ಮತ್ತೆ ಸುದ್ದಿಯ ಕೇಂದ್ರಬಿಂದುವಾದ ಕನಕಪುರದ ವಿವಾದಿತ ಕಪಾಲ ಬೆಟ್ಟ
ರಾಮನಗರ, ಜೂನ್ 25: ಕನಕಪುರದ ಹಾರೋಬೆಲೆಯಲ್ಲಿರುವ ವಿವಾದಿತ ಕಪಾಲ ಬೆಟ್ಟದಲ್ಲಿ ನಾಳೆ ಕ್ರೈಸ್ತ ಸಮುದಾಯ ಹಮ್ಮಿಕೊಂಡಿರುವ ಗುಡ್ ಫ್ರೈಡೇ ಧಾರ್ಮಿಕ ಸಭೆ ಮತ್ತು ಅಕ್ರಮ ಕಾಮಗಾರಿಯನ್ನು ರದ್ದು ಮಾಡುವಂತೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಕ್ರೈಸ್ತ ಸಮುದಾಯ ವಿಶ್ವದ ಅತಿ ಎತ್ತರದ ಏಸು ಪ್ರತಿಮೆ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಪ್ರಕರಣ ಕಳೆದ ಆರು ತಿಂಗಳುಗಳಿಂದ ತಣ್ಣಗಾಗಿತ್ತು. ಗುಡ್ ಫ್ರೈಡೇ ಹಿನ್ನೆಲೆಯಲ್ಲಿ ಮತ್ತೆ ಕಪಾಲ ಬೆಟ್ಟ ಸುದ್ದಿಯ ಕೇಂದ್ರ ಬಿಂದುವಾಗಿದೆ.
ಏಸು ಪ್ರತಿಮೆ ನಿರ್ಮಾಣ: ಫೆ. 25 ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ
ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಹಲವು ಹೋರಾಟಗಳು ನಡೆದರೂ ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವೇದಿಕೆಯ ಕಾರ್ಯಕರ್ತರು ಆರೋಪಿಸಿದ್ದಾರೆ. ಕೆಲ ದಿನಗಳಿಂದ ಕದ್ದುಮುಚ್ಚಿ ಪ್ರತಿಮೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಕಣ್ಣು ಮುಚ್ಚಿ ಕುಳಿತಿವೆ. ಅಲ್ಲದೇ ಕೊರೊನಾ ವೈರಸ್ ಹರಡುತ್ತಿರುವ ಸಂಕಷ್ಟದ ಸಮಯದಲ್ಲಿ ಧಾರ್ಮಿಕ ಸಭೆಗೆ ಅನುಮತಿ ಕೊಟ್ಟಿದ್ದು ಸರಿಯಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ತಕ್ಷಣವೇ ಕಪಾಲ ಬೆಟ್ಟದಲ್ಲಿ ನಾಳೆ ಹಮ್ಮಿಕೊಂಡಿರುವ ಧಾರ್ಮಿಕ ಸಭೆಯನ್ನು ರದ್ದು ಮಾಡಬೇಕು, ಪ್ರಾರಂಭವಾಗಿರುವ ಕಾಮಗಾರಿಗೆ ತಡೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.