ಮರಳು ಲೂಟಿಕೋರರ ಹಾವಳಿಗೆ ಸೇತುವೆ ಬಲಿ: 25 ಗ್ರಾಮಗಳ ಸಂಪರ್ಕ ಕಡಿತ
ರಾಮನಗರ, ಜೂನ್. 20: ಭ್ರಷ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿ, ಮರಳು ಲೂಟಿಕೋರರ ಹಾವಳಿ ಪರಿಣಾಮ ರಾಮನಗರದ ತಾಲೂಕಿನ ಕೂಟಗಲ್ ಸಮೀಪ ಕಣ್ವ ನದಿಗೆ ಅಡ್ಡವಾಗಿ ನಿರ್ಮಿಸಿದ್ದ ಸೇತುವೆ ಕುಸಿದಿದ್ದು, 25ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
ರಾಮನಗರದಿಂದ ಕೂಟಗಲ್, ಯರೇಹಳ್ಳಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಸ್ತೆ ಈ ಸೇತುವೆ ಮೂಲಕ ಹಾದು ಹೋಗುತ್ತದೆ. ಸತತ ಮಳೆಯಿಂದ ಕಣ್ವ ನದಿಯಲ್ಲಿ ನೀರಿನ ಹರಿವು ಪುನಾರಂಭಗೊಂಡಿತ್ತು. ಸೋಮವಾರ ಬೆಳಗ್ಗೆ ಸೇತುವೆ ಇದ್ದಕ್ಕಿದ್ದಂತೆ ಕುಸಿದಿದೆ.
ಅಕ್ರಮ ಮರಳು ದಾಸ್ತಾನು ಬಚ್ಚಿಟ್ಟ ಆರೋಪ : 3 ಜನ ಪೊಲೀಸ್ ಸಸ್ಪೆಂಡ್
ಸದರಿ ಸೇತುವೆ ನಿರ್ಮಾಣ 1984ರಲ್ಲಿ ಆಗಿದೆ. ಆಗ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ.ದೇವೇಗೌಡ ಅವರು ಸೇತುವೆ ನಿರ್ಮಾಣ ಮಾಡಿದ್ದರು. ಕಳೆದೆರಡು ದಶಕದಿಂದ ಮಿತಿ ಮೀರಿದ ಅಕ್ರಮ ಮರಳು ದಂಧೆಯ ಪರಿಣಾಮ ಸೇತುವೆ ಶಿಥಿಲಾವಸ್ಥೆಗೆ ತಲುಪಿತ್ತು. ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ವಾಹನಗಳ ಸಂಚಾರ ಶಿಥಿಲವಾದ ಸೇತುವೆಯಲ್ಲೇ ಮುಂದುವರೆದಿತ್ತು.
ಈ ಸೇತುವೆ ಸಮೀಪವೇ ಮರಳು ಲೂಟಿಕೋರರು ಸುಮಾರು 30 ಅಡಿಯಷ್ಟು ಆಳಕ್ಕೆ ಬಗೆದಿದ್ದರು. ಹಳೆಯದಾದ ಸೇತುವೆ ದಿನದಿಂದ ದಿನಕ್ಕೆ ಶಿಥಿಲಾವಸ್ಥೆಗೆ ತಲುಪಿತು. ಸೇತುವೆಗೆ ತಡೆಗೋಡೆ ನಿರ್ಮಾಣದ ನೆಪದಲ್ಲಿ ಹಣ ಲೂಟಿಯೂ ನಡೆದಿದೆ. ತಡೆಗೋಡೆ ನಿರ್ಮಾಣವೇ ಸೇತುವೆಗೆ ಕಂಟಕವಾಯಿತೇ ಎನ್ನುವ ಅನುಮಾನವೂ ಮೂಡಿದೆ.
ಸೇತುವೆಯಿಂದ 10 ಅಡಿ ದೂರದಲ್ಲಿ ತಡೆಗೋಡೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಒಂದಷ್ಟು ಸೈಜು ಕಲ್ಲುಗಳನ್ನು ತಂದು, ಅಲ್ಲೇ ಇದ್ದ ಮರಳಿನೊಂದಿಗೆ ಸಿಮೆಂಟ್ ಮಿಶ್ರಣ ಮಾಡಿ ತಡೆಗೋಡೆ ನಿರ್ಮಿಸಲಾಗಿತ್ತು. ಸಾಧಾರಣ ಮಳೆಗೆ ತಡೆಗೋಡೆ ಕೊಚ್ಚಿ ಹೋಗಿತ್ತು.
ಮತ್ತೆ 8 ಲಕ್ಷ ರು. ಅಂದಾಜು ವೆಚ್ಚದಲ್ಲಿ ತಡೆಗೋಡೆ ಪುನರ್ ನಿರ್ಮಾಣ ಕಾಮಗಾರಿಯನ್ನು ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ವಹಿಸಲಾಗಿತ್ತು. ಕೆಲ ದಿನಗಳಿಂದ ಸುರಿದ ಸಾಧರಣ ಮಳೆಗೆ ಬಂದ ನೀರು ಸೇತುವೆಯ ಅಡಿಪಾಯಕ್ಕೆ ಆಸರೆಯಾಗಿದ್ದ ಮರಳನ್ನು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸೇತುವೆ ಕುಸಿತಗೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸೇತುವೆಯ ಅಡಿಪಾಯ ಸಡಿಲಗೊಂಡ ಪರಿಣಾಮ 15 ದಿನಗಳ ಹಿಂದೆಯೇ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು. ಮಾಹಿತಿ ಬಂದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿಲ್ಲ. ರಿಪೇರಿ ಮಾಡುವ ಗೋಜಿಗೂ ಹೋಗಿಲ್ಲ. ಶಿಥಿಲಗೊಂಡಿರುವ ಸೇತುವೆ ಮೇಲೆಯೇ ವಾಹನಗಳ ಸಂಚಾರ ಮುಂದುವರೆದಿತ್ತು.
ಕೂಟಗಲ್ ಬಳಿಯ ಕಣ್ವ ನದಿ ಸೇತುವೆ ಕುಸಿದು ಬಿದ್ದಿರುವುದು ನಿಜಕ್ಕೂ ಕಳಪೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು, ಅಕ್ರಮದಲ್ಲಿ ತೊಡಗಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಮರಳು ಮಾಫಿಯಾಕ್ಕೆ ಶರಣಾಗಿರುವ ರಾಮನಗರ ಜಿಲ್ಲಾಡಳಿತಕ್ಕೆ ಎಚ್ಚರಿಕೆಯ ಗಂಟೆಯೇ ಸರಿ.
ಮರಳು ಲೂಟಿಗೆ ಕಡಿವಾಣ ಹಾಕದಿದ್ದಲ್ಲಿ ಜಿಲ್ಲೆಯ ಇನ್ನೆಷ್ಟು ಸೇತುವೆಗಳು ಕುಸಿಯಲಿವೆ. ಸೇತುವೆ ಕುಸಿದ ಪರಿಣಾಮ ಸುಮಾರು 25 ಕ್ಕೂ ಹೆಚ್ಚು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ತಕ್ಷಣವೇ ತಮಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇನ್ನೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಮಾಗಡಿ ಶಾಸಕ ಎ.ಮಂಜುನಾಥ್ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದಾಗಿ ಹತ್ತಾರು ಗ್ರಾಮಗಳ ಪ್ರಯಾಣಿಕರಿಗೆ ಇಂದು ತೊಂದರೆ ಎದುರಾಗಿದೆ.
ಕೂಡಲೇ ಬದಲಿ ವ್ಯವಸ್ಥೆ ಕಲ್ಪಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳು ಸೂಚಿಸಿದರು.