Breaking; ಮೇಕೆದಾಟು ಪಾದಯಾತ್ರೆ ಸ್ಥಗಿತಗೊಳಿಸಿದ ಕಾಂಗ್ರೆಸ್
ರಾಮನಗರ, ಜನವರಿ 13; ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ 'ನಮ್ಮ ನೀರು ನಮ್ಮ ಹಕ್ಕು' ಪಾದಯಾತ್ರೆ ಸ್ಥಗಿತಗೊಂಡಿದೆ. ಭಾರೀ ಒತ್ತಡದ ಹಿನ್ನಲೆಯಲ್ಲಿ ಪಾದಯಾತ್ರೆ ಸ್ಥಗಿತಗೊಳಿಸಲು ಕಾಂಗ್ರೆಸ್ ನಾಯಕರು ತೀರ್ಮಾನ ಮಾಡಿದ್ದಾರೆ.
ಗುರುವಾರ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾದಯಾತ್ರೆ ಸ್ಥಗಿತಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಲಿದ್ದಾರೆ.
ಸರ್ಕಾರದ ನಿರ್ಬಂಧ ನಡುವೆಯೂ ಮೇಕೆದಾಟು ಪಾದಯಾತ್ರೆ ಮುಂದುವರೆಸುತ್ತೇವೆ; ಡಿ.ಕೆ. ಸುರೇಶ್
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾದಯಾತ್ರೆ ಮುಂದುವರೆಸುವ, ಮೊಟಕುಗೊಳಿಸುವ ಕುರಿತು ಚರ್ಚೆ ನಡೆಯಿತು.
ಕಾಂಗ್ರೆಸ್ ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ : ಆರಗ ಜ್ಞಾನೇಂದ್ರ ಮನವಿ
ಜನವರಿ 9ರಂದು ಮೇಕೆದಾಟುವಿನ ಸಂಗಮದಿಂದ ಆರಂಭವಾಗಿದ್ದ 11 ದಿನಗಳ ಪಾದಯಾತ್ರೆ 4 ದಿನ ಪೂರ್ಣಗೊಳಿಸಿದೆ. ರಾಮನಗರ ತಲುಪಿರುವ ಪಾದಯಾತ್ರೆ ಗುರುವಾರ ಆರಂಭವಾಗಿಲ್ಲ. ಒಟ್ಟು 160 ಕಿ. ಮೀ. ಪಾದಯಾತ್ರೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ ತಲುಪಬೇಕಿತ್ತು. ಗುರುವಾರ ರಾಮನಗರದಿಂದ ಬಿಡದಿ ತನಕ ಪಾದಯಾತ್ರೆ ನಡೆಯಬೇಕಿತ್ತು.
ಮೇಕೆದಾಟು ಪಾದಯಾತ್ರೆ: ಡಿಕೆಶಿ ರಾಜಕೀಯ ಗುರು ಎಸ್.ಎಂ. ಕೃಷ್ಣ ಬರೆದ ಪತ್ರದಲ್ಲೇನಿದೆ?
ಬುಧವಾರ ರಾತ್ರಿಯೇ ಕರ್ನಾಟಕ ಸರ್ಕಾರ ಪಾದಯಾತ್ರೆ ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ರಾಮನಗರ ಜಿಲ್ಲಾಡಳಿತ ಮತ್ತು ಪೊಲೀಸರು ಗುರುವಾರ ಪಾದಯಾತ್ರೆ ಆರಂಭವಾಗದಂತೆ ತಡೆಯಲು ಎಲ್ಲಾ ಕ್ರಮ ಕೈಗೊಂಡಿದ್ದರು. ಗುರುವಾರದ ಪಾದಯಾತ್ರೆ ಆರಂಭಗೊಂಡರೆ ಕಾಂಗ್ರೆಸ್ ನಾಯಕರನ್ನು ಬಂಧಿಸುವ ಸಾಧ್ಯತೆ ಇತ್ತು.
ಜನರ ಆರೋಗ್ಯದ ಹಿತದೃಷ್ಟಿಯಿಂದ, ವಿರೋಧ ಪಕ್ಷ ನಡೆಸುತ್ತಿರುವ ಪಾದಯಾತ್ರೆ ಕೈಬಿಟ್ಟು, ಒಗ್ಗಟ್ಟಿನಿಂದ ಸಾಂಕ್ರಾಮಿಕ ಎದುರಿಸಲು ಮತ್ತು ಮುಂಬರುವ ದಿನಗಳಲ್ಲಿ ಮೇಕೆದಾಟು ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಒಂದಾಗಿ ಮುನ್ನಡೆಯುವ ಕುರಿತಂತೆ ಮುಖ್ಯಮಂತ್ರಿ @BSBommai ಅವರಿಂದ ಮನವಿ; pic.twitter.com/QwYksRmXi0
— CM of Karnataka (@CMofKarnataka) January 13, 2022
ಪಾದಯಾತ್ರೆಗೆ ವಿರೋಧ; ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ನಡೆಸುತ್ತಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಪಾದಯಾತ್ರೆಯನ್ನು ನಿಲ್ಲಿಸಲು ಸರ್ಕಾರದಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆಯಾಗಿತ್ತು.
ಕರ್ನಾಟಕ ಹೈಕೋರ್ಟ್ ಪಾದಯಾತ್ರೆ ನಡೆಸಲು ಅನುಮತಿ ನೀಡಿದ ಸರ್ಕಾರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಮತ್ತು ಕೆಪಿಸಿಸಿಗೆ ನೋಟಿಸ್ ನೀಡಿತ್ತು. ಆದ್ದರಿಂದ ಬುಧವಾರ ರಾತ್ರಿ ಸರ್ಕಾರ ಪಾದಯಾತ್ರೆ ತಕ್ಷಣ ಸ್ಥಗಿತಗೊಳಿಸಲು ಆದೇಶ ಹೊರಡಿಸಿತ್ತು.
ಮತ್ತೆ ಪಾದಯಾತ್ರೆ ಆರಂಭ; ಕೋವಿಡ್ ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ಕಾಂಗ್ರೆಸ್ ಮೇಕದಾಟು ಪಾದಯಾತ್ರೆಯನ್ನು ಆರಂಭಿಸಲಿದೆ. ಎಲ್ಲಿ ಪಾದಯಾತ್ರೆ ಅಂತ್ಯಗೊಂಡಿದೆಯೋ ಅಲ್ಲಿಂದಲೇ ಮುಂದುವರೆಸಲು ತೀರ್ಮಾನಿಸಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಹ ಪಾದಯಾತ್ರೆ ನಿಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಗೆ ಕರೆ ಮಾಡಿದ್ದರು. ರಾಜ್ಯದ ಹಲವು ನಾಯಕರು ಸಹ ಪಾದಯಾತ್ರೆ ನಿಲ್ಲಿಸೋಣ, ಕೋವಿಡ್ ಪರಿಸ್ಥಿತಿ ಬಳಿಕ ಮುಂದುವರೆಸೋಣ ಎಂದು ಒತ್ತಾಯಿಸಿದ್ದರು.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಕಾಂಗ್ರೆಸ್ ನಾಯಕರಿಗೆ ಪತ್ರ ಬರೆದಿದ್ದರು. ಪಾದಯಾತ್ರೆ ನಿಲ್ಲಿಸಿ ಎಂದು ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮೊಟಕುಗೊಳಿಸಲು ತೀರ್ಮಾನ ಮಾಡಿದ್ದಾರೆ.
ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಬುಧವಾರ ರಾಜ್ಯದಲ್ಲಿ 21,390 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರದಲ್ಲಿಯೇ 15,617 ಹೊಸ ಪ್ರಕರಣ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಪಾದಯಾತ್ರೆ ಸೇರಿದಂತೆ ರಾಜಕೀಯ ಸಮಾವೇಶ, ಉತ್ಸವ, ಜಾತ್ರೆಗಳನ್ನು ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಗುರುವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬೆಂಗಳೂರಿನಿಂದ ರಾಮನಗರಕ್ಕೆ ಪ್ರಯಾಣ ಬೆಳೆಸಿದ್ದರು. ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದರು. ಸಭೆಯಲ್ಲಿಯೇ ಪಾದಯಾತ್ರೆ ಸ್ಥಗಿತಗೊಳಿಸುವ ತೀರ್ಮಾನ ಮಾಡಿದ್ದಾರೆ.
ಭಾನುವಾರ ಪಾದಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೋವಿಡ್ ಸೋಂಕು ತಗುಲಿದೆ.
Recommended Video