೂನು ಉಲ್ಲಂಘಿಸಿದಾಗ ಯಾವ ಕ್ರಮ ಕೈಗೊಂಡಿದ್ದೀರಿ?"ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
ಪಾದಯಾತ್ರೆಯಿಂದ ಕೋವಿಡ್ ಹೆಚ್ಚಳ; ಪಾದಯಾತ್ರೆ ಬಗ್ಗೆ ಸಚಿವರ ಟೀಕೆ, ಕೋವಿಡ್ ಹೆಚ್ಚಳವಾದರೆ ಕಾಂಗ್ರೆಸ್ ಕಾರಣ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್, "ಅವರ ಉದ್ದೇಶವೇ ನಮ್ಮ ಮೇಲೆ ಗೂಬೆ ಕೂರಿಸುವುದು. ಅವರು ಲಂಚ ಹೊಡೆದಿದ್ದನ್ನು ಯಾರೂ ಮರೆತಿಲ್ಲ. 10 ಸಾವಿರ ಬೆಡ್ ತಂದು, ಔಷಧಿ, ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಎಷ್ಟು ದುಡ್ಡು ಹೊಡೆದಿದ್ದಾರೆ?" ಎಂದು ಕೇಳಿದರು.
"ಹೆಣದ ಮೇಲೆ ಹಣ ಮಾಡಿದರಲ್ಲಾ ಅದು ಲೆಕ್ಕಕ್ಕೆ ಇಲ್ಲವೇ?. 4 ಲಕ್ಷ ಜನ ಸತ್ತಾಗ ಕೇವಲ 40 ಸಾವಿರ ಜನ ಸತ್ತಿದ್ದಾರೆ ಎಂದು ಹೇಳಿದರಲ್ಲ, ಸದನದಲ್ಲಿ ಗಲಾಟೆ ಮಾಡಿದಾಗ, ಕೆಲವರಿಗೆ 1 ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಈ ಮೊದಲು ನಾವೇ ನಿಯಂತ್ರಣ ಮಾಡಿದ್ದೇವೆ ಎಂದರಲ್ಲ, ಮಾಡಲಿ. ಬೋಗಸ್ ನಂಬರ್ ಕೊಟ್ಟು ಜನರಿಗೆ ತೊಂದರೆ ಯಾಕೆ ಕೊಡುತ್ತೀರಾ?" ಎಂದು ಡಿ. ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.