ಕನಕಪುರ: 'ಕೆಲಸಕ್ಕೆ ಹಾಜರಾಗಿ, ಇಲ್ಲವೇ ಮನೆ ಖಾಲಿ ಮಾಡಿ'; ಸಾರಿಗೆ ಇಲಾಖೆ ನೋಟಿಸ್
ರಾಮನಗರ, ಏಪ್ರಿಲ್ 8: ಸಾರಿಗೆ ನೌಕರರ ಮುಷ್ಕರ ಎರಡನೇ ದಿನವೂ ಮುಂದುವರಿದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನೌಕರರ ಮೇಲೆ ಒತ್ತಡದ ಅಸ್ತ್ರ ಪ್ರಯೋಗಿಸಿದ್ದಾರೆ. ನಿಗಮದ ವಸತಿ ಗೃಹದಲ್ಲಿ ವಾಸವಿರುವ ನೌಕರರನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ರಾಮನಗರ ಜಿಲ್ಲೆ ಕನಕಪುರದ ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳು ಸಾರಿಗೆ ನೌಕರರಿಗೆ ಎಚ್ಚರಿಕೆ ನೋಟಿಸ್ ನೀಡಿದ್ದಾರೆ.
ಮಂಗಳೂರು: ಸಾರಿಗೆ ನೌಕರರನ್ನು ಕೂಡಿ ಹಾಕಿ ದೌರ್ಜನ್ಯ; ನಿರ್ವಾಹಕನ ಆರೋಪ
ಸಾರಿಗೆ ಇಲಾಖೆ ಕ್ವಾಟರ್ಸ್ ನಲ್ಲಿ ವಾಸಿಸುತ್ತಿದ್ದ ಸುಮಾರು 24 ಸಾರಿಗೆ ನೌಕರರ ಮನೆಗಳಿಗೆ "ಕೆಲಸಕ್ಕೆ ಹಾಜರಾಗಿ, ಇಲ್ಲವೇ ಮನೆ ಖಾಲಿ ಮಾಡಿ' ಎಂಬ ನೋಟಿಸ್ ಅನ್ನು ಮನೆಯ ಬಾಗಿಲಿಗೆ ಅಂಟಿಸಿದ್ದಾರೆ.
ನೋಟಿಸ್ ನಲ್ಲಿ ಏನಿದೆ?
ಕನಕಪುರ ಬಸ್ ಘಟಕ ನಿಮಗೆ ಅವಶ್ಯಕತೆ ಮತ್ತು ವರಿಷ್ಟತೆಯನ್ನು ಪರಿಗಣಿಸಿ ವಸತಿಗೃಹ ಸಂಖ್ಯೆ-19 ಅನ್ನು ಹಂಚಿಕೆ ಮಾಡಲಾಗಿದ್ದು, ನಿಗಮದ ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗದಿರುವುದು ವಿಷಾದನೀಯವಾಗಿರುತ್ತದೆ.
ನಿಗಮದ ವಸತಿಗೃಹವನ್ನು ಕರ್ನಾಟಕ ಸಾರ್ವಜನಿಕ ಸ್ವತ್ತು ಕಾಯಿದೆ 1974ಕ್ಕೆ ಒಳಪಟ್ಟಂತೆ ಹಂಚಿಕೆ ಮಾಡಲಾಗಿದ್ದು, ಸಾರ್ವಜನಿಕ ಸೇವೆ ಅಗತ್ಯ ಬಿದ್ದಲ್ಲಿ ಹಾಜರಾಗುವುದು ತಮ್ಮ ಆದ್ಯ ಕರ್ತವ್ಯ ಆಗಿರುತ್ತದೆ.
ದಿನಾಂಕ 07.04.2021ರಂದು ತಾವು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರಕ್ಕೆ ಬೆಂಬಲ ನೀಡಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ತಾವು ಈ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಒಂದು ವೇಳೆ ಸದರಿ ತಿಳುವಳಿಕೆ ಪತ್ರ ತಲುಪಿಯೂ ಸಹ ತಾವು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ತಮ್ಮ ಮೇಲೆ ಸೂಕ್ತ ಶಿಸ್ತಿನ ಕ್ರಮ ಜರುಗಿಸುವುದರೊಂದಿಗೆ, ವಸತಿಗೃಹ ಹಂಚಿಕೆ ಆದೇಶವನ್ನು ರದ್ದುಗೊಳಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು
ಈ ಮೂಲಕ ತಿಳಿಯಪಡಿಸಿದೆ ಎಂದು ಕನಕಪುರ ಬಸ್ ಘಟಕ ನೋಟಿಸ್ ಜಾರಿ ಮಾಡಿದೆ.
Recommended Video